ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇಂದು ಅನಿರೀಕ್ಷಿತ ತಿರುವುಗಳು ಕಂಡುಬರುತ್ತಿವೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಆದರೆ, ಕೆಲವು ಅನಿವಾರ್ಯ ಕಾರಣಗಳಿಂದಾಗಿ ಈ ಪದಗ್ರಹಣ ಸಮಾರಂಭವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ, ರಾಜ್ಯದ ಪ್ರಬಲ ವಿರೋಧ ಪಕ್ಷವಾದ AIADMK ಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಪಕ್ಷ ಇಬ್ಬಾಗವಾಗಿದೆ.
ಎರಡು ಬಣಗಳಾಗಿ ಸೃಷ್ಟಿಯಾದ AIADMK: ಸದ್ಯ AIADMK ಪಕ್ಷದಲ್ಲಿ ಎಡಪ್ಪಾಡಿ ಪಳನಿಸ್ವಾಮಿ (EPS) ಬಣ ಮತ್ತು ಸಿ.ವಿ. ಷಣ್ಮುಗಂ ಬಣ ಎಂದು ಎರಡು ಗುಂಪುಗಳು ಸೃಷ್ಟಿಯಾಗಿವೆ. ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯ ತಲೆದೂರಿದೆ. ಈ ಪೈಕಿ ಷಣ್ಮುಗಂ ಅವರು ವಿಜಯ್ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದ್ದು, ಇದು ಪಕ್ಷದೊಳಗೆ ದೊಡ್ಡ ಮಟ್ಟದ ಬಣ ರಾಜಕೀಯಕ್ಕೆ ನಾಂದಿ ಹಾಡಿದೆ. ಪಕ್ಷದ ಒಟ್ಟು 47 ಶಾಸಕರ ಪೈಕಿ ಸುಮಾರು 30 ಶಾಸಕರು ವಿಜಯ್ ಅವರಿಗೆ ಬೆಂಬಲ ನೀಡಲು ಮುಂದಾಗಿರುವುದು ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ರೆಸಾರ್ಟ್ ರಾಜಕೀಯದ ಎಂಟ್ರಿ: ಶಾಸಕರು ಕೈತಪ್ಪಿ ಹೋಗುವುದನ್ನು ತಡೆಯಲು ಮತ್ತು ವಿಜಯ್ ಪರವಾಗಿರುವ ಬೆಂಬಲವನ್ನು ಗಟ್ಟಿಗೊಳಿಸಲು ಈಗ ತಮಿಳುನಾಡಿನಲ್ಲಿ ಮತ್ತೆ ‘ರೆಸಾರ್ಟ್ ರಾಜಕೀಯ’ ಶುರುವಾಗಿದೆ. ಷಣ್ಮುಗಂ ಬಣದ ನಾಯಕರು ತಮ್ಮ ಬೆಂಬಲಿಗ ಶಾಸಕರನ್ನು ಒಟ್ಟುಗೂಡಿಸಿ ಸುರಕ್ಷಿತವಾಗಿ ಇರಿಸಲು ಮುಂದಾಗಿದ್ದಾರೆ. ರಾಜಕೀಯ ಕುದುರೆ ವ್ಯಾಪಾರ ಮತ್ತು ಇತರ ಒತ್ತಡಗಳಿಂದ ದೂರವಿಡಲು ಶಾಸಕರನ್ನು ಈಗಾಗಲೇ ನಗರದಿಂದ ಹೊರವಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಪುದುಚೇರಿಗೆ ಶಿಫ್ಟ್ ಆದ ಶಾಸಕರು: ವರದಿಗಳ ಪ್ರಕಾರ, ಷಣ್ಮುಗಂ ಅವರು ಈಗಾಗಲೇ ಪುದುಚೇರಿಯಲ್ಲಿ ರೆಸಾರ್ಟ್ ಬುಕ್ ಮಾಡಿದ್ದು, ಸುಮಾರು 15ಕ್ಕೂ ಹೆಚ್ಚು ಶಾಸಕರು ಈಗಾಗಲೇ ಅಲ್ಲಿಗೆ ತಲುಪಿದ್ದಾರೆ ಎನ್ನಲಾಗಿದೆ. ಶಾಸಕರಿಗಾಗಿ ಸುಮಾರು 20 ರೂಮ್ಗಳನ್ನು ಕಾಯ್ದಿರಿಸಲಾಗಿದ್ದು, ಬಿಗಿ ಭದ್ರತೆಯ ನಡುವೆ ಶಾಸಕರನ್ನು ಇರಿಸಲಾಗಿದೆ. ವಿಜಯ್ ಅವರ ಪದಗ್ರಹಣ ಮುಂದೂಡಿಕೆಯಾದ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆಗಳು ತಮಿಳುನಾಡು ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೊಸ ಸಮೀಕರಣಗಳಿಗೆ ಸಾಕ್ಷಿಯಾಗಲಿದೆ ಎಂಬ ಕುತೂಹಲ ಮೂಡಿಸಿದೆ.








