ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳ ಸ್ಥಿತಿಗತಿ ಹಾಗೂ ನೌಕರರ ಸಮಸ್ಯೆಗಳ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವೆ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಟೀಕೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಂಕಿ-ಅಂಶಗಳ ಸಮೇತ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
“ಸಾರಿಗೆ ಸಂಸ್ಥೆಯ ಇಂದಿನ ಸ್ಥಿತಿಗೆ ಬಿಜೆಪಿಯೇ ಹೊಣೆ”
“ಬಿ.ವೈ. ವಿಜಯೇಂದ್ರ ಅವರೇ, ನಿಮ್ಮ ಈ ನಕಲಿ ಕಾಳಜಿಯ ಮುಖವಾಡವನ್ನು ಮೊದಲು ಕಳಚಿಡಿ” ಎಂದು ಲೇವಡಿ ಮಾಡಿರುವ ಸಚಿವರು, ಸಾರಿಗೆ ಸಂಸ್ಥೆಗಳು ಇವತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ ಅದಕ್ಕೆ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದ ಅದಕ್ಷ ಆಡಳಿತವೇ ನೇರ ಕಾರಣ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
@BYVijayendra ಅವರೇ,
ನಿಮ್ಮ ಈ ನಕಲಿ ಕಾಳಜಿಯ ಮುಖವಾಡವನ್ನು ಕಳಚಿಡಿ.
ಸಾರಿಗೆ ಸಂಸ್ಥೆ ಇವತ್ತು ಈ ಸ್ಥಿತಿಗೆ ತಲುಪಲು ನಿಮ್ಮ ಪೂಜ್ಯ ತಂದೆ ಶ್ರೀ @BSYBJP ಮತ್ತು @BSBommai ಯವರ ಕಾಲದ ಅದಕ್ಷ ಆಡಳಿತವೇ ನೇರ ಕಾರಣ.
ಅಂದು ಅಧಿಕಾರದ ಅಮಲಿನಲ್ಲಿ ನೌಕರರ ಹೊಟ್ಟೆಯ ಮೇಲೆ ಹೊಡೆದ ನೀವು, ಇಂದು ಯಾವ ಮುಖ ಇಟ್ಟುಕೊಂಡು ಉಪದೇಶ…
— Ramalinga Reddy (@RLR_BTM) April 22, 2026
ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಘಟನೆಗಳನ್ನು ಸಚಿವರು ಈ ಕೆಳಗಿನಂತೆ ಪಟ್ಟಿ ಮಾಡಿದ್ದಾರೆ:
-
ದಾಖಲೆಯ ಮುಷ್ಕರ: ಸಾರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ 15 ದಿನಗಳ ಕಾಲ ಸತತ ಮುಷ್ಕರ ನಡೆಯಲು ಮತ್ತು ತಿಂಗಳ ಕಾಲ ಮುಷ್ಕರಕ್ಕೆ ಅಡಿಪಾಯ ಹಾಕಿದ್ದು ಬಿಜೆಪಿ ಸರ್ಕಾರ.
-
ನೌಕರರ ಮೇಲೆ ದೌರ್ಜನ್ಯ: ಮುಷ್ಕರದ ಹೆಸರಿನಲ್ಲಿ ಸುಮಾರು 3,500 ನೌಕರರನ್ನು ಕೆಲಸದಿಂದ ವಜಾ ಮಾಡಿ, ಅಮಾನತುಗೊಳಿಸಿ FIR ಹಾಕಿಸಲಾಗಿತ್ತು. ಆ ನೌಕರರು ಇಂದಿಗೂ ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ.
-
ವೇತನ ವಿಳಂಬ: ನಿಮ್ಮ ಅವಧಿಯಲ್ಲಿ ಸಂಬಳವನ್ನು ಮುಂದಿನ ತಿಂಗಳಿಗೆ ಬಾಕಿ ಇರಿಸಲಾಗುತ್ತಿತ್ತು ಅಥವಾ ಅರ್ಧ ಸಂಬಳ ನೀಡಲಾಗುತ್ತಿತ್ತು ಎಂಬುದು ದಾಖಲೆಗಳಲ್ಲಿದೆ.
