ಇಂಫಾಲ: ಶಾಂತಿಯ ನಿರೀಕ್ಷೆಯಲ್ಲಿದ್ದ ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರದ ಕಾರ್ಮೋಡ ಕವಿದಿದೆ. ಉಖ್ರುಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-202ರಲ್ಲಿ ಶಂಕಿತ ಉಗ್ರರು ನಡೆಸಿದ ಭೀಕರ ಹೊಂಚುದಾಳಿಯಲ್ಲಿ ನಿವೃತ್ತ ಯೋಧ ಸೇರಿದಂತೆ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ. ಈ ಘಟನೆಯಿಂದಾಗಿ ಇಂಫಾಲ ಕಣಿವೆಯಲ್ಲಿ ಜನಾಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ.
ಶನಿವಾರ ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಇಂಫಾಲದಿಂದ ಉಖ್ರುಲ್ ಕಡೆಗೆ ತೆರಳುತ್ತಿದ್ದ ಖಾಸಗಿ ವಾಹನಗಳ ಮೇಲೆ ಲಿಟಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಎಂ. ಕಸೋಮ್ ಬಳಿ ಗುಂಡಿನ ದಾಳಿ ನಡೆದಿದೆ. ಉಗ್ರರು ಬೆಟ್ಟದ ಮೇಲ್ಭಾಗದಿಂದ ವಾಹನಗಳ ಮೇಲೆ ಸತತವಾಗಿ ಗುಂಡು ಹಾರಿಸಿದ್ದಾರೆ.
ಮೃತರನ್ನು ತಶಾರ್ ಗ್ರಾಮದ ನಿವೃತ್ತ ಯೋಧ ಚಿನಾವೋಶಾಂಗ್ ಶೋಕ್ವುಂಗ್ನಾವೊ (45) ಮತ್ತು ಖರಸೋಮ್ ಗ್ರಾಮದ ಯರುಯಿಂಗಮ್ ವಶುಮ್ (42) ಎಂದು ಗುರುತಿಸಲಾಗಿದೆ.
ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.








