ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಶುಕ್ರವಾರ ತಡರಾತ್ರಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದೆ. ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ದೆಹಲಿಯಿಂದ ಆಗಮಿಸುವ ಕೆಲವೇ ನಿಮಿಷಗಳ ಮುನ್ನ ವಿಮಾನ ನಿಲ್ದಾಣದ ಎಕ್ಸಿಟ್ ಗೇಟ್ ಬಳಿ ಬಂದೂಕುಧಾರಿ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಇದು ಹತ್ಯೆಯ ಸಂಚು ಎಂದು ಟಿಎಂಸಿ ಆರೋಪಿಸಿದೆ. ಈ ಘಟನೆಯು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಕೈಕೈ ಮಿಲಾಯಿಸುವ ಜಗಳಕ್ಕೆ ಕಾರಣವಾಗಿದೆ.
ಟಿಎಂಸಿಯ ಬಂಡಾಯ ಸಂಸದರ ಅನರ್ಹತೆ ಕುರಿತು ದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಅಭಿಷೇಕ್ ಬ್ಯಾನರ್ಜಿ ಅವರು ಶುಕ್ರವಾರ ರಾತ್ರಿ 9:45 ರ ಸುಮಾರಿಗೆ ಕೋಲ್ಕತ್ತಾಗೆ ಮರಳುತ್ತಿದ್ದರು. ಅವರನ್ನು ಸ್ವಾಗತಿಸಲು ನೂರಾರು ಟಿಎಂಸಿ ಕಾರ್ಯಕರ್ತರು ಬಂದಿದ್ದರು. ಇದೇ ವೇಳೆ ಅಭಿಷೇಕ್ ಅವರಿಗೆ ಕೊಳೆತ ಮೊಟ್ಟೆಗಳನ್ನು ಎಸೆಯಲು ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ಉಭಯ ಪಕ್ಷಗಳ ನಡುವೆ ಗಲಾಟೆ ಆರಂಭವಾಗಿ, ವಿಮಾನ ನಿಲ್ದಾಣದ ಆವರಣ ರಣರಂಗವಾಗಿ ಮಾರ್ಪಟ್ಟಿತು.
ಗಲಾಟೆಯ ನಡುವೆಯೇ ಹಳದಿ ಕುರ್ತಾ ಧರಿಸಿದ್ದ ವ್ಯಕ್ತಿಯೊಬ್ಬ ಬಟ್ಟೆಯೊಳಗೆ ಪಿಸ್ತೂಲ್ ಅಡಗಿಸಿಟ್ಟುಕೊಂಡು ನಿಂತಿರುವುದನ್ನು ಗಮನಿಸಿದ ಟಿಎಂಸಿ ಮಹಿಳಾ ಕಾರ್ಯಕರ್ತರು ಆತನನ್ನು ಸುತ್ತುವರೆದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಭೀಕರ ವಿಡಿಯೋವನ್ನು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಅಭಿಷೇಕ್ ಬ್ಯಾನರ್ಜಿ, “ದೆಹಲಿಯಿಂದ ನಾನು ಲ್ಯಾಂಡ್ ಆದ ಕೆಲವೇ ಕ್ಷಣಗಳಲ್ಲಿ ಈ ಶಾಕಿಂಗ್ ಘಟನೆ ನಡೆದಿದೆ. ಬಂದೂಕುಧಾರಿ ಸಿಕ್ಕಿಬಿದ್ದಿರುವುದು ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತದೆ. ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಇವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೊಲೆ ಯತ್ನ ಎಂದು ಆರೋಪಿಸಿದ ಟಿಎಂಸಿ ನಾಯಕರು:
ಟ್ವೀಟ್ ಮಾಡಿರುವ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, “ಬಿಜೆಪಿ ಬೆಂಬಲಿಗನೊಬ್ಬ ಗನ್ ಹಿಡಿದು ನಿಂತಿದ್ದ ವಿಡಿಯೋ ಇಲ್ಲಿದೆ. ಇದು ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ಕೊಲೆ ಯತ್ನವಲ್ಲದೆ ಮತ್ತೇನು? ಬಂಗಾಳದ ಪೊಲೀಸರು ಏನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಟಿಎಂಸಿ ನಾಯಕರು ದೂರಿದ್ದಾರೆ.
ಟಿಎಂಸಿ ನಾಯಕರ ಈ ಆರೋಪಗಳನ್ನು ಬಿಜೆಪಿ ಕಡಾಖಂಡಿತವಾಗಿ ನಿರಾಕರಿಸಿದೆ. “ನಮ್ಮ ಕಾರ್ಯಕರ್ತರು ಕೇವಲ ಮೊಟ್ಟೆ ಎಸೆದು ಪ್ರತಿಭಟನೆ ನಡೆಸಲು ಯೋಜಿಸಿದ್ದರೇ ಹೊರತು ಯಾವುದೇ ಹಿಂಸಾಚಾರಕ್ಕೆ ಮುಂದಾಗಿಲ್ಲ. ಬಂದೂಕುಧಾರಿಗೂ ನಮಗೂ ಯಾವುದೇ ಸಂಬಂಧವಿಲ್ಲ” ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಸದ್ಯ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಇಡೀ ಏರ್ಪೋರ್ಟ್ ಆವರಣದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ಸಿಕ್ಕಿಬಿದ್ದಿರುವ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.








