ಲಿವ್-ಇನ್ ಜೋಡಿಗೆ ಪೊಲೀಸ್ ರಕ್ಷಣೆ ನೀಡಲು ನಿರಾಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಭಾರತೀಯ ಸಮಾಜದ ಒಂದು ವರ್ಗವು ಲಿವ್-ಇನ್ ಸಂಬಂಧಗಳನ್ನು “ಆಧುನಿಕ ಜೀವನಶೈಲಿ” ಎಂದು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದ್ದರೂ, ಮನೆಬಿಟ್ಟು ಓಡಿಹೋಗುವ ಮಕ್ಕಳು ತಮ್ಮ ಕುಟುಂಬಗಳಿಗೆ “ಕೆಟ್ಟ ಹೆಸರು” ತರಬಹುದು ಮತ್ತು ಅವರ ಹೆತ್ತವರ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರಬಹುದು ಎಂದು ಅವಲೋಕಿಸಿದೆ.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸಂದೀಪ್ ಮೌದ್ಗಿಲ್ ಅವರು, ಕೇವಲ ಕೆಲವು ದಿನಗಳ ಕಾಲ ಒಟ್ಟಿಗೆ ವಾಸಿಸುವುದು ನಿಜವಾದ ಲಿವ್-ಇನ್ ಸಂಬಂಧವನ್ನು ಸ್ಥಾಪಿಸಲು ಸಾಕಾಗುವುದಿಲ್ಲ, ಅದರಲ್ಲೂ ವಿಶೇಷವಾಗಿ ತಾವು ಭವಿಷ್ಯದಲ್ಲಿ ಮಾತ್ರ ಮದುವೆಯಾಗಲು ಉದ್ದೇಶಿಸಿರುವುದಾಗಿ ಅರ್ಜಿದಾರರೇ ಒಪ್ಪಿಕೊಂಡಿರುವಾಗ ಇದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇಂತಹ ಸಂದರ್ಭಗಳಲ್ಲಿ ಪೊಲೀಸ್ ರಕ್ಷಣೆ ನೀಡುವುದು ಪರೋಕ್ಷವಾಗಿ ಒಂದು “ಅಕ್ರಮ ಸಂಬಂಧ”ಕ್ಕೆ ನ್ಯಾಯಾಂಗದ ಅನುಮೋದನೆ ನೀಡಿದಂತಾಗುತ್ತದೆ ಎಂದು ನ್ಯಾಯಾಲಯ ಗಮನಿಸಿದೆ.
”ಭಾರತದ ಸಂವಿಧಾನದ ವಿಧಿ 21 ರ ಅಡಿಯಲ್ಲಿ ಖಾತರಿಪಡಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಪರಿಕಲ್ಪನೆಯು ಘನತೆಯಿಂದ ಬದುಕುವ ಹಕ್ಕನ್ನು ಒಳಗೊಂಡಿದೆ. ಆದರೆ ಅರ್ಜಿದಾರರು ತಮ್ಮ ಹೆತ್ತವರ ಮನೆಯಿಂದ ಓಡಿಹೋಗುವ ಮೂಲಕ ಕುಟುಂಬಕ್ಕೆ ಕೆಟ್ಟ ಹೆಸರು ತರುತ್ತಿರುವುದು ಮಾತ್ರವಲ್ಲದೆ, ಹೆತ್ತವರ ಘನತೆ ಮತ್ತು ಗೌರವದಿಂದ ಬದುಕುವ ಹಕ್ಕನ್ನು ಸಹ ಉಲ್ಲಂಘಿಸುತ್ತಿದ್ದಾರೆ,” ಎಂದು ಜೂನ್ 5 ರ ಆದೇಶದಲ್ಲಿ ಹೇಳಲಾಗಿದೆ.
ನಮ್ಮ ದೇಶವು ತನ್ನ ಆಳವಾದ ಸಾಂಸ್ಕೃತಿಕ ಬೇರುಗಳೊಂದಿಗೆ, ನೈತಿಕತೆ ಮತ್ತು ಸದಾಚಾರದ ತಾರ್ಕಿಕತೆಗೆ ಹೆಚ್ಚಿನ ಮಹತ್ವ ನೀಡುತ್ತದೆ ಎಂದು ನ್ಯಾಯಮೂರ್ತಿ ಸಂದೀಪ್ ಮೌದ್ಗಿಲ್ ಉಲ್ಲೇಖಿಸಿದ್ದಾರೆ.
