ಬೆಂಗಳೂರು: ರಾಜ್ಯದಲ್ಲಿ ದಶಕಗಳಿಂದ ಚರ್ಚೆಯಲ್ಲಿದ್ದ ಮತ್ತು ರಾಜಕೀಯವಾಗಿ ಕಗ್ಗಂಟಾಗಿದ್ದ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇಂದು ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಹಂಚಿಕೆಯ **’ತ್ರಿ-ಸೂತ್ರ’**ವನ್ನು ಅಂತಿಮಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ. ಎಡಗೈ ಸಮುದಾಯದವರಿಗೆ 5.25, ಬಲಗೈ ಸಮುದಾಯದವರಿಗೆ 5.25 ಹಾಗೂ ಇತರೆ ಸಮುದಾಯದವರಿಗೆ 4.5ರಷ್ಟು ಮೀಸಲಾತಿ ಕಲ್ಪಿಸುವಂತ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಇಂದು ವಿಶೇಷ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ರಾಷ್ಟ್ರದಲ್ಲೇ ಅತೀ ಮಹತ್ವದ್ದಾಗುವಂತ ನಿರ್ಣಯವನ್ನು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ವಿಶೇಷ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ವಿಷಯವು ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಎಲ್ಲಾ ಸಮುದಾಯಗಳನ್ನು ಮನವೊಲಿಸಿ, ಒಪ್ಪಿಸಿ, ವಿಧಾನಸಭೆ, ಪರಿಷತ್ತಿನಲ್ಲಿಯೂ ಇದಕ್ಕೆ ಸಂಬಂಧಿಸಿದಂತ ಕಾನೂನು ಮಾಡುವಾಗ ಸದನವನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಾನುಮತದಲ್ಲಿ ಆಗುವಂತೆ ಸಿಎಂ ಸಿದ್ಧರಾಮಯ್ಯ ಮಾಡಿದ್ದಾರೆ ಎಂದರು.
ಒಳ ಮೀಸಲಾತಿ ಸಂಬಂಧ ರೋಷ್ಟರ್ ನಲ್ಲಿ ಏನು ವ್ಯತ್ಯಾಸವಾಗಿತ್ತು ಅದನ್ನು ಸಿಎಂ ಸಿದ್ಧರಾಮಯ್ಯ ಸರಿ ಪಡಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಯಶಸ್ವಿಯಾಗಿದ್ದಾರೆ ಎಂದರು.
ಈ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ಒಳ ಮೀಸಲಾತಿ ಸಂಬಂಧ ಬಹಳಷ್ಟು ಹೋರಾಟಗಳು ನಡೆದಿದ್ದಾವೆ. ಪಕ್ಷದ ವತಿಯಿಂದಲೂ ಚಿತ್ರದುರ್ಗದಲ್ಲಿ ಒಂದು ಸಮಾವೇಶ ಏರ್ಪಾಡು ಮಾಡಲಾಗಿತ್ತು. ಡಾ.ಪರಮೇಶ್ವರ್ ನೇತೃತ್ವದಲ್ಲಿ ಆ ಸಮಾವೇಶ ನಡೆಯಿತು. ಅಲ್ಲಿ ಒಳ ಮೀಸಲಾತಿ ಮಾಡಲು ಎಲ್ಲಾ ಗುಂಪುಗಳು ಕೂಡ, ಎಸ್ಸಿಯಲ್ಲಿ 101 ಜಾತಿಗಳು ಬರುತ್ತವೆ. 59 ಅಲೆಮಾರಿ ಜಾತಿಗಳು ಭಾಗವಹಿಸಿದ್ದವು. ಅಲ್ಲಿ ಒಳ ಮೀಸಲಾತಿ ಮಾಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು ಎಂದರು.
