ಶಿವಮೊಗ್ಗ: “ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪಬೇಕಾದರೆ ಅಧಿಕಾರಿಗಳ ನಡುವೆ ಸಮನ್ವಯತೆ ಅತ್ಯಗತ್ಯ. ನಿಮ್ಮ ನಡುವಿನ ಸಮನ್ವಯದ ಕೊರತೆಯಿಂದಾಗಿ ಕುಡಿಯುವ ನೀರು ಸೇರಿದಂತೆ ಹಲವು ಸೌಲಭ್ಯಗಳು ಜನರಿಗೆ ಸಿಗುತ್ತಿಲ್ಲ. ಮೊದಲು ಒಬ್ಬರ ಮೇಲೆ ಒಬ್ಬರು ದೂರು ಹೇಳುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಿ,” ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರವಾಸಿ ಮಂದಿರದಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತಾದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮನ್ವಯತೆ ಕೊರತೆಗೆ ಶಾಸಕರ ಕಿಡಿ
ಗ್ರಾಮೀಣ ಭಾಗದಲ್ಲಿ ಬೇಸಿಗೆಯ ಬೇಗೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಸಂದರ್ಭದಲ್ಲಿ ಮೆಸ್ಕಾಂ, ನೀರು ನೈರ್ಮಲ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಶಾಸಕರು ಸೂಚಿಸಿದರು. “ಕೆಲವು ಕಡೆ ಟಿ.ಸಿ. (ಟ್ರಾನ್ಸ್ಫಾರ್ಮರ್) ಅಳವಡಿಸಿದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅಧಿಕಾರಿಗಳ ಇಂತಹ ಬೇಜವಾಬ್ದಾರಿಯಿಂದ ಸಾಮಾನ್ಯ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಇನ್ನು ಮುಂದೆ ಇಂತಹ ನಿರ್ಲಕ್ಷ್ಯ ಸಹಿಸುವುದಿಲ್ಲ,” ಎಂದು ಖಾರವಾಗಿ ಎಚ್ಚರಿಸಿದರು.
ನೀರಿನ ಸಮಸ್ಯೆಗೆ ಶಾಸಕರು ನೀಡಿದ ಪ್ರಮುಖ ಸೂಚನೆಗಳು:
-
ಟ್ಯಾಂಕರ್ ಮೂಲಕ ನೀರು: ನೀರಿನ ಮೂಲಗಳು ಬತ್ತಿರುವ ಪ್ರದೇಶಗಳನ್ನು ತಕ್ಷಣ ಗುರುತಿಸಿ, ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು.
-
ಅಪೂರ್ಣ ಯೋಜನೆಗಳು: ‘ಮನೆಮನೆ ಗಂಗೆ’ ಯೋಜನೆ ಕೇಂದ್ರ ಮತ್ತು ರಾಜ್ಯದ ಜಂಟಿ ಯೋಜನೆಯಾಗಿದ್ದರೂ, ಕೇಂದ್ರದಿಂದ ಹಣ ಬಿಡುಗಡೆಯಾಗುತ್ತಿಲ್ಲ. ಆದರೂ ಜನರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವೇ ಹಣ ಭರಿಸಿ ನೀರು ಪೂರೈಸುತ್ತಿದೆ. ಈ ಕಾರ್ಯದಲ್ಲಿ ವಿಳಂಬವಾಗಬಾರದು.
-
ವಿದ್ಯುತ್ ಕಳ್ಳತನಕ್ಕೆ ತಡೆ: ನೀರಿನ ಸಂಪರ್ಕಕ್ಕಾಗಿ ವಿದ್ಯುತ್ ಕಳ್ಳತನ ಮಾಡುತ್ತಿರುವ ದೂರುಗಳು ಕೇಳಿಬಂದಿವೆ. ರೈತರು ಇಂತಹ ಕೆಲಸಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿದರು.
-
ಮಿತ ಬಳಕೆ: ನಗರ ಪ್ರದೇಶದಲ್ಲೂ ನೀರಿನ ಅಭಾವವಿರುವುದರಿಂದ ಜನರು ಮಿತವಾಗಿ ನೀರು ಬಳಸಬೇಕು ಎಂದು ಕೋರಿದರು.
ತ್ಯಾಗರ್ತಿ ಗ್ರಿಡ್ ವಿಳಂಬಕ್ಕೆ ರಾಜಕೀಯ ಕೈವಾಡದ ಆರೋಪ
ತಾಲೂಕಿನ ಮೂರು ಗ್ರಿಡ್ಗಳ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದರೆ ತ್ಯಾಗರ್ತಿ ಗ್ರಿಡ್ ಕಾಮಗಾರಿ ವಿಳಂಬವಾಗಲು ವಿರೋಧ ಪಕ್ಷದವರ ಕೈವಾಡವಿದೆ ಎಂದು ಶಾಸಕರು ಆರೋಪಿಸಿದರು. ಕೆಲವರು ಉದ್ದೇಶಪೂರ್ವಕವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಅಂತಹವರ ವಿರುದ್ಧ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಮುಹೂರ್ತ
ಸಾಗರ ನಗರದ ಪ್ರಮುಖ ರಸ್ತೆಯಾದ ಮಾರ್ಕೆಟ್ ರಸ್ತೆಯ ಅಗಲೀಕರಣ ಕಾಮಗಾರಿ ಮೇ ಎರಡನೇ ವಾರದಿಂದ ಆರಂಭವಾಗಲಿದೆ. ಜಾಗದ ಮಾಲೀಕರು ಕೂಡಲೇ ‘ಈ ಸ್ವತ್ತು’ ಮಾಡಿಸಿಕೊಳ್ಳಬೇಕು. ಅವರಿಗೆ ಅಗತ್ಯ ಸಹಕಾರ ನೀಡುವಂತೆ ನಗರಸಭೆಗೆ ಸೂಚನೆ ನೀಡಲಾಗಿದೆ. ರಸ್ತೆಗಾಗಿ ಜಾಗ ನೀಡುವವರಿಗೆ ಈಗಾಗಲೇ ಪರಿಹಾರ ಹಣ ಬಿಡುಗಡೆಯಾಗಿದ್ದು, ಶೀಘ್ರವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಭೆಯಲ್ಲಿ ಸಾಗರ ತಾಲೂಕು ಪಂಚಾಯಿತಿ ಇಒ ಶಿವಪ್ರಕಾಶ್ ಬಿ.ಎಲ್., ನೀರು ನೈರ್ಮಲ್ಯ ಇಲಾಖೆಯ ಗುರುಕೃಷ್ಣ ಶೆಣೈ, ಲೋಕೋಪಯೋಗಿ ಇಲಾಖೆಯ ಅನಿಲ್, ಮೋಹನ್, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ರಮೇಶ್ ಟಿ.ಪಿ. ಶ್ರೀನಿವಾಸ್ ಮೂರ್ತಿ, ಚಂದ್ರಶೇಖರ್, ಮೌನೇಶ್ ಇನ್ನಿತರರು ಹಾಜರಿದ್ದರು.
ಸುಸೂತ್ರವಾಗಿ ನಡೆದ ಸಿಇಟಿ ಕನ್ನಡ ಪರೀಕ್ಷೆ: ಶೇ.46ರಷ್ಟು ಅಭ್ಯರ್ಥಿಗಳು ಹಾಜರು








