ಬೆಂಗಳೂರು: ಹೊಸತನಕ್ಕೆ ಒಗ್ಗಿಕೊಂಡಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯ. ಅರಣ್ಯ ಅಧಿಕಾರಿಗಳು ಕೂಡ ಮಾನವ-ವನ್ಯಜೀವಿ ಸಂಘರ್ಷಕ್ಕೆ ವಿನೂತನ ಮಾರ್ಗೋಪಾಯ ಸಂಶೋಧಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಭವನದಲ್ಲಿ ನಡೆದ 2 ದಿನಗಳ ಕೆಡಿಪಿ ಮತ್ತು ಎಂ.ಎಂ.ಆರ್. ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇ-ಗಸ್ತು ಮತ್ತು ಅತ್ಯಾಧುನಿಕ ಉಪಕರಣಗಳ ಬಳಕೆಯಿಂದ ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟಬಹುದಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮತ್ತು ಅಭಿವೃದ್ಧಿಪಡಿಸಲು ಸೂಚಿಸಿದರು.
ಅರಣ್ಯ ಪ್ರದೇಶದಲ್ಲಿ ಅಕ್ರಮ ಮರ ಕಡಿತಲೆ, ವನ್ಯಜೀವಿಗಳ ಅಸಹಜ ಸಾವು, ಕಳ್ಳಬೇಟೆ, ಅರಣ್ಯ ಒತ್ತುವರಿ, ಮಾನವ-ವನ್ಯಜೀವಿ ಸಂಘರ್ಷ ಇದು ಮುಖ್ಯವಾಗಿ ನಮ್ಮ ಮುಂದಿರುವ ಸವಾಲಾಗಿದೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ವನ್ಯಜೀವಿಗಳಿಂದ ಯಾವುದೇ ಸಾವು ಸಂಭವಿಸದಂತೆ ಶಾಶ್ವತ ಪರಿಹಾರ ಒದಗಿಸಲು ಕಾಡಿನೊಂದಿಗೆ ಹೆಚ್ಚು ಒಡನಾಟ ಹೊಂದಿರುವ ನೀವೆಲ್ಲರೂ ಶ್ರಮಿಸಬೇಕು ಎಂದರು.
ಯಾವ ಪ್ರದೇಶದಲ್ಲಿ ಹೆಚ್ಚಿನ ವನ್ಯಜೀವಿ ಸಂಘರ್ಷ ಇದೆ, ಈ ಸಂಘರ್ಷಕ್ಕೆ ಕಾರಣವೇನು, ಅದನ್ನು ಪರಿಹರಿಸಲು ಏನು ಮಾಡಬೇಕು ಎಂಬ ಬಗ್ಗೆ ಅಧಿಕಾರಿಗಳು ತಜ್ಞರೊಂದಿಗೆ ಸಮಾಲೋಚಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದರು.
ನೆರೆ ರಾಜ್ಯಗಳಿಂದ ಮೆಚ್ಚುಗೆ:
ನಮ್ಮ ಅರಣ್ಯ ಇಲಾಖೆಯ ಸಿಬ್ಬಂದಿ ಆನೆ ಸೆರೆ ಹಿಡಿಯುವುದರಲ್ಲಿ ಪ್ರಾವೀಣ್ಯತೆ ಪಡೆದಿದ್ದು, ನೆರೆಯ ಆಂಧ್ರಪ್ರದೇಶದವರು ನಮ್ಮಿಂದ ಕುಮ್ಕಿ ಆನೆ ಕೇಳುತ್ತಾರೆ. ಗೋವಾದವರು ಆನೆ ಹಿಮ್ಮೆಟ್ಟಿಸಲು ರಾಜ್ಯದ ನೆರವು ಕೇಳುತ್ತಾರೆ. ಉತ್ತರದ ಅರುಣಾಚಲ ಪ್ರದೇಶದವರೂ ಆನೆ ಸೆರೆ ಹಿಡಿಯಲು ನಮ್ಮ ನೆರವು ಕೋರುತ್ತಾರೆ. ಈ ಬಗ್ಗೆ ಹೆಮ್ಮೆ ಎನಿಸುತ್ತದೆ. ಆದರೆ, ನಮ್ಮ ರಾಜ್ಯದಲ್ಲಿನ ಸಮಸ್ಯೆಯ ನಿವಾರಣೆಗೂ ನಾವು ಹೆಚ್ಚಿನ ಆದ್ಯತೆ ಮತ್ತು ಗಮನ ಹರಿಸಬೇಕು ಎಂದರು.
ವನ್ಯಜೀವಿಗಳ ಸಂತಾನ ಹರಣ, ನಿಯಂತ್ರಣ ಕುರಿತಂತೆ ಚರ್ಚೆ ಅಗತ್ಯ:
ಅರಣ್ಯ ಪ್ರದೇಶದಲ್ಲಿ ಹೆಚ್ಚಳ ಆಗುವುದಿಲ್ಲ. ಆದರೆ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಮುಂದಿನ 20 ವರ್ಷಗಳಲ್ಲಿ ಅವುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಆಗುವ ಸಾಧ್ಯತೆ ಇದೆ. ಹೀಗಾಗಿ ತಾತ್ಕಾಲಿಕವಾಗಿ ಆಯ್ದ ಪ್ರದೇಶದಲ್ಲಿ, ಆಯ್ದ ವನ್ಯಜೀವಿಗಳಿಗೆ ಸಂತಾನ ಹರಣ ಅಥವಾ ನಿಯಂತ್ರಣ ಚುಚ್ಚು ಮದ್ದು ನೀಡುವ ಸಾಧ್ಯತೆಗಳ ಕುರಿತಂತೆ ಅದರ ಸಾಧಕ ಬಾಧಕ ಕುರಿತಂತೆ ರಾಷ್ಟ್ರಮಟ್ಟದಲ್ಲಿಯೂ ಸಾರ್ವಜನಿಕವಾಗಿ ಚರ್ಚೆಗಳು ನಡೆಯಬೇಕು ಎಂದರು.
ಅರಣ್ಯ ಇಲಾಖೆ ಕಾನೂನು ಕೋಶ, ಜಾಗೃತ ದಳ ಬಲವರ್ಧನೆ ಅಗತ್ಯ: ಈಶ್ವರ ಖಂಡ್ರೆ
ಒತ್ತುವರಿ ತೆರವು ಕಷ್ಟಸಾಧ್ಯವಾಗಿದೆ. 2015ರ ನಂತರದ ಒತ್ತುವರಿಗಳ ತೆರವಿಗೆ ಕ್ರಮ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಇಲಾಖೆಯಲ್ಲಿರುವ ಕಾನೂನು ಕೋಶ ಬಲಪಡಿಸಬೇಕು ಜೊತೆಗೆ ಹೊಸ ಒತ್ತುವರಿ ಆಗದಂತೆ ಮತ್ತು ವನ್ಯಜೀವಿ ಕಳ್ಳಬೇಟೆ, ಅಸಹಜ ಸಾವು ತಡೆಗೆ ಜಾಗೃತ ದಳವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.
ಅರಣ್ಯ ಸಿಬ್ಬಂದಿ ಕಾಡಿನಂಚಿನ ಜನರೊಂದಿಗೆ ಸೌಹಾರ್ದತೆ ಹೆಚ್ಚಿಸಿಕೊಳ್ಳಬೇಕು. ವಿವಿಧ ಪ್ರತಿಷ್ಠಾನಗಳಿಗೆ ಸಫಾರಿಯಿಂದ ಬರುವ ಹಣದಿಂದ ಕಾಡಿನಂಚಿನಲ್ಲಿ ಜನಸಂಪರ್ಕ ಸಭೆ ನಡೆಸಬೇಕು, ಸೌಕರ್ಯ ಒದಗಿಸಬೇಕು. ಸರ್ಕಾರ ಕೈಗೊಳ್ಳುವ ಕಾರ್ಯಕ್ರಮಗಳನ್ನು, ಆದೇಶಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
2 ದಿನಗಳ ಕಾಲ ಇಲ್ಲಿ ಉಪಯುಕ್ತ ಚರ್ಚೆ ಆಗಿದೆ. ಈ ಚರ್ಚೆಯಿಂದ ಒಂದು ವೃತ್ತದ ಉತ್ತಮ ರೂಢಿಯನ್ನು ಮತ್ತೊಂದು ವಲಯದಲ್ಲಿ ಅಳವಡಿಸಲು ಅವಕಾಶ ಆಗುತ್ತದೆ. ಇಲ್ಲಿ ನಡೆದ ಚರ್ಚೆಯ ಅಂಶಗಳ ಬಗ್ಗೆ ಒಂದು ವರದಿ ಸಿದ್ಧಪಡಿಸಿ, ಪರಾಮರ್ಶೆ ನಡೆಸಿ. ಇಲಾಖೆಗೆ ಹೆಸರು ಬರುವಂತೆ ಕಾರ್ಯ ನಿರ್ವಹಿಸಿ ಎಂದರು.
ಇಂದು ರಾಜ್ಯದಲ್ಲಿ ಅರಣ್ಯ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ಈ ಭಾವನೆ ಹೆಚ್ಚುವಂತೆ ಮತ್ತು ನಿರಂತರವಾಗಿರುವಂತೆ ಪಾರದರ್ಶಕ ಮತ್ತು ದಕ್ಷವಾಗಿ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ಇದೇ ವೇಳೆ ಅರಣ್ಯ ಇಲಾಖೆಯ ವಿವಿಧ ವೃತ್ತಗಳ ಸಿಬ್ಬಂದಿ ಛಾಯಾಚಿತ್ರ ತೆಗೆದು, ಸಂಶೋಧನೆಯ ಮೂಲಕ ಹೊರ ತಂದಿರುವ ಹಲವು ಕೃತಿಗಳನ್ನು ಈಶ್ವರ ಖಂಡ್ರೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್ ಸೇರಿದಂತೆ ಹಿರಿಯ ಅರಣ್ಯ ಅಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ: ಜೋಗದ ಜಲಪಾತಕ್ಕೆ ಜಿಲ್ಲಾಧಿಕಾರಿ ಭೇಟಿ, ಕಾಮಗಾರಿಗಳ ಪರಿಶೀಲನೆ
SSLC ಪರೀಕ್ಷೆಯಲ್ಲಿ ಮದ್ದೂರು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳೆ ಮೇಲುಗೈ: ಬಿಇಓ ಧನಂಜಯ








