ಶಿವಮೊಗ್ಗ: “ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗ. ಅವರನ್ನು ಟೀಕಿಸದೆ, ಕೀಳರಿಮೆಯಿಂದ ನೋಡದೆ ನಮ್ಮ ಸ್ವಂತ ಕುಟುಂಬದ ಸದಸ್ಯರಂತೆ ಕಂಡು ಗೌರವಿಸಬೇಕು. ಅವರನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾದಾಗ ಮಾತ್ರ ಅವರ ಬದುಕು ಹಸನಾಗಲು ಸಾಧ್ಯ,” ಎಂದು ಶಾಸಕ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ನಗರದ ಲಯನ್ಸ್ ಸೇವಾ ಮಂದಿರದಲ್ಲಿ ಲಯನ್ಸ್ ಕ್ಲಬ್ ಮತ್ತು ಶ್ರೀ ಶೃಂಗೇರಿ ಶಂಕರ ಮಠದ ಸಹಯೋಗದಲ್ಲಿ, ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೇಂದ್ರದ (ಸಿ.ಆರ್.ಸಿ) ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ವಿಕಲಚೇತನರ ಗುರುತಿಸುವಿಕೆ ಮತ್ತು ನೋಂದಣಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಸಂಸ್ಥೆಯ ಸೇವೆಗೆ ಮೆಚ್ಚುಗೆ
ಲಯನ್ಸ್ ಸಂಸ್ಥೆಯು ಕೇಂದ್ರ ಸರ್ಕಾರದ 3 ಕೋಟಿ ರೂ. ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವುದು ಶ್ಲಾಘನೀಯ ಎಂದ ಶಾಸಕರು, “ವಿಕಲಚೇತನರಿಗೆ ಅಗತ್ಯ ಸಲಕರಣೆ ನೀಡುವುದರ ಜೊತೆಗೆ ವ್ಯಾಪಾರಿಗಳಿಗೆ ಛತ್ರಿ, ಬ್ಯಾರಿಕೇಡ್ ವಿತರಣೆ ಮತ್ತು ಬಸ್ ನಿಲ್ದಾಣ ನಿರ್ಮಾಣದಂತಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಲಯನ್ಸ್ ಸಂಸ್ಥೆಯ ಕಾರ್ಯವೈಖರಿ ನನಗೆ ಹೆಮ್ಮೆ ತಂದಿದೆ,” ಎಂದರು.
3 ಕೋಟಿ ರೂ. ಮೊತ್ತದ ಬೃಹತ್ ಯೋಜನೆ
ಲಯನ್ಸ್ ಕ್ಲಬ್ ಜಿಲ್ಲಾ ದ್ವಿತೀಯ ಉಪ ರಾಜ್ಯಪಾಲ ಅಶ್ವಿನಿಕುಮಾರ್ ಮಾತನಾಡಿ, “ಇದು ಕೇಂದ್ರ ಸರ್ಕಾರದ ಒಟ್ಟು 50 ಕೋಟಿ ರೂ.ಗಳ ಯೋಜನೆಯಾಗಿದ್ದು, ಸಾಗರ ತಾಲ್ಲೂಕಿಗೆ 3 ಕೋಟಿ ರೂ. ಮೌಲ್ಯದ ಸಲಕರಣೆಗಳು ದೊರೆಯಲಿವೆ. ತಾಲ್ಲೂಕಿನಲ್ಲಿ ಈಗಾಗಲೇ 266 ವಿಕಲಚೇತನರನ್ನು ಗುರುತಿಸಲಾಗಿದ್ದು, ಅವರಿಗೆ ಅಗತ್ಯ ನೆರವು ನೀಡಲಾಗುವುದು. ಪ್ರತಿಯೊಬ್ಬರೂ ಕಡ್ಡಾಯವಾಗಿ ಯುಡಿಐಡಿ (UDID) ಕಾರ್ಡ್ ಪಡೆದುಕೊಳ್ಳಬೇಕು,” ಎಂದು ಮಾಹಿತಿ ನೀಡಿದರು.
