ನವದೆಹಲಿ : ದೇಶದಲ್ಲಿ ವಿವಾಹ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕೇಂದ್ರ ಸರ್ಕಾರ ಹಲವು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವಿಚ್ಛೇದನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೋರ್ಟ್ ಮೆಟ್ಟಿಲೇರುತ್ತಿರುವ ಪ್ರಕರಣಗಳಲ್ಲಿ ದಂಪತಿಗಳ ನಡುವಿನ ವಿವಾದಗಳು ಮತ್ತು ವಿಚ್ಛೇದನ ಕೇಸ್ಗಳೇ ಹೆಚ್ಚಾಗಿವೆ. ಮದುವೆಯಾದ ವರ್ಷದೊಳಗೇ ಹಲವು ಜೋಡಿಗಳು ಬೇರೆಾಗುತ್ತಿದ್ದರೆ, ಇನ್ನು ಕೆಲವರು ಮಕ್ಕಳಾದ ಮೇಲೂ ಹಲವು ಕಾರಣಗಳಿಂದಾಗಿ ದೂರಾಗುತ್ತಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಕೋರ್ಟ್ ಮೂಲಕ ಪತ್ನಿಗೆ ಜೀವನಾಂಶ (Maintenance) ಕೊಡಿಸುವುದು ಸಾಮಾನ್ಯ. ಆದರೆ, “ವಿಚ್ಛೇದನದ ನಂತರ ಪತಿ ಮರಣ ಹೊಂದಿದರೆ, ಆತನ ಕುಟುಂಬಸ್ಥರಿಂದ ಅಥವಾ ವಾರಸುದಾರರಿಂದ ಮಾಜಿ ಪತ್ನಿ ಜೀವನಾಂಶ ಪಡೆಯಬಹುದೇ?” ಎಂಬ ದೊಡ್ಡ ಪ್ರಶ್ನೆ ಮತ್ತು ಗೊಂದಲ ಹಲವರಲ್ಲಿದೆ. ಇದಕ್ಕೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಒಂದು ಮಹತ್ವದ ತೀರ್ಪು ನೀಡಿದೆ.
ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ವಿಚ್ಛೇದನದ ನಂತರ ಪತಿ ಮರಣ ಹೊಂದಿದರೂ ಸಹ, ಆತನ ಆಸ್ತಿಯಿಂದ ಜೀವನಾಂಶವನ್ನು ಪಡೆಯುವ ಹಕ್ಕು ಮಾಜಿ ಪತ್ನಿಗೆ ಇರುತ್ತದೆ. ಪತಿಯ ಮರಣದ ನಂತರ ಆತನ ಕುಟುಂಬದ ಸದಸ್ಯರು ಅಥವಾ ಆಸ್ತಿಯ ವಾರಸುದಾರರು ಆತನ ಪಾಲಿನ ಆಸ್ತಿಯಿಂದ ಮಾಜಿ ಪತ್ನಿಗೆ ಜೀವನಾಂಶವನ್ನು ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನರೇನ್ ಗೋರೆಗಾಂವ್ಕರ್ ಎಂಬ ವ್ಯಕ್ತಿ 2012ರ ಮಾರ್ಚ್ನಲ್ಲಿ ಹಠಾತ್ತನೆ ಮರಣ ಹೊಂದಿದ್ದರು. ಅವರ ಸಾವಿನ ನಂತರ ಮಾಜಿ ಪತ್ನಿ ವರ್ಷಾ ಅವರಿಗೆ ಸಿಗುತ್ತಿದ್ದ ಜೀವನಾಂಶ ಸ್ಥಗಿತಗೊಂಡಿತ್ತು. ಇದರಿಂದಾಗಿ ವರ್ಷಾ ಅವರು ತಮಗೆ ಜೀವನಾಂಶ ಕೊಡಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಾರತಿ ಮತ್ತು ಮಂಜುಷಾ ದೇವ್ ಪಾಂಡೆ ಅವರಿದ್ದ ಪೀಠವು, ಪತಿಯ ವಾರಸುದಾರರು ಆತನ ಆಸ್ತಿಯಿಂದ ಮಾಜಿ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಆದೇಶಿಸಿದೆ.
ಇದೇ ವೇಳೆ ಹೈಕೋರ್ಟ್ ಮತ್ತೊಂದು ಪ್ರಮುಖ ಅಂಶವನ್ನು ಸ್ಪಷ್ಟಪಡಿಸಿದೆ. ಅಂದು ಪತಿ ತೀರಿಕೊಂಡ ಸಮಯಕ್ಕೆ ಹೋಲಿಸಿದರೆ, ಇಂದು ಆತನ ಆಸ್ತಿಯ ಮೌಲ್ಯ ಹೆಚ್ಚಾಗಿದೆ ಮತ್ತು ಸದ್ಯ ದಿನಬಳಕೆ ವೆಚ್ಚಗಳೂ ಹೆಚ್ಚಾಗಿವೆ, ಆದ್ದರಿಂದ ತಮಗೆ ನೀಡುವ ಜೀವನಾಂಶದ ಮೊತ್ತವನ್ನು ಹೆಚ್ಚು ಮಾಡಬೇಕು ಎಂದು ಮಾಜಿ ಪತ್ನಿ ವರ್ಷಾ ಕೋರಿದ್ದರು.
ಆದರೆ, ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿದೆ. “ಪತಿಯ ಆಸ್ತಿಯ ಮೌಲ್ಯ ಹೆಚ್ಚಾಗಿದೆ ಎಂದಾಗಲಿ ಅಥವಾ ಆತನ ವಾರಸುದಾರರು ಸ್ವಂತ ಶ್ರಮದಿಂದ ಗಳಿಸಿದ ಆಸ್ತಿಯನ್ನು ಆಧರಿಸಿಯಾಗಲಿ ಮಾಜಿ ಪತ್ನಿಯ ಜೀವನಾಂಶವನ್ನು ಹೆಚ್ಚಿಸಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ತೀರ್ಪು ನೀಡಿದೆ. ಅಂದರೆ, ಪತಿ ಮರಣ ಹೊಂದಿದಾಗ ಇದ್ದ ಆಸ್ತಿಯ ಸ್ಥಿತಿಗತಿ ಆಧಾರದ ಮೇಲಷ್ಟೇ ಜೀವನಾಂಶ ಸಿಗುತ್ತದೆಯೇ ಹೊರತು, ಅದನ್ನು ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.








