ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ಹಣ ಕೇವಲ ಸಂಸಾರಕ್ಕಷ್ಟೇ ಅಲ್ಲ, ಮಕ್ಕಳ ಭವಿಷ್ಯ ರೂಪಿಸುವ ಶಕ್ತಿಯಾಗಿಯೂ ಪರಿಣಮಿಸಿದೆ. ಮೈಸೂರಿನ ಮಾಧುರಿ ಆರ್. ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಗಳಿಸಿರುವುದೇ ಇದಕ್ಕೆ ತಾಜಾ ಉದಾಹರಣೆ. ಈ ಸಾಧಕ ಬಾಲಕಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು, ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಮಹತ್ತರವಾದ ಬದಲಾವಣೆ ತರುತ್ತಿವೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಹೇಳಿದ್ದಾರೆ.
ಮಾಧುರಿ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಡಿ.ಕೆ. ಶಿವಕುಮಾರ್, “ನಮ್ಮ ಗ್ಯಾರಂಟಿ ಯೋಜನೆಗಳು ಇಂತಹ ಹತ್ತು ಹಲವು ಸಾಧನೆಗಳಿಗೆ ಮುನ್ನುಡಿ ಬರೆದಿವೆ. ಬಡವರ ಮನೆಯ ಮಗು ಇಂದು ಸ್ಟೇಟ್ ರ್ಯಾಂಕ್ ಪಡೆಯಲು ಗ್ಯಾರಂಟಿ ಹಣವೇ ಆಧಾರವಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯ. ನಮ್ಮ ಸರ್ಕಾರ ನಮ್ಮ ಹೆಮ್ಮೆ (ಮೈ ಗವರ್ನಮೆಂಟ್-ಮೈ ಪ್ರೌಡ್), ನಮ್ಮ ಗ್ಯಾರಂಟಿ ನಮ್ಮ ಹೆಮ್ಮೆ (ಮೈ ಗ್ಯಾರಂಟಿ-ಮೈ ಪ್ರೌಡ್) ಎಂಬುದು ಈ ಮೂಲಕ ಸಾಬೀತಾಗಿದೆ” ಎಂದು ಹೇಳಿದ್ದಾರೆ
ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ವ್ಯವಸ್ಥೆಗೆ ಹೊರೆ ಎನ್ನುವ ವಿರೋಧ ಪಕ್ಷದವರು ಇನ್ನಾದರೂ ಅಸತ್ಯ ನುಡಿಯುವುದನ್ನು ಮತ್ತು ದಾರಿತಪ್ಪಿಸುವುದನ್ನು ನಿಲ್ಲಿಸಲಿ. ಆರ್ಥಿಕ ಅಡೆತಡೆಗಳ ಕಾರಣದಿಂದ ಶಿಕ್ಷಣದಲ್ಲಿ ಹಿಂದೆ ಬೀಳುತ್ತಿದ್ದ ಅನೇಕ ವಿದ್ಯಾರ್ಥಿಗಳಿಗೆ ಗ್ಯಾರಂಟಿ ಯೋಜನೆಗಳು ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಗ್ಯಾರಂಟಿ ಯೋಜನೆಗಳು “ಓದಿಗೆ ನೆರವು, ಭವಿಷ್ಯಕ್ಕೆ ಭರವಸೆ” ಮೂಡಿಸುತ್ತಿವೆ ಎಂದು ಹೇಳಿದ್ದಾರೆ.
ಬದಲಾವಣೆ ತರುತ್ತಿರುವ ಪಂಚ ಗ್ಯಾರಂಟಿಗಳು
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಅಂಕಿ-ಅಂಶಗಳಲ್ಲ, ಅವು ಜನರ ಜೀವನದ ದಿಕ್ಕನ್ನೇ ಬದಲಿಸುತ್ತಿವೆ. ಯಾರೋ ದೇವರಿಗೆ ಕಿರೀಟ ಮಾಡಿಸಿದರೆ, ಇನ್ಯಾರೋ ಜೀವನೋಪಾಯಕ್ಕಾಗಿ ಬಳೆ ಅಂಗಡಿ ಅಥವಾ ಗೂಡು ಅಂಗಡಿ ಇಟ್ಟುಕೊಂಡು ಸ್ವಾವಲಂಬಿಗಳಾಗುತ್ತಿದ್ದಾರೆ. ಈಗ ಶಿಕ್ಷಣ ರಂಗದಲ್ಲೂ ಗ್ಯಾರಂಟಿ ಯೋಜನೆಗಳು ಕ್ರಾಂತಿ ಮಾಡುತ್ತಿವೆ ಎಂಬುದಕ್ಕೆ ಮಾಧುರಿಯೇ ಸಾಕ್ಷಿ. ರಾಜ್ಯದ ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ಯೋಜನೆಗಳು ನಿಜವಾದ ಅರ್ಥದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿದ್ಯಾರ್ಥಿನಿಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದು ಹೇಗೆ?
ಮೈಸೂರು ತಾಲೂಕಿನ ಇಲವಾಲದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಮಾಧುರಿ, 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಟಾಪರ್ ಆಗಿದ್ದಾರೆ. ಮಾಧುರಿ ತಾಯಿ ಸರಿತಾ ಅವರು ಈ ಹಿಂದೆ ಖಾಸಗಿ ಸಂಸ್ಥೆಯಲ್ಲಿದ್ದರು, ಆದರೆ ಅನಾರೋಗ್ಯದ ಕಾರಣ ಕೆಲಸ ಬಿಡಬೇಕಾಯಿತು. ಆ ಸಂಕಷ್ಟದ ಸಮಯದಲ್ಲಿ ಆಸರೆಯಾಗಿದ್ದು ಗೃಹಲಕ್ಷ್ಮಿ ಯೋಜನೆ. ಸರ್ಕಾರ ನೀಡುವ ತಿಂಗಳ 2 ಸಾವಿರ ರೂಪಾಯಿ ಹಣವನ್ನು ಉಳಿಸಿ, ಅದರಲ್ಲಿ ಮಾಧುರಿಗೆ ಟ್ಯೂಷನ್ ಫೀಸ್ ಕಟ್ಟಿದ್ದರು. ತಾಯಿಯ ಈ ತ್ಯಾಗಕ್ಕೆ ಮಾಧುರಿ ಇಂದು ರ್ಯಾಂಕ್ ಪಡೆಯುವ ಮೂಲಕ ಅದ್ಭುತ ಉಡುಗೊರೆ ನೀಡಿದ್ದಾರೆ.








