ನವದೆಹಲಿ: ಇಡೀ ಲೆಬನಾನ್ ದೇಶವನ್ನು ಸುಟ್ಟುಹಾಕುವುದಾಗಿ ಇಸ್ರೇಲ್ನ ಪ್ರಮುಖ ಸಚಿವರೊಬ್ಬರು ನೀಡಿರುವ ಉಗ್ರ ಪ್ರಚೋದನಾಕಾರಿ ಹೇಳಿಕೆಗೆ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ನಿಲುವು ಭಾರತದ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶನಿವಾರ (ಜೂನ್ 20) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಸಾಮಾಜಿಕ ಜಾಲತಾಣ ‘X’ ನಲ್ಲಿ ಅತ್ಯಂತ ವಿವಾದಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. “ಇಸ್ರೇಲಿ ತಾಯಿಯ ಪ್ರತಿಯೊಂದು ಕಣ್ಣೀರಿನ ಹನಿಗೂ ಸಾವಿರಾರು ಲೆಬನಾನ್ ತಾಯಂದಿರು ಕಣ್ಣೀರು ಹಾಕಬೇಕು. ಇಡೀ ಲೆಬನಾನ್ ದೇಶ ಬೂದಿಯಾಗಬೇಕು. ಅಮೆರಿಕನ್ನರ ಮೇಲಿನ ಗೌರವದೊಂದಿಗೇ ಹೇಳುತ್ತಿದ್ದೇನೆ, ನಮ್ಮ ಮಕ್ಕಳ ರಕ್ತ ಮತ್ತು ಸುರಕ್ಷತೆಯ ವಿಷಯದಲ್ಲಿ ನಾವು ರಾಜಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಇಸ್ರೇಲ್ ಜಗತ್ತಿಗೆ ಸ್ಪಷ್ಟಪಡಿಸಬೇಕಿದೆ” ಎಂದು ಅವರು ಬರೆದುಕೊಂಡಿದ್ದರು. ಜಾಗತಿಕ ಮಟ್ಟದಲ್ಲಿ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇಸ್ರೇಲ್ ಸಚಿವರ ಈ ಉದ್ಧಟತನದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ:
ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ವಿಶ್ವದಾದ್ಯಂತ ಜಾಗರೂಕತೆಯಿಂದ ಸ್ವಾಗತಿಸಲಾಗುತ್ತಿದೆ. ಆದರೆ ಇಸ್ರೇಲ್ನ ಇಂತಹ ನಾಯಕರ ಹೇಳಿಕೆಗಳು ಜಾಗತಿಕ ಶಾಂತಿ ಮತ್ತು ಭದ್ರತೆಗೆ ದೊಡ್ಡ ಕಂಟಕವಾಗಿ ಪರಿಣಮಿಸಿವೆ.
ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ, ಎಂದಿನಂತೆ ಮೋದಿ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದೆ.
ಇಸ್ರೇಲ್ ಮೇಲಿನ ಪ್ರಧಾನ ಮಂತ್ರಿಯವರ ಕುರುಡು ಭಕ್ತಿ ಮತ್ತು ‘ಮೋದಾನಿ’ (ಮೋದಿ-ಅದಾನಿ) ಸಾಮ್ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸುವ ಹಪಾಹಪಿತನ ದೇಶದ ಒಟ್ಟಾರೆ ಹಿತಾಸಕ್ತಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡುತ್ತಿದೆ.