ಚುನಾವಣೆ ಸಂದರ್ಭದಲ್ಲಿ, ಪೂರ್ವದಲ್ಲಿ ಡಾ.ಜಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪ್ರಣಾಣಿಕೆ ಸಮಿತಿ ರಚನೆಯಾಗಿತ್ತು. ಆ ಪ್ರಣಾಣಿಕೆ ಸಮಿತಿಯೂ ಸರ್ಕಾರ ನೀಡಲಿದೆ ಎಂದು ತಿಳಿಸಿತ್ತು. 1-08-2024ರಂದು ಸುಪ್ರೀಂ ಕೋರ್ಟ್ ಒಂದು ತೀರ್ಮಾನ ನೀಡಿದೆ. ಒಳ ಮೀಸಲಾತಿ ಮಾಡಬಹುದು ಎಂಬುದಾಗಿ ತೀರ್ಪು ನೀಡಿದೆ. ಅದು 7 ಜಡ್ಜ್ ಪೀಠವು ನೀಡಿದಂತ ತೀರ್ಪು ಆಗಿತ್ತು. ಒಳ ಮೀಸಲಾತಿ ಮಾಡಲು ಸಂವಿಧಾನದ ವಿರೋಧವಿಲ್ಲ ಎಂದು ನ್ಯಾಯಪೀಠವು ಹೇಳಿತ್ತು. ಆ ತೀರ್ಪಿನ ನಂತ್ರ ನಾವು ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಅವರು ವರದಿಯನ್ನು ನೀಡಿದ್ದಾರೆ. ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಇರಿಸಿ, ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ನಾಗಮೋಹನ್ ದಾಸ್ ನೀಡಿದಂತ ವರದಿಯಲ್ಲಿ ಎ, ಬಿ, ಸಿ, ಡಿ ಎಂಬುದಾಗಿ ವರ್ಗ ಮಾಡಿ ಮೀಸಲಾತಿ ನೀಡಲಾಗಿತ್ತು. ಎಡಗೈ 6, ಬಲಗೈ 6, ಇತರರಿಗೆ 5ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿತ್ತು. ರಾಜ್ಯಪಾಲರು ಕಾನೂನು ಮಾಡಿದ್ದರು. ಅದಕ್ಕೆ ಸಹಿ ಕೂಡ ಹಾಕಲಾಗಿತ್ತು. ಆದರೇ ರೋಷ್ಟರ್ ಪಾಯಿಂಟ್ ನಲ್ಲಿ ಸಮಸ್ಯೆ ಆಗಿತ್ತು. ಅಲೆಮಾರಿಯವರು ಕೋರ್ಟ್ ಗೆ ಹೋದರು. ಮೀಸಲಾತಿ 50% ಗಿಂತ ಜಾಸ್ತಿಯಾಗಬಾರದು ಎಂಬುದಾಗಿ ತಿಳಿಸಿತು ಎಂದರು.
ಇದೆಲ್ಲದರ ನಡುವೆ ರೋಸ್ಟರ್ ಪಾಯಿಂಟ್ ಸರಿಯಿಲ್ಲ ಎಂಬುದಾಗಿ ಸಮುದಾಯಗಳಿಂದ ಪ್ರತಿಭಟನೆ ಮುಂದುವರೆಯುತ್ತಲೇ ಇತ್ತು. ಮಾರ್ಚ್.27ರಂದು ವಿಶೇಷ ಸಚಿವ ಸಂಪುಟ ಸಭೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೇ ಚುನಾವಣಾ ನೀತಿ ಸಂಹಿತೆಯ ಕಾರಣ ವಿಶೇಷ ಸಚಿವ ಸಂಪುಟ ಸಭೆಯನ್ನು ಮಾಡಲಾಗಲಿಲ್ಲ. ಏಪ್ರಿಲ್.24ರ ಇಂದಿಗೆ ವಿಶೇಷ ಸಚಿವ ಸಂಪುಟ ನಿಗದಿ ಮಾಡಲಾಗಿತ್ತು. ಇಂದಿನ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಲೇ ಬೇಕು ಎಂಬುದಾಗಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿದಾಗ ಚೀಫ್ ಸೆಕ್ರೆಟರಿ ನೇತೃತ್ವದಲ್ಲಿ ಟೆಕ್ನಿಕಲ್ ಕಮಿಟಿ ರಚಿಸುವ ಸಲಹೆ ಮಾಡಲಾಗಿತ್ತು. ಅವರು ಇಂದು ತಮ್ಮ ವರದಿಯನ್ನು ನೀಡಿದ್ದಾರೆ ಎಂದರು.
ಈ ಎಲ್ಲ ಕಾರಣದಿಂದಾಗಿ ಎಡಗೈ ಸಮುದಾಯಕ್ಕೆ 5.3, ಬಲಗೈ ಸಮುದಾಯಕ್ಕೆ 5.3, ಇತರಿಗೆ 4.4 ರೋಷ್ಟರ್ ನಂತೆ ಮೀಸಲಾತಿ ನಿಗದಿ ಪಡಿಸಲು ವರದಿ ನೀಡಲಾಗಿದೆ. ನಾವು ಅಂತಿಮವಾಗಿ ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರೋದು ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25, ಇತರೆ ಸಮುದಾಯಕ್ಕೆ 4.5 ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಘೋಷಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು








