ಮಂಡ್ಯ : ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಮದ್ದೂರು ತಾಲ್ಲೂಕಿಗೆ ಉತ್ತಮ ಫಲಿತಾಂಶ ಬಂದಿದ್ದು, ಸರ್ಕಾರಿ ಶಾಲೆಗಳೆ ಮೇಲುಗೈ ಸಾಧಿಸಿದ್ದು, ಶೇಕಡಾವಾರು ಗಣನೀಯ ಏರಿಕೆ ಕಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ತಿಳಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ತಾಲ್ಲೂಕಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 65.65 ಫಲಿತಾಂಶ ಪಡೆದು ಜಿಲ್ಲೆಯಲ್ಲಿ 6 ನೇ ಸ್ಥಾನದಲ್ಲಿತ್ತು ಆದರೆ ಈ ಬಾರಿ ಶೇಕಡಾ 97.30 ಫಲಿತಾಂಶ ಪಡೆದು ಜಿಲ್ಲೆಯಲ್ಲಿ 5 ನೇ ಸ್ಥಾನದಲ್ಲಿದೆ ಎಂದರು.
ಮದ್ದೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಈ ಬಾರಿ ಪರೀಕ್ಷೆ ಬರೆದಿದ್ದ ಒಟ್ಟು 3116 ವಿದ್ಯಾರ್ಥಿಗಳ ಪೈಕಿ 3032 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಅದರಲ್ಲಿ ಏ+ ಶ್ರೇಣಿಯಲ್ಲಿ 361, ಏ ಶ್ರೇಣಿಯಲ್ಲಿ 641, ಬಿ+ ಶ್ರೇಣಿಯಲ್ಲಿ 612, ಬಿ ಶ್ರೇಣಿಯಲ್ಲಿ 637 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದರು.
ತಾಲ್ಲೂಕು ವ್ಯಾಪ್ತಿಯಲ್ಲಿರುವ ಒಟ್ಟು 90 ಪ್ರೌಢಶಾಲೆಗಳ ಪೈಕಿ 60 ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆದಿದ್ದು ಅದರಲ್ಲಿ 29 ಸರ್ಕಾರಿ, 4ಅನುದಾನಿತ, 23 ಖಾಸಗಿ ಹಾಗೂ 6 ವಸತಿ ಶಾಲೆಗಳು ಸಾಧನೆ ಮಾಡಿವೆ ಎಂದರು.
ತಾಲ್ಲೂಕಿನ ಚಂದೂಪುರ ಗ್ರಾಮದ ಡಿ.ಕೆ.ಗೌಡ ಶಾಲೆಯ ವಿದ್ಯಾರ್ಥಿನಿ ಹೆಚ್.ಎನ್. ನವ್ಯ 618 ಅಂಕಗಳನ್ನು ಪಡೆಯುವುದರೊಂದಿಗೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕೆ.ಹೊನ್ನಲಗೆರೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಂದನಾ ಎಂಬ ವಿದ್ಯಾರ್ಥಿನಿ 615 ಅಂಕಗಳನ್ನು ಪಡೆಯುವುದರೊಂದಿಗೆ ದ್ವಿತೀಯ, ಕೊಪ್ಪ ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ದಿವ್ಯಜ್ಯೋತಿ ಶಾಲೆಯ ವಿದ್ಯಾರ್ಥಿ ಭಾರ್ಗವ್ 614 ಅಂಕ ಪಡೆಯುವುದರೊಂದಿಗೆ ತೃತೀಯ ಹಾಗೂ ಕೆಸ್ತೂರು ಗ್ರಾಮದ ಅಕ್ಷರಧಾಮ ಶಾಲೆಯ ವಿದ್ಯಾರ್ಥಿನಿ ನಂದಿತಾ 613 ಅಂಕಗಳನ್ನು ಪಡೆಯುವುದರೊಂದಿಗೆ 4 ನೇ ಸ್ಥಾನವನ್ನು ಪಡೆದಿದ್ದಾರೆ ಎಂದರು.
ಕಳೆದ ಸಾಲಿಗಿಂತ ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾದ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಶ್ರಮವನ್ನು ಬಿಇಓ ಧನಂಜಯ ಪ್ರಶಂಸಿಸಿದರು.
ಮದ್ದೂರಿನ ಪೂರ್ಣ ಪ್ರಜ್ಞಾ ಶಾಲೆಗೆ ಉತ್ತಮ ಫಲಿತಾಂಶ
ಇನ್ನು ನಗರದ ಶಿವಪುರದ ಪೂರ್ಣಪ್ರಜ್ಞಾ ಕಾನ್ವೆಂಟ್ ವಿದ್ಯಾರ್ಥಿಗಳು 2025-26 ರ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 164 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 49 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 78 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 34 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆಂದು ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ, ಮುಖ್ಯ ಶಿಕ್ಷಕ ಎಚ್.ಆರ್.ಅನಂತೇಗೌಡ ತಿಳಿಸಿದ್ದಾರೆ.
ಭುವನ್ ಎಸ್.ಆರ್.ಗೌಡ 609 ಶೇ.97.44 ಪ್ರಥಮ, ಕವನ ಎಸ್.ಗೌಡ 608 ಶೇ.97.28 ದ್ವಿತೀಯ. ಮೌಲ್ಯ 607 ಶೇ.97.12 ತೃತೀಯ ಸ್ಥಾನ ಹಾಗೂ ವಿ.ಜಿ.ಪ್ರೀತಮ್ 607 ಶೇ.97.12, ಮೌಲ್ಯಶ್ರೀ 603 ಶೇ.96.48, ಎಸ್.ಪಿ.ಚಂದನ 602 ಶೇ.96.32 ಹಾಗೂ ಟಿ.ಎ.ಪೃಥ್ವಿ 600 ಶೇ.96 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು ಇಬ್ಬರು, ಹಿಂದಿ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು 24 ವಿದ್ಯಾರ್ಥಿಗಳು ಹಾಗೂ ಸಮಾಜ ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸಿದ್ದು, ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿಯ ಮಂಡಳಿ ವತಿಯಿಂದ ಅಭಿನಂದಿಸಿ ಗೌರವಿಸಿದ್ದಾರೆ.
ಡಾ.ಶಾಂತ ಮರಿಯಪ್ಪ ಪಬ್ಲಿಕ್ ಹೈಸ್ಕೂಲ್ ಉತ್ತಮ ಫಲಿತಾಂಶ
2025- 26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 45 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 42 ವಿದ್ಯಾರ್ಥಿಗಳು ಉತ್ತೀಣರಾಗಿದ್ದು, 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಶಾಲೆಗೆ ಶೇಕಡ 94% ರಷ್ಟು ಫಲಿತಾಂಶವನ್ನು ತಂದು ಕೊಟ್ಟಿದ್ದಾರೆ.
ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿಯ ಎಂ.ಸ್ವರೂಪ್ ಚಂದ್, ಸಿ.ಅಪೂರ್ವ ಚಂದ್ರ ಮುಖ್ಯೋಪಾಧ್ಯಾಯರಾದ ಕೆ.ಎನ್.ವರದರಾಜ್ ಆಡಳಿತಾಧಿಕಾರಿಗಳಾದ ರವಿ ಅವರುಗಳು ಅಭಿನಂದಿಸಿ ಗೌರವಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್
ಶಿವಮೊಗ್ಗ: ಜೋಗದ ಜಲಪಾತಕ್ಕೆ ಜಿಲ್ಲಾಧಿಕಾರಿ ಭೇಟಿ, ಕಾಮಗಾರಿಗಳ ಪರಿಶೀಲನೆ








