ಬೆಂಗಳೂರು : ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇ 60 ರಷ್ಟು ಏರಿಕೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಾಜ್ಯದ ಕೋಟ್ಯಂತರ ಕಾರ್ಮಿಕರಿಗೆ ಸರ್ಕಾರ, ಕಾರ್ಮಿಕ ಇಲಾಖೆಯ ಮೂಲಕ ಭರ್ಜರಿ ಕೊಡುಗೆ ನೀಡಿದೆ.
ಈ ಅಧಿಸೂಚನೆಯು ರಾಜ್ಯದ ಅಸಂಘಟಿತ ಮತ್ತು ನಿರ್ದಿಷ್ಟ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸಲಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಈ ವೇತನ ಪರಿಷ್ಕರಣೆಯನ್ನು ಮಾಡಲಾಗಿದೆ.
ಒಂದೇ ಅಧಿಸೂಚನೆಯಡಿ ತರಲಾಗಿದೆ
ಈ ಬಾರಿಯ ಅಧಿಸೂಚನೆಯ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಎಲ್ಲಾ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತಂದಿರುವುದು. ಈ ಹಿಂದೆ ಇದ್ದ ನಾಲ್ಕು ವಲಯಗಳ ವರ್ಗೀಕರಣವನ್ನು ಮೂರು ವಲಯಗಳಿಗೆ ಪರಿಷ್ಕರಿಸಲಾಗಿದೆ.
ಯಾರಿಗೆ ಲಾಭವಾಗಲಿ
ನೂತನ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಅಧಿಸೂಚನೆಯು ಖಾಸಗಿ ಶಾಲೆ- ಕಾಲೇಜು ಬೋಧಕೇತನ ಸಿಬ್ಬಂದಿ, ಇ-ಕಾಮರ್ಸ್ ವಲಯದ ನೌಕರರು ಮತ್ತು ಕೋರಿಯರ್ ಸಂಸ್ಥೆಗಳ ನೌಕರರು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿಗೂ ಲಾಭ ಮಾಡಿಕೊಟ್ಟಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿನ 81 ಅನುಸೂಚಿತ ಉದ್ಯೋಗಗಳಲ್ಲಿ ದುಡಿಯುವ ಶ್ರಮಿಕರಿಗೆ ಅನುಕೂಲವಾಗಲಿದೆ.
ಈಡೇರಿದ ಬಹುದಿನಗಳ ಬೇಡಿಕೆ
ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ವಿವಿಧ ಸಂಘಟನೆಗಳು, ಕಾರ್ಮಿಕರ ಒಕ್ಕೂಟಗಳು ಇದಕ್ಕಾಗಿ ಬೇಡಿಕೆ ಇಟ್ಟಿದ್ದವು. ಇದೀಗ ಕಾರ್ಮಿಕ ಇಲಾಖೆ ಸ್ಪಂದಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ನಡೆಸಲು ಕಷ್ಟಪಡುತ್ತಿದ್ದ ಕಾರ್ಮಿಕ ವಲಯಕ್ಕೆ ಈ ಕನಿಷ್ಠ ವೇತನ ಪರಿಷ್ಕರಣೆಯು ದೊಡ್ಡ ಮಟ್ಟದ ಅನುಕೂಲ ಮಾಡಿಕೊಡಲಿದೆ. ಪರಿಷ್ಕೃತ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಕಳೆದ ವರ್ಷದ ಏಪ್ರಿಲ್ 11 ರಂದು ಹೊರಡಿಸಲಾಗಿತ್ತು. 2016-2017 ರಲ್ಲಿ ಜಾರಿಗೆ ಬಂದ ಕೊನೆಯ ಪರಿಷ್ಕರಣೆಯ ಒಂದು ದಶಕದ ನಂತರ ಈ ಪರಿಷ್ಕರಣೆ ಜಾರಿಗೆ ಬಂದಿದೆ. ಕಾರ್ಮಿಕ ಸಂಘಗಳು ಕನಿಷ್ಠ ವೇತನ ಅಧಿಸೂಚನೆ ಹೊರಡಿಸಲು ಒತ್ತಾಯಿಸುತ್ತಿದ್ದವು. ಆದರೆ ಕೈಗಾರಿಕೆಗಳು, ವಿಶೇಷವಾಗಿ ಎಂಎಸ್ಎಂಇ ವಲಯದಿಂದ ವಿರೋಧ ವ್ಯಕ್ತವಾಗಿತ್ತು.