’ಮದುವೆ ಒಂದು ಪವಿತ್ರ ಸಂಬಂಧ’
ಭಾರತದ ಒಂದು ವರ್ಗವು ಆಧುನಿಕ ಜೀವನಶೈಲಿಯನ್ನು, ಅಂದರೆ ಲಿವ್-ಇನ್ ಸಂಬಂಧವನ್ನು ಅಳವಡಿಸಿಕೊಂಡಂತೆ ತೋರುತ್ತಿದೆ ಎಂದು ನ್ಯಾಯಾಲಯವು ಎತ್ತಿ ತೋರಿಸಿದೆ.
ಭಾರತವು ವೈವಿಧ್ಯಮಯ ತತ್ವಗಳು, ಸಂಪ್ರದಾಯಗಳು, ಆಚರಣೆಗಳು ಮತ್ತು ನಂಬಿಕೆಗಳನ್ನು ಹೊಂದಿರುವ ದೇಶವಾಗಿದ್ದು, ಇವುಗಳು ಪ್ರಮುಖ ಕಾನೂನು ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಮತ್ತಷ್ಟು ಬೆಟ್ಟು ಮಾಡಲಾಗಿದೆ.
ಮದುವೆ ಎಂಬುದು ಕಾನೂನಾತ್ಮಕ ಪರಿಣಾಮಗಳನ್ನು ಮತ್ತು ಉನ್ನತ ಸಾಮಾಜಿಕ ಗೌರವವನ್ನು ಹೊಂದಿರುವ ಒಂದು ಪವಿತ್ರ ಸಂಬಂಧವಾಗಿದೆ ಎಂದು ಸೇರಿಸಲಾಗಿದೆ.
ನಮ್ಮ ದೇಶವು ತನ್ನ ಆಳವಾದ ಸಾಂಸ್ಕೃತಿಕ ಬೇರುಗಳೊಂದಿಗೆ, ನೈತಿಕತೆ ಮತ್ತು ಸದಾಚಾರದ ತಾರ್ಕಿಕತೆಗೆ ಹೆಚ್ಚಿನ ಮಹತ್ವ ನೀಡುತ್ತದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.
ಆದಾಗ್ಯೂ, ಸಮಯ ಕಳೆದಂತೆ ಸಮಾಜವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದೆ, ಇದು ಭಾರತೀಯ ಸಂಸ್ಕೃತಿಗಿಂತ ಹತ್ತಾರು ಪಟ್ಟು ಭಿನ್ನವಾಗಿದೆ ಎಂದು ನ್ಯಾಯಾಲಯವು ಬೆಟ್ಟು ಮಾಡಿದೆ.
ಸಂವಿಧಾನದ ವಿಧಿ 21 ರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಶಾಂತಿ, ಘನತೆ ಮತ್ತು ಗೌರವದಿಂದ ಬದುಕುವ ಹಕ್ಕಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಕೀರ್ತಿ ಅಥವಾ ಮರ್ಯಾದೆಯನ್ನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು ಮತ್ತಷ್ಟು ಉಲ್ಲೇಖಿಸಲಾಗಿದೆ.
ಸಂವಿಧಾನದ ವಿಧಿ 21 ಮೂಲಭೂತ ಹಕ್ಕುಗಳನ್ನು ಅತ್ಯುನ್ನತ ಸ್ಥಾನದಲ್ಲಿರಿಸುತ್ತದೆ ಮತ್ತು ಸಾಂವಿಧಾನಿಕ ಚೌಕಟ್ಟಿನಡಿಯಲ್ಲಿ ಇದು ಪವಿತ್ರವಾಗಿರುವುದರಿಂದ ಇದನ್ನು ರಕ್ಷಿಸಲೇಬೇಕು ಎಂದು ಕೋರ್ಟ್ ಹೇಳಿದೆ.
ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿರುವ ಜೋಡಿಗಳಿಗೆ ರಕ್ಷಣೆ ನೀಡಲು ನ್ಯಾಯಾಲಯವು ನಿರಾಕರಿಸಿದ ಹಲವಾರು ಪ್ರಕರಣಗಳಿವೆ ಎಂದು ಸೇರಿಸಲಾಗಿದೆ.
ಇಂತಹ ರಕ್ಷಣೆಯನ್ನು ಕೋರಿದಂತೆ ಒಂದು ವೇಳೆ ಮಂಜೂರು ಮಾಡಿದರೆ, ಸಮಾಜದ ಇಡೀ ಸಾಮಾಜಿಕ ವ್ಯವಸ್ಥೆಯೇ ಏರುಪೇರಾಗುತ್ತದೆ ಎಂಬುದು ಇಂತಹ ನಿರಾಕರಣೆಗಳ ಹಿಂದಿನ ಆಧಾರವಾಗಿತ್ತು ಎಂಬುದನ್ನು ನ್ಯಾಯಾಲಯವು ಒತ್ತಿ ಹೇಳಿದೆ.
ಯುವಕನಿಗೆ ಇನ್ನೂ ಮದುವೆಯ ಕಾನೂನಾತ್ಮಕ ವಯಸ್ಸಾಗಿಲ್ಲ ಮತ್ತು ಆ ವಯಸ್ಸು ತಲುಪಿದ ನಂತರ ಅವನು ಯುವತಿಯನ್ನು ವಿವಾಹವಾಗಲಿದ್ದಾನೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ನಾವು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ
ಅರ್ಜಿದಾರರಿಬ್ಬರೂ 18 ವರ್ಷ ಮೇಲ್ಪಟ್ಟ ಪ್ರಾಯಸ್ಥರಾಗಿದ್ದು, ಅವಿವಾಹಿತರಾಗಿದ್ದಾರೆ ಎಂದು ವಾದಿಸಲಾಯಿತು. ಅರ್ಜಿದಾರರಿಬ್ಬರೂ ಪರಸ್ಪರ ಇಷ್ಟಪಡುತ್ತಿದ್ದು, ಪ್ರೀತಿಸುತ್ತಿದ್ದಾರೆ ಹಾಗೂ ಮದುವೆಯಾಗಲು ಬಯಸಿದ್ದಾರೆ ಮತ್ತು ಸದ್ಯಕ್ಕೆ ‘ಲಿವ್-ಇನ್ ಸಂಬಂಧ’ದಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಿಕೊಳ್ಳಲಾಗಿದೆ.
ಯುವತಿಯ ಕುಟುಂಬದವರು ತಮ್ಮ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ತಮಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಯುವಕನ ಸಹವಾಸವನ್ನು ತೊರೆಯುವಂತೆ ಅವಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸೇರಿಸಲಾಗಿದೆ. ಯುವತಿ ಒಂದು ವೇಳೆ ಯುವಕನನ್ನು ಬಿಟ್ಟು ಹೋಗದಿದ್ದರೆ, ಅವನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಯುವತಿಯ ಕುಟುಂಬದವರು ಬೆದರಿಕೆ ಹಾಕಿದ್ದಾರೆ ಎಂದೂ ಹೇಳಲಾಗಿದೆ.
ತಾವು ಮದುವೆಯಾಗುವವರೆಗೂ ಒಟ್ಟಿಗೆ ವಾಸಿಸಲು ಅರ್ಜಿದಾರರು ಬಯಸಿದ್ದು, ಈ ಹಿನ್ನೆಲೆಯಲ್ಲಿ ಜೂನ್ 1 ರಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಮನವಿ ಪತ್ರ ಸಲ್ಲಿಸಿದ್ದರು.
ಅರ್ಜಿದಾರರ ಪರವಾಗಿ ವಕೀಲ ಕೋಮಲ್ ಸಿಧು ಮತ್ತು ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಾಜೀವ್ ವರ್ಮಾ ಅವರು ವಾದ ಮಂಡಿಸಿದ್ದರು.








