ಮಂಡ್ಯ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಹಾಗೂ ನಾಯಕತ್ವದ ಬಗೆಗಿನ ಅಸಮಾಧಾನಗಳು ಮತ್ತೊಮ್ಮೆ ಬಹಿರಂಗಗೊಂಡಿವೆ. ಬಿಜೆಪಿ ರಾಜ್ಯಾಧ್ಯಕ್ಷರ ನಡೆ ಹಾಗೂ ವಾದಗಳ ವಿರುದ್ಧ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಮಂಡ್ಯದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ರಾಜ್ಯಾಧ್ಯಕ್ಷರ ವಾದಗಳು ಸರಿ ಇಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಜನ ಸಂಘಟನೆ ಹಾಗೂ ಪಕ್ಷ ಸಂಘಟನೆಗೆ ಪೂರಕ ವಾತಾವರಣ ಕಾಣಿಸುತ್ತಿಲ್ಲ” ಎಂದು ಅವರು ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿದ ಅವರು, “ಅಧ್ಯಕ್ಷರನ್ನಾಗಿ ರಾಷ್ಟ್ರೀಯ ನಾಯಕರು ಆಯ್ಕೆ ಮಾಡಿದ್ದಾರೆ ನಿಜ, ಆದರೆ ಅವರ ಅವಧಿ ನವೆಂಬರ್ಗೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆ ಖಂಡಿತ ಆಗುತ್ತದೆ. ಇಲ್ಲಿಯವರೆಗೆ ಅಧಿಕೃತವಾಗಿ ಯಾರೂ ನಾಮಿನೇಷನ್ ಹಾಕಿ ಎಂಬ ಮಾಹಿತಿ ನೀಡಿಲ್ಲ. ಆದರೆ ನಮಗೆ ಧ್ವನಿ ಇದೆ, ನಾವು ನಮ್ಮ ವಾದವನ್ನು ಮಂಡಿಸುತ್ತಿದ್ದೇವೆ” ಎಂದರು.
ಒಳಜಗಳ ಸರಿಪಡಿಸಿ 2028ಕ್ಕೆ ಕಮ್ ಬ್ಯಾಕ್
ಪಕ್ಷದ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಿದ ಕುಮಾರ್ ಬಂಗಾರಪ್ಪ, “ನಾವು ಎಂಪಿ ಚುನಾವಣೆ ಹಾಗೂ ಬೈ ಎಲೆಕ್ಷನ್ಗಳನ್ನು ಕಳೆದುಕೊಂಡಿದ್ದೇವೆ. ಇನ್ನು ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ನಡೆದಿದೆ. ಇದರಿಂದಾಗಿ ಪಕ್ಷದ ಮೇಲೆ ಹಿಡಿತ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಅಡ್ಡ ಮತದಾನದ ಬಗ್ಗೆ ತನಿಖೆಯೂ ನಡೆಯಲಿದೆ. ಸದ್ಯ ಬಿಜೆಪಿಯ ಒಳಜಗಳವನ್ನು ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಹಿರಿಯ ನಾಯಕ ಬಿ.ಪಿ. ಯತ್ನಾಳ್ ಅವರು ನಮ್ಮ ಜೊತೆಯೇ ಇದ್ದಾರೆ. ಪ್ರತಿಪಕ್ಷಗಳ ಕೆಲಸವನ್ನು ನೋಡಿಕೊಂಡು ನಾವು ಮುಂದಿನ ಕಾರ್ಯತಂತ್ರ ರೂಪಿಸಬೇಕಿದೆ. ನಾನು ಸದಾ ಬಿಜೆಪಿ ಟೀಮ್ನಲ್ಲೇ ಇರುತ್ತೇನೆ” ಎಂದು ಸ್ಪಷ್ಟಪಡಿಸಿದರು.
2028ಕ್ಕೆ ರಾಷ್ಟ್ರ-ರಾಜ್ಯದಲ್ಲಿ ಒಂದೇ ಆಡಳಿತ
ಬಿಜೆಪಿಯ ಭವಿಷ್ಯದ ರಾಜಕಾರಣದ ಬಗ್ಗೆ ಮಾತನಾಡಿದ ಅವರು, “ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ, ಮೈತ್ರಿ ಮೂಲಕವೇ ಅಧಿಕಾರ ಹಿಡಿದಿದೆ. ಒಮ್ಮೆ 104 ಸ್ಥಾನಗಳವರೆಗೆ ಹೋಗಿ ಮತ್ತೆ ಕೆಳಗೆ ಬಂದಿದ್ದೇವೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪೂರ್ಣ ಪ್ರಮಾಣದ ಯಶಸ್ಸು ಸಿಕ್ಕಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಬಿಜೆಪಿಯ ಒಳಜಗಳವನ್ನು ಶಮನಗೊಳಿಸಿ 2028ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ, “ಈ ಬಾರಿ 2028ಕ್ಕೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಒಂದೇ ಆಡಳಿತ (ಡಬಲ್ ಇಂಜಿನ್ ಸರ್ಕಾರ) ಇರಬೇಕು ಎನ್ನುವುದು ನಮ್ಮ ಆಶಯ. ಆ ನಿಟ್ಟಿನಲ್ಲಿ ಕರ್ನಾಟಕದಲ್ಲಿ 2028ಕ್ಕೆ ಬಿಜೆಪಿ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಲಿದೆ. ನಮ್ಮ ಹೋರಾಟವನ್ನು ಯಾರೂ ಪ್ರಶ್ನೆ ಮಾಡಿಲ್ಲ” ಎಂದು ಕುಮಾರ್ ಬಂಗಾರಪ್ಪ ದೃಢವಾಗಿ ನುಡಿದರು.