ಏರಿಕೆ ಲೆಕ್ಕಾಚಾರ ಹೇಗೆ
ವಲಯ 3 ರಲ್ಲಿನ ಕೌಶಲ್ಯರಹಿತ ಕಾರ್ಮಿಕರಿಗೆ ರೂ.19,300 ರಿಂದ ವಲಯ 1 ರಲ್ಲಿ ಹೆಚ್ಚು ಕೌಶಲ್ಯಪೂರ್ಣ ಕಾರ್ಮಿಕರಿಗೆ 31,100 ರವರೆಗೆ ಏರಿಕೆ ಮಾಡಲಾಗಿದೆ. ಎರಡು ವರ್ಷಗಳ 1,030 ಮೊತ್ತದ ವೇರಿಯಬಲ್ ಡಿಯರ್ನೆಸ್ ಭತ್ಯೆಯನ್ನು (ವಿಡಿಎ) ಕನಿಷ್ಠ ವೇತನದಲ್ಲಿ ಸೇರಿಸಲಾಗಿದೆ. ಕನಿಷ್ಠ ವೇತನ ಲೆಕ್ಕಾಚಾರ ಮಾಡಲು ರಾಜ್ಯವನ್ನು ಮೂರು ವಲಯಗಳಾಗಿ ವರ್ಗೀಕರಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರದೇಶವು ವಲಯ 1 ರ ಅಡಿಯಲ್ಲಿ ಬರಲಿದೆ. ವಲಯ 2 ರಲ್ಲಿ ಜಿಲ್ಲಾ ಕೇಂದ್ರಗಳು ಬರಲಿವೆ ಮತ್ತು ಉಳಿದ ಪ್ರದೇಶಗಳು ವಲಯ 3 ರ ಅಡಿಯಲ್ಲಿ ವರ್ಗೀಕರಿಸಲಾಗಿದೆ.
ಮೂರನೇ ರಾಜ್ಯ ಕರ್ನಾಟಕ
ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳದ ಅಧಿಸೂಚನೆಯನ್ನು ಹೊರಡಿಸಿದ ಮೂರನೇ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಈಗ ಪಾತ್ರವಾಗಿದೆ. ಈಗಾಗಲೇ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಈಗಿನ ಪ್ರಸ್ತುತ ಪರಿಷ್ಕರಣೆಯು 1991 ರ ರೆಪ್ಟಕೋಸ್ ಬ್ರೆಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರವೇ ಏರಿಕೆ ಮಾಡಲಾಗಿದೆ. ಮನೆಗಳಲ್ಲಿ ದಿನನಿತ್ಯದ ವೆಚ್ಚದ ಲೆಕ್ಕಾಚಾರದ ಮೇಲೆ ಇದನ್ನು ಜಾರಿ ಮಾಡಲಾಗಿದೆ.
ಸಚಿವ ಸಂತೋಷ್ ಲಾಡ್ ಪರಿಶ್ರಮ
ಕಾರ್ಮಿಕರ ಕನಿಷ್ಠ ವೇತನ ಜಾರಿಯಾಗುವಲ್ಲಿ ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಸಂಬಂಧ ಅವರು ವಿವಿಧ ಕಾರ್ಮಿಕ ಸಂಘಟನೆಗಳು, ಉದ್ಯೋಗದಾತರು, ತಜ್ಞರು, ಕಾನೂನು ಪರಿಣತರ ಜೊತೆಗೆ ಸಮಾಲೋಚನೆ, ಸಭೆಗಳನ್ನು ನಡೆಸಿದ್ದಾರೆ. ಅಂತಿಮವಾಗಿ ಇದೀಗ ಅಧಿಸೂಚನೆ ಹೊರಡಿಸಲಾಗಿದ್ದು, ಸಚಿವ ಲಾಡ್ ಅವರ ಕಾರ್ಯಕ್ಕೆ ಕಾರ್ಮಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೊಸ ಕನಿಷ್ಠ ವೇತನ ಜಾರಿಯಿಂದ ರಾಜ್ಯದಲ್ಲಿನ ಸಾಕಷ್ಟು ಕಾರ್ಮಿಕರಿಗೆ ಅನುಕೂಲವಾಗಲಿದೆ. ಇಎಸ್ಐ ಮತ್ತು ಪಿಎಫ್ ಗಳಿಗೆ ವೇತನ ಕಡಿತ ಮಾಡಿದ ನಂತರ ಕಾರ್ಮಿಕರಿಗೆ ಕಡಿಮೆ ವೇತನ ಉಳಿಯುತ್ತಿತ್ತು. ಕೆಲವರು ಬಿಪಿಎಲ್ ವ್ಯಾಪ್ತಿಯಿಂದಲೂ ಹೊರಗಿದ್ದರು. ಅಂತಹವರಿಗೆಲ್ಲ ಈ ಕನಿಷ್ಠ ವೇತನ ಹೆಚ್ಚಳದಿಂದ ಸಹಾಯವಾಗಲಿದೆ. ಇದೊಂದು ಕ್ರಾಂತಿಕಾರಕ ಕ್ರಮವೆಂದೇ ಹೇಳಬಹುದು. ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯವಾಗುವ ಕ್ರಮವನ್ನು ಜಾರಿ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು.- ಸಂತೋಷ್ ಎಸ್ ಲಾಡ್, ಕಾರ್ಮಿಕ ಸಚಿವ
ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಸಿದ್ಧರಾಮಯ್ಯ
ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು! | Weak Heart








