ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಹೂರ್ತ ನಿಗದಿಯಾಗುವ ಪ್ರಕ್ರಿಯೆ ಚುರುಕುಗೊಂಡಿದೆ. ಇಂದು ಸಂಜೆ ನಡೆಯಲಿರುವ ಮಹತ್ವದ ಶಾಸಕಾಂಗ ಪಕ್ಷದ (CLP) ಸಭೆಗೂ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಠಾತ್ತನೆ ರಾಜಭವನಕ್ಕೆ ಧಾವಿಸಿ, ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ರಾಜ್ಯಪಾಲರೊಂದಿಗಿನ ಈ ಭೇಟಿಯ ವೇಳೆ ಡಿ.ಕೆ. ಶಿವಕುಮಾರ್ ಅವರು ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಜೂನ್ 1 ಅಥವಾ ಜೂನ್ 5 ರ ದಿನಾಂಕಗಳನ್ನು ತಾತ್ಕಾಲಿಕವಾಗಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಆದರೆ, ಇವೆಲ್ಲದರ ಮಧ್ಯೆ ರಾಜಕೀಯ ಲೆಕ್ಕಾಚಾರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ 3 ರಂದೇ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಅಜ್ಜಯ್ಯನ ಮಠಕ್ಕೆ ಭೇಟಿ: ಶುಭ ಮುಹೂರ್ತದ ಲೆಕ್ಕಾಚಾರ
ರಾಜ್ಯಪಾಲರನ್ನು ಭೇಟಿ ಮಾಡಿದ ತಕ್ಷಣವೇ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ನಾಗರಬಾವಿ ಸಮೀಪವಿರುವ ಪ್ರಸಿದ್ಧ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿದರು. ಅಜ್ಜಯ್ಯನ ಪರಮ ಭಕ್ತರಾಗಿರುವ ಶಿವಕುಮಾರ್ ಅವರು ಮಠದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಮಠದ ಪ್ರಮುಖರೊಂದಿಗೆ ಪ್ರಮಾಣವಚನ ಸ್ವೀಕಾರದ ದಿನಾಂಕದ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.
ಮಠದ ಮೂಲಗಳ ಪ್ರಕಾರ, ಜೂನ್ 3 ರಂದು ಅತ್ಯಂತ ಶುಭ ದಿನ ಹಾಗೂ ಮುಹೂರ್ತ ಚೆನ್ನಾಗಿದೆ ಎಂದು ಅಜ್ಜಯ್ಯನ ಪೀಠವು ತಿಳಿಸಿದೆ. ಅದರಲ್ಲೂ ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ಜಾತಕ ಮತ್ತು ಗ್ರಹಗತಿಗಳ ಲೆಕ್ಕಾಚಾರದ ಪ್ರಕಾರ ಜೂನ್ 3 ರಂದು ಅಧಿಕಾರ ಸ್ವೀಕರಿಸುವುದು ಅವರ ರಾಜಕೀಯ ಭವಿಷ್ಯಕ್ಕೆ ಅತ್ಯಂತ ಯೋಗದಾಯಕ ಮತ್ತು ಯಶಸ್ವಿ ಮುಹೂರ್ತವಾಗಿದೆ ಎಂದು ಪೀಠವು ಗ್ರೀನ್ ಸಿಗ್ನಲ್ ನೀಡಿದೆ.
ಜೂನ್ 3ಕ್ಕೇ ಫಿಕ್ಸ್ ಆಗ್ತಾ ಡೇಟ್?
ಮಠದ ಮಾರ್ಗದರ್ಶನ ಮತ್ತು ಜಾತಕದ ಬಲವನ್ನು ಗಂಭೀರವಾಗಿ ಪರಿಗಣಿಸಿರುವ ಡಿ.ಕೆ. ಶಿವಕುಮಾರ್ ಅವರು ಜೂನ್ 3 ರಂದೇ ಪ್ರಮಾಣವಚನ ಸ್ವೀಕರಿಸಲು ತೀವ್ರ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರಿಗೆ ಆರಂಭದಲ್ಲಿ ಜೂನ್ 1 ಮತ್ತು 5 ರ ದಿನಾಂಕಗಳನ್ನು ನೀಡಲಾಗಿದ್ದರೂ, ಅಜ್ಜಯ್ಯನ ಪೀಠದ ಸಲಹೆಯಂತೆ ಜೂನ್ 3 ನೇ ತಾರೀಖನ್ನೇ ಅಂತಿಮಗೊಳಿಸುವ ಸಾಧ್ಯತೆ ಶೇಕಡಾ 90 ರಷ್ಟಿದೆ. ಇಂದು ಸಂಜೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.