-
ವಿಳಂಬಿತ ವೇತನ ಪರಿಷ್ಕರಣೆ: 2020ರಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆಯನ್ನು 38 ತಿಂಗಳು ತಡವಾಗಿ ಅಂದರೆ 2023ರ ಮಾರ್ಚ್ನಲ್ಲಿ ಮಾಡಿದ್ದೀರಿ. ಈಗ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ರೆಡ್ಡಿ ಗುಡುಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ‘ಕಾಯಕಲ್ಪ’ ವರದಿ
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ಸಂಸ್ಥೆಗಳನ್ನು ಹೇಗೆ ಪುನಶ್ಚೇತನಗೊಳಿಸಲಾಗಿದೆ ಎಂಬ ಅಂಕಿ-ಅಂಶಗಳನ್ನು ಸಚಿವರು ಬಿಡುಗಡೆ ಮಾಡಿದ್ದಾರೆ:
| ಕಾರ್ಯಕ್ರಮ | ಬಿಜೆಪಿಯ ಶೂನ್ಯ ಸಾಧನೆ (2019-23) | ಕಾಂಗ್ರೆಸ್ ಸರ್ಕಾರದ ಸಾಧನೆ |
| ಹೊಸ ನೇಮಕಾತಿ | ಶೂನ್ಯ ನೇಮಕಾತಿ | 10,471 ಹುದ್ದೆಗಳ ನೇಮಕಾತಿ |
| ಹೊಸ ಬಸ್ಸುಗಳ ಸೇರ್ಪಡೆ | ಹೊಸ ಬಸ್ಸುಗಳಿಲ್ಲ | 7,800 ಹೊಸ ಬಸ್ಸುಗಳ ಸೇರ್ಪಡೆ |
| ಬಸ್ಸುಗಳ ಪುನಶ್ಚೇತನ | ಹಳೆಯ ಬಸ್ಸುಗಳ ನಿಷ್ಕ್ರಿಯ | 2,109 ಬಸ್ಸುಗಳ ಪುನಶ್ಚೇತನ |
| ಬಾಕಿ ಹಣ ಪಾವತಿ | – | ನಿವೃತ್ತ ಸಿಬ್ಬಂದಿಗೆ ₹223 ಕೋಟಿ ಪಾವತಿ |
ಸಾಲದ ಹೊರೆ ಇಳಿಸಿದ ರಾಜ್ಯ ಸರ್ಕಾರ
ಬಿಜೆಪಿ ಸರ್ಕಾರವು 2019-2023ರ ಅವಧಿಯಲ್ಲಿ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಸೇರಿದಂತೆ ಸುಮಾರು ₹4,900 ಕೋಟಿ ಹೊಣೆಗಾರಿಕೆಯನ್ನು ಬಾಕಿ ಉಳಿಸಿತ್ತು. ಈ ಪೈಕಿ ₹2,000 ಕೋಟಿ ಸಾಲ ಪಡೆಯಲು ಅನುಮತಿಸಿರುವ ಸಿದ್ದರಾಮಯ್ಯ ಸರ್ಕಾರ, ಅದರ ಅಸಲು ಮತ್ತು ಬಡ್ಡಿಯನ್ನು ತಾನೇ ಪಾವತಿಸುತ್ತಿದೆ. ಅಲ್ಲದೆ, ₹1219.23 ಕೋಟಿ ಮೋಟಾರು ವಾಹನ ತೆರಿಗೆಗೆ ವಿನಾಯಿತಿ ನೀಡುವ ಮೂಲಕ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತಿದ್ದೇವೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದ್ದಾರೆ.
“ಇನ್ನಾದರೂ ಜನರನ್ನು ದಾರಿ ತಪ್ಪಿಸುವ ಪೊಳ್ಳು ಹಾರಾಟ ನಿಲ್ಲಿಸಿ, ನಿಮ್ಮ ಕಾಲದ ಅಧಃಪತನಕ್ಕೆ ಮೊದಲು ಉತ್ತರ ಕೊಡಿ” ಎಂದು ಸಚಿವರು ವಿಜಯೇಂದ್ರ ಅವರಿಗೆ ಸವಾಲು ಹಾಕಿದ್ದಾರೆ.
SHOCKING: ರಾಜ್ಯದಲ್ಲೊಂದು ಭೀಕರ ರಸ್ತೆ ಅಪಘಾತ: ಡಿಕ್ಕಿ ರಭಸಕ್ಕೆ ಬೇರೆ ಬೇರೆಯಾದ ವ್ಯಕ್ತಿಯ ರುಂಡ-ಮುಂಡ
‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ: ಬೆಂಗಳೂರಿನಲ್ಲಿ ಘಾತುಕ ಪ್ರೇಯಸಿ ಪ್ರೇಮಾ ಅರೆಸ್ಟ್








