ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಕೊನೆಯ ಲೀಗ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯದ ಕಾವು ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಪ್ರೇಕ್ಷಕರಲ್ಲೂ ಗರಿಷ್ಠ ಮಟ್ಟ ತಲುಪಿದೆ. ಸಾಮಾನ್ಯವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಂಡುಬರುತ್ತಿದ್ದ ಆರ್ಸಿಬಿ ತಂಡದ ಅಭಿಮಾನಿಗಳ ಅಬ್ಬರ ಮತ್ತು ಕ್ರೇಜ್, ಇಂದು ಹೈದರಾಬಾದ್ನಲ್ಲೂ ಮುಗಿಲು ಮುಟ್ಟಿದೆ.
ಆರ್ಸಿಬಿ ಪಂದ್ಯವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿರುವುದನ್ನು ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು, ಟಿಕೆಟ್ಗಳನ್ನು ಕಪ್ಪು ಮಾರುಕಟ್ಟೆಯಲ್ಲಿ (ಬ್ಲ್ಯಾಕ್) ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿದ್ದರು. ಬೆಂಗಳೂರಿನಲ್ಲಿ ಈ ಹಿಂದೆ ನಡೆದಿದ್ದ ಟಿಕೆಟ್ ಬ್ಲ್ಯಾಕ್ ದಂಧೆಯ ಮಾದರಿಯಲ್ಲೇ ಇಲ್ಲೂ ಸಹ ಕೆಲವರು ಅಕ್ರಮವಾಗಿ ಹಣ ಗಳಿಸಲು ಹೊಂಚು ಹಾಕಿದ್ದರು. ಆದರೆ, ಈ ಕಿಡಿಗೇಡಿಗಳ ಆಟಕ್ಕೆ ಹೈದರಾಬಾದ್ ಪೊಲೀಸರು ಬ್ರೇಕ್ ಹಾಕಿದ್ದಾರೆ.
₹5 ಸಾವಿರದ ಟಿಕೆಟ್ ₹20 ಸಾವಿರಕ್ಕೆ ಮಾರಾಟ!
ಇಂದು ಸಂಜೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (ಉಪ್ಪಳ ಗ್ರೌಂಡ್) ನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಂದ್ಯ ವೀಕ್ಷಿಸಲು ಟಿಕೆಟ್ ಸಿಗದೆ ಪರದಾಡುತ್ತಿದ್ದ ಆರ್ಸಿಬಿ ಅಭಿಮಾನಿಗಳ ಅಸಹಾಯಕತೆಯನ್ನು ಈ ದಂಧೆಕೋರರು ದುರುಪಯೋಗಪಡಿಸಿಕೊಂಡಿದ್ದಾರೆ. ಅಸಲಿ ಬೆಲೆ ಕೇವಲ 5 ಸಾವಿರ ರೂಪಾಯಿ ಇದ್ದ ಟಿಕೆಟ್ಗಳನ್ನು ಬರೋಬ್ಬರಿ 20 ಸಾವಿರ ರೂಪಾಯಿಗಳ ಭಾರಿ ಮೊತ್ತಕ್ಕೆ ಅಭಿಮಾನಿಗಳಿಗೆ ಮಾರಾಟ ಮಾಡಿ ಸುಲಿಗೆ ಮಾಡುತ್ತಿದ್ದರು.
ಪೊಲೀಸರ ಕಾರ್ಯಾಚರಣೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗಳು
ಸ್ಟೇಡಿಯಂ ಸುತ್ತಮುತ್ತ ಟಿಕೆಟ್ಗಳಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದ ಸಂದರ್ಭದಲ್ಲೇ, ಈ ಬ್ಲ್ಯಾಕ್ ಟಿಕೆಟ್ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೈದರಾಬಾದ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿಶೇಷ ದಾಳಿ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕವಾಗಿ ದುಬಾರಿ ಬೆಲೆಗೆ ಟಿಕೆಟ್ ಮಾರುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ರೇಡ್ ಹ್ಯಾಂಡ್ (ಸ್ಥಳದಲ್ಲೇ) ಆಗಿ ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಪಂದ್ಯದ ಟಿಕೆಟ್ಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.








