ಠಾಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಅಂಬರನಾಥ್ನಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ 48 ದಿನಗಳಾಗಿದ್ದ 26 ವರ್ಷದ ವಿಶಾಖಾ ತಿಲ್ಕರ್ ಎಂಬ ನವವಿವಾಹಿತೆ ಕೌಟುಂಬಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಏಪ್ರಿಲ್ 30 ರಂದು ವಿಶಾಖಾ ಅವರ ವಿವಾಹ ಡಾ. ನಿತಿನ್ ತಿಲ್ಕರ್ ಎಂಬಾತನೊಂದಿಗೆ ನಡೆದಿತ್ತು. ಮದುವೆಗೆ ಮುಂಚೆ ಎಲ್ಲವೂ ಸಾಮಾನ್ಯವಾಗಿಯೇ ಇತ್ತು, ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಅತ್ತೆಯ ಮನೆಯವರ ನಡವಳಿಕೆ ಸಂಪೂರ್ಣ ಬದಲಾಯಿತು ಎಂದು ವಿಶಾಖಾ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ವಿಶಾಖಾ ಅವರಿಗೆ ತವರು ಮನೆಯಿಂದ ಹಣ, ಒಡವೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ತರುವಂತೆ ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು ಎನ್ನಲಾಗಿದೆ.
ಮನೆಯ ಸುತ್ತಲೂ ಸಿಸಿಟಿವಿ ಕಣ್ಗಾವಲು!
ಪತಿ ನಿತಿನ್ ತಿಲ್ಕರ್ ಪತ್ನಿಯ ಪ್ರತಿಯೊಂದು ಚಟುವಟಿಕೆಯ ಮೇಲೆ ನಿಗಾ ಇಡಲು ಮನೆಯ ಒಳಗಡೆ ಮತ್ತು ಹೊರಗಡೆ ಹಲವು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಎಂದು ವಿಶಾಖಾ ಪೋಷಕರು ತಿಳಿಸಿದ್ದಾರೆ. ಇದರಿಂದಾಗಿ ಆಕೆಯ ವೈಯಕ್ತಿಕ ಸ್ವಾತಂತ್ರ್ಯ ಸಂಪೂರ್ಣವಾಗಿ ಹರಣವಾಗಿತ್ತು. ಅಷ್ಟೇ ಅಲ್ಲದೆ, ವಿಶಾಖಾ ನೆರೆಹೊರೆಯವರೊಂದಿಗೆ ಅಥವಾ ಯಾವುದೇ ಅಪರಿಚಿತರೊಂದಿಗೆ ಮಾತನಾಡಿದರೂ, ಆಕೆ ಮನೆಗೆ ಮರಳಿದ ತಕ್ಷಣ ತೀವ್ರವಾಗಿ ಥಳಿಸಲಾಗುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಎರಡು ದಿನಗಳ ಮುಂಚೆಯೂ ನೆರೆಹೊರೆಯವರ ಜೊತೆ ಮಾತನಾಡಿದ್ದಾಳೆಂಬ ಕಾರಣಕ್ಕೆ ವಿಶಾಖಾಳನ್ನು ಕ್ರೂರವಾಗಿ ಥಳಿಸಲಾಗಿತ್ತು ಎಂದು ತಿಳಿದುಬಂದಿದೆ.
ಆರೋಪಿ ಪತಿ ಬಂಧನ
ನಿರಂತರವಾಗಿ ನಡೆಯುತ್ತಿದ್ದ ಮಾನಸಿಕ ಮತ್ತು ದೈಹಿಕ ಕಿರುಕುಳದಿಂದ ವಿಶಾಖಾ ಸಂಪೂರ್ಣವಾಗಿ ನೊಂದಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು ತಮ್ಮ ತಾಯಿಗೆ ಕರೆ ಮಾಡಿ ಅತ್ತೆ ಮನೆಯಲ್ಲಿ ತಮಗಾಗುತ್ತಿರುವ ದೌರ್ಜನ್ಯ ಮತ್ತು ಪಡುತ್ತಿರುವ ಯಾತನೆಯ ಬಗ್ಗೆ ವಿವರಿಸಿದ್ದರು. ವಿಷಯ ತಿಳಿದ ತಕ್ಷಣ ಪೋಷಕರು ಆಕೆಯನ್ನು ಮರಳಿ ಮನೆಗೆ ಕರೆತರಲು ಸಿದ್ಧತೆ ನಡೆಸುತ್ತಿದ್ದರು. ಆದರೆ ಅಷ್ಟರಲ್ಲೇ ವಿಶಾಖಾ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಸುದ್ದಿ ಬಂದಿದೆ.
ಪೊಲೀಸ್ ಕ್ರಮ: ಈ ಘಟನೆಗೆ ಸಂಬಂಧಿಸಿದಂತೆ ಅಂಬರನಾಥ್ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪತಿ ನಿತಿನ್ ತಿಲ್ಕರ್, ಅತ್ತೆ ಛಾಯಾ ತಿಲ್ಕರ್ ಮತ್ತು ಮೈದುನ ನಿನಾದ್ ತಿಲ್ಕರ್ ವಿರುದ್ಧ ಗೃಹಹಿಂಸೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಖ್ಯ ಆರೋಪಿ ಡಾ. ನಿತಿನ್ ತಿಲ್ಕರ್ನನ್ನು ಈಗಾಗಲೇ ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.