ಲಯನ್ಸ್ ಇತಿಹಾಸದಲ್ಲೇ ದಾಖಲೆಯ ಸೇವೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರಸನ್ನ ಟಿ. ಮಾತನಾಡಿ, “ವಿಕಲಚೇತನರ ಬದುಕಿಗೆ ಆಸರೆಯಾಗುವ ಈ 3 ಕೋಟಿ ರೂ. ಅನುದಾನದ ಯೋಜನೆ ಲಯನ್ಸ್ ಕ್ಲಬ್ನ ಇತಿಹಾಸದಲ್ಲೇ ಒಂದು ದಾಖಲೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಕೃತಕ ಕಾಲು, ಗಾಲಿ ಕುರ್ಚಿ ಸೇರಿದಂತೆ ಅಗತ್ಯ ಉಪಕರಣಗಳನ್ನು ನೀಡಲು ಈ ಶಿಬಿರ ಪೂರಕವಾಗಿದೆ. ನೋಂದಣಿ ಶುಲ್ಕವನ್ನೂ ಸಂಸ್ಥೆಯ ಸದಸ್ಯರೇ ಭರಿಸುತ್ತಿದ್ದಾರೆ,” ಎಂದರು.
ಶೃಂಗೇರಿ ಶಂಕರ ಮಠದ ಸಾಮಾಜಿಕ ಕಳಕಳಿ
ಶೃಂಗೇರಿ ಶಂಕರ ಮಠವು ಜಾತ್ಯಾತೀತವಾಗಿ ಸಮಾಜ ಸೇವೆ ಮಾಡುತ್ತಿದೆ. ಶೃಂಗೇರಿ ಶ್ರೀಗಳಿಗೆ 75 ವರ್ಷ ತುಂಬಿದ ಸ್ಮರಣಾರ್ಥವಾಗಿ ಆಟೋ ಚಾಲಕರಿಗೆ ಆಟೋ ವಿತರಿಸುವಂತಹ ಮಹತ್ತರ ಕಾರ್ಯಗಳನ್ನು ಮಠವು ಕೈಗೊಳ್ಳುತ್ತಿದೆ ಎಂದು ಸಭೆಯಲ್ಲಿ ಸ್ಮರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಶ್ ಎಲ್., ಜಿಲ್ಲಾ ದಿವ್ಯಾಂಗ ಕಲ್ಯಾಣಾಧಿಕಾರಿ ಸುವರ್ಣ ವಿ.ನಾಯ್ಕ್, ತಾಲ್ಲೂಕು ದಿವ್ಯಾಂಗ ಸಂಯೋಜಕರಾದ ಶ್ಯಾಮಸುಂದರ್ ಕೆ.ಎಸ್., ಲಯನ್ಸ್ ಕ್ಲಬ್ ಉಪಾಧ್ಯಕ್ಷ ನಾಗರಾಜ್ ಈ., ದ್ವಿತೀಯ ಉಪಾಧ್ಯಕ್ಷ ಟಿ.ವಿ.ಪಾಂಡುರಂಗ, ಸದಸ್ಯರಾದ ಅಶೋಕ ಬೇಳೂರು, ಪ್ರಭಾಕರ ಜೈನ್, ಅಜಿತ್ ಸಿಂಗ್, ಮೋಹಂತಿ, ನಾಗರಾಜ ಚಟ್ಟಕಿ, ವಾಸುದೇವಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಅಂಕಗಳಿಗಾಗಿ ಓದಬೇಡಿ, ಮೌಲ್ಯಯುತ ಬದುಕು ಕಟ್ಟಿಕೊಳ್ಳಿ: ವಿದ್ಯಾರ್ಥಿಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿವಿಮಾತು
ಮುಳುಗಡೆ ಸಂತ್ರಸ್ತರ ಹಕ್ಕು ಕಸಿಯುವ ‘ಬೇಸೂರು ಅಣು ಸ್ಥಾವರ’ ಬೇಕೆ?: ಸಾಗರದಲ್ಲಿ ತೀ.ನ.ಶ್ರೀನಿವಾಸ್ ಕಿಡಿಕಿಡಿ
ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ದ ವಿರುದ್ಧ ಮೊಳಗಿದ ಪ್ರತಿರೋಧದ ಶಂಖನಾದ!








