ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಇತ್ತೀಚೆಗಷ್ಟೇ ದೇವಸ್ಥಾನದಲ್ಲಿ ಮಚ್ಚು (ಮಾರಕಾಸ್ತ್ರ) ಇಟ್ಟು ಪೂಜೆ ಮಾಡಿಸಿದ್ದ ವಿಶ್ವ ಎಂಬ ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಭೀಕರವಾಗಿ ಡೆಡ್ಲಿ ಅಟ್ಯಾಕ್ ನಡೆಸಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಭದ್ರಾವತಿ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಭದ್ರಾವತಿಯ ಹಳದಮ್ಮ ಬೀದಿಯ ನಿವಾಸಿಯಾದ ವಿಶ್ವ ಎಂಬಾತನೇ ಈ ದಾಳಿಗೆ ಒಳಗಾದ ಯುವಕ. ಈತ ಅನ್ವರ್ ಕಾಲೋನಿ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ಈತನನ್ನು ಅಡ್ಡಗಟ್ಟಿದೆ. ತದನಂತರ ಕಾರಿನಿಂದ ಇಳಿದ ಗೂಂಡಾಗಳು ಮಚ್ಚು, ಲಾಂಗ್ಗಳಂತಹ ಮಾರಕಾಸ್ತ್ರಗಳಿಂದ ವಿಶ್ವನ ಕೈ ಹಾಗೂ ಕಾಲುಗಳನ್ನು ಕತ್ತರಿಸಿ ಹಾಕುವ ಕ್ರೂರ ಉದ್ದೇಶದಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಮಚ್ಚು ಪೂಜೆ ಮಾಡಿಸಿದ್ದ ವಿಶ್ವ!
ಗಾಯಾಳು ವಿಶ್ವ ಕೆಲವು ತಿಂಗಳ ಹಿಂದೆಯಷ್ಟೇ ಸ್ಥಳೀಯ ದೇವಾಲಯವೊಂದರಲ್ಲಿ ಮಚ್ಚು ಇಟ್ಟು ವಿಶೇಷ ಪೂಜೆ ಮಾಡಿಸಿದ್ದ ಎನ್ನಲಾಗಿದೆ. ಈ ವಿಡಿಯೋ ಅಥವಾ ಫೋಟೋಗಳು ಈ ಹಿಂದೆ ಹರಿದಾಡಿದ್ದವು. ಇದೀಗ ಆತ ಪೂಜೆ ಮಾಡಿಸಿದ್ದ ಮಚ್ಚುಗಳಿಗಿಂತ ಭೀಕರವಾಗಿ ದುಷ್ಕರ್ಮಿಗಳು ಆತನ ಮೇಲೆಯೇ ದಾಳಿ ನಡೆಸಿ ರಕ್ತದ ಮಡುವಿನಲ್ಲಿ ಕೆಡವಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ವಿಶ್ವನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ರಾಜಕೀಯ ತಿಕ್ಕಾಟ ಹಾಗೂ ಇಸ್ಪೀಟ್ ದಂಧೆ ಲಿಂಕ್
ಈ ದಾಳಿಯ ಹಿಂದೆ ಭದ್ರಾವತಿಯ ರಾಜಕೀಯ ವೈಷಮ್ಯ ಹಾಗೂ ಅಕ್ರಮ ಚಟುವಟಿಕೆಗಳ ಲಿಂಕ್ ಇರುವುದು ಬೆಳಕಿಗೆ ಬಂದಿದೆ. ಭದ್ರಾವತಿಯಲ್ಲಿ ದೀರ್ಘಕಾಲದಿಂದಲೂ ಅಕ್ರಮ ಇಸ್ಪೀಟ್ ಕ್ಲಬ್ ಹಾಗೂ ಇತರೆ ಅಕ್ರಮ ದಂಧೆಗಳು ನಡೆಯುತ್ತಿದ್ದು, ಈ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿತ್ತು. ಇದೇ ಇಸ್ಪೀಟ್ ದಂಧೆಯ ವಿಚಾರವಾಗಿ ಕಳೆದ ಒಂದು ವರ್ಷದ ಹಿಂದೆಯೂ ವಿಶ್ವನ ಮೇಲೆ ಒಮ್ಮೆ ಕೊಲೆ ಯತ್ನ ನಡೆದಿತ್ತು. ಆಗ ಆತ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದ, ಆದರೆ ಈ ಬಾರಿ ದುಷ್ಕರ್ಮಿಗಳು ಆತನನ್ನು ಟಾರ್ಗೆಟ್ ಮಾಡಿ ಎರಡನೇ ಬಾರಿ ಡೆಡ್ಲಿ ಅಟ್ಯಾಕ್ ನಡೆಸಿದ್ದಾರೆ.
ಶಾಸಕರ ಪುತ್ರನ ಆಪ್ತನ ಮೇಲೆ ಜೆಡಿಎಸ್ ಗೂಂಡಾಗಳ ದಾಳಿ?
ಪ್ರಸ್ತುತ ನಡೆದಿರುವ ಈ ದಾಳಿಗೆ ರಾಜಕೀಯ ಬಣ್ಣವೂ ಬಳಿದುಕೊಂಡಿದೆ. ಗಾಯಾಳು ವಿಶ್ವ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಅವರ ಅತ್ಯಂತ ಆಪ್ತ ಗೆಳೆಯ ಎನ್ನಲಾಗಿದೆ. ಈ ರಾಜಕೀಯ ಮುನಿಸು ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲೇ ಜೆಡಿಎಸ್ ಪಕ್ಷದ ಗೂಂಡಾಗಳು ಸಂಚು ರೂಪಿಸಿ ವಿಶ್ವನ ಮೇಲೆ ಈ ಮಾರಣಾಂತಿಕ ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಪೊಲೀಸ್ ತನಿಖೆ ಚುರುಕು: ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಬಂದು ತಲ್ವಾರ್ಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಆ ನಾಲ್ವರು ದುಷ್ಕರ್ಮಿಗಳು ಯಾರು? ಅವರ ಹಿನ್ನೆಲೆ ಏನು? ಎಂಬುದರ ಕುರಿತು ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಭದ್ರಾವತಿಯಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.








