ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಲಸು ಮತ್ತು ಮಾವು ಪ್ರಿಯರಿಗಾಗಿ ಹಮ್ಮಿಕೊಳ್ಳಲಾಗಿರುವ ‘ಬೃಹತ್ ಹಲಸು ಮತ್ತು ಮಾವು ಮೇಳ’ವು ಜನಮನ ಸೆಳೆಯುತ್ತಿದ್ದು, ಯಶಸ್ವಿಯಾಗಿ ಎರಡನೇ ದಿನ ಪೂರೈಸಿದೆ. ಸಾಗರದ ಲಯನ್ಸ್ ಕ್ಲಬ್ ವತಿಯಿಂದ ‘ರಾಜರತ್ನ ಇವೆಂಟ್ಸ್’ ಹಾಗೂ ‘ಜನಸ್ನೇಹಿ ಇವೆಂಟ್ಸ್’ ಸಹಯೋಗದೊಂದಿಗೆ ಈ ಮೇಳವನ್ನು ಆಯೋಜಿಸಲಾಗಿದೆ.

ಮೇಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ
ಸಾಗರ ನಗರದ ಶ್ರೀ ರಾಘವೇಶ್ವರ ಭವನದಲ್ಲಿ ನಡೆಯುತ್ತಿರುವ ಈ ಬೃಹತ್ ಮೇಳದ ಎರಡನೇ ದಿನವಾದ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಭೇಟಿ ನೀಡಿ ವಿಶೇಷ ಗಮನ ಸೆಳೆದರು. ಮೇಳಕ್ಕೆ ಆಗಮಿಸಿದ ಸಚಿವರನ್ನು ಲಯನ್ಸ್ ಕ್ಲಬ್ನ ದ್ವಿತೀಯ ಜಿಲ್ಲಾ ಉಪ ಗೌರ್ನರ್ ಅಶ್ವಿನಿಕುಮಾರ್ ಹಾಗೂ ಸಾಗರ ತಾಲ್ಲೂಕು ಅಧ್ಯಕ್ಷರಾದ ಡಾ. ಪ್ರಸನ್ನ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ಹಲಸಿನ ಖಾದ್ಯಗಳ ರುಚಿ ಸವಿದ ಸಚಿವರು
ಶ್ರೀರಾಘವೇಶ್ವರ ಭವನದಲ್ಲಿ ಪ್ರದರ್ಶನಗೊಂಡಿದ್ದ ವಿವಿಧ ಬಗೆಯ ಮಾವು ಮತ್ತು ಹಲಸಿನ ತಳಿಗಳನ್ನು ವೀಕ್ಷಿಸಿದ ಸಚಿವ ಪ್ರಹ್ಲಾದ್ ಜೋಷಿ ಅವರು, ಹಲಸಿನ ಹಣ್ಣಿನಿಂದ ತಯಾರಿಸಲಾಗಿದ್ದ ಬಗೆಬಗೆಯ ವಿಶಿಷ್ಟ ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಚಿವರನ್ನು ಹಸಿರು ಶಾಲು ಹೊದಿಸಿ ಜಿಲ್ಲಾ ಉಪ ಗೌವರ್ನರ್ ಅಶ್ವಿನಿ ಕುಮಾರ್ ಸನ್ಮಾನಿಸಿದರೇ, ಮಾ.ಸಾ. ನಂಜುಂಡಸ್ವಾಮಿ ಅವರ ಪುಸ್ತಕವನ್ನು ನೀಡಿ ಗೌರವಿಸಲಾಯಿತು. ಜನಸ್ನೇಹಿ ಇವೆಂಟ್ಸ್ನ ಪ್ರಭಾಕರ ಮಂದಾರ್ತಿ ಹಾಗೂ ರಾಜರತ್ನ ಇವೆಂಟ್ಸ್ನ ಶರತ್ ಅವರು ಸಚಿವರಿಗೆ ಹಲಸಿನ ಸಸಿ ನೀಡಿ ಸನ್ಮಾನಿಸಿದರು.

ಗಣ್ಯರ ಉಪಸ್ಥಿತಿ
ಸಚಿವರ ಭೇಟಿಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಸಚಿವ ಅರಗ ಜ್ಞಾನೇಂದ್ರ, ಬಿಜೆಪಿ ಮುಖಂಡರಾದ ಟಿ.ಡಿ. ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಲಯನ್ಸ್ ಸಂಸ್ಥೆಯ ಅಶೋಕ್ ಬೇಳೂರು, ನಾಗರಾಜ್.ಇ ಹಾಗೂ ಮೇಳದ ಆಯೋಜಕರಾದ ಸಂತೋಷ್ ಲಿಂಗನಮಕ್ಕಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ನಾಳೆಯೇ ಕೊನೆಯ ದಿನ: ಆಯೋಜಕರ ಮನವಿ
ಜೂನ್ 5 ರಿಂದ ಆರಂಭವಾಗಿರುವ ಈ ಆಕರ್ಷಕ ಹಲಸು ಮತ್ತು ಮಾವು ಮೇಳವು ನಾಳೆಗೆ (ಭಾನುವಾರ) ಮುಕ್ತಾಯಗೊಳ್ಳಲಿದೆ.
-
ವಿಶೇಷತೆಗಳು: ಮೇಳದಲ್ಲಿ ಕೇವಲ ಹಣ್ಣುಗಳು ಮಾತ್ರವಲ್ಲದೆ, ರೈತರಿಗಾಗಿ ಉತ್ತಮ ತಳಿಯ ಹಲಸು ಮತ್ತು ಮಾವಿನ ಸಸಿಗಳು ಲಭ್ಯವಿವೆ.
-
ಗೃಹೋಪಯೋಗಿ ವಸ್ತುಗಳು: ಸಾರ್ವಜನಿಕರಿಗಾಗಿ ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟವೂ ಇಲ್ಲಿದೆ.

ಸಾಗರ ತಾಲ್ಲೂಕು ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ರೈತ ಬಾಂಧವರು ನಾಳೆ ಕೊನೆಯ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿಭಿನ್ನ ಹಣ್ಣುಗಳ ಸವಿ ಸವಿಯುವುದರ ಜೊತೆಗೆ ಮೇಳದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಸಾಗರ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಆಯೋಜಕರು ಪ್ರೀತಿಯಿಂದ ಆಹ್ವಾನಿಸಿದ್ದಾರೆ.








