ಹಾವೇರಿ : ಜಾಗತಿಕ ಮಟ್ಟದ ರಾಜಕೀಯ ವಿದ್ಯಮಾನಗಳು ಸ್ಥಳೀಯವಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತಿವೆ. ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿಯಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ. ಇದರ ನೇರ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಹಾಗೂ ರಾಸಾಯನಿಕ ಗೊಬ್ಬರಗಳ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬೆಲೆ ಏರಿಕೆಯ ಈ ಚಕ್ರವ್ಯೂಹಕ್ಕೆ ಸಿಲುಕಿ ಈಗಾಗಲೇ ಕಂಗಾಲಾಗಿರುವ ರಾಜ್ಯದ ರೈತರಿಗೆ, ಇದೀಗ ಮುಂಗಾರು ಹಂಗಾಮಿನ ಆರಂಭದಲ್ಲೇ ಬಿತ್ತನೆ ಬೀಜದ ತೀವ್ರ ಅಭಾವ ಎದುರಾಗಿದ್ದು, ಮತ್ತೊಂದು ಆಘಾತ ಎದುರಾಗಿದೆ.
ವಿಶೇಷವಾಗಿ ಹಾವೇರಿ ಜಿಲ್ಲೆಯ ಕೃಷಿ ಕೇಂದ್ರಗಳಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ತೀವ್ರ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಚಟುವಟಿಕೆಗಳು ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಹಾವೇರಿಯ ಪ್ರಮುಖ ಕೃಷಿ ಸಂಪರ್ಕ ಕೇಂದ್ರಕ್ಕೆ ನೂರಾರು ರೈತರು ಮುಗಿಬೀಳುತ್ತಿದ್ದಾರೆ. ಸಕಾಲಕ್ಕೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಲು ಮುಂದಾಗಿದ್ದಾರೆ. ಆದರೆ ಕೃಷಿ ಕೇಂದ್ರಗಳಲ್ಲಿ ಬೀಜದ ದಾಸ್ತಾನು ಕೊರತೆ ಇರುವುದರಿಂದ ವಿತರಣಾ ಪ್ರಕ್ರಿಯೆಯಲ್ಲಿ ತೀವ್ರ ವಿಳಂಬವಾಗುತ್ತಿದೆ.
ಕಳೆದ ಎರಡು ದಿನಗಳಿಂದ ಹಾವೇರಿ ಕೃಷಿ ಕೇಂದ್ರದಲ್ಲಿ ರೈತರ ನೂಕುನುಗ್ಗುಲು ಮುಂದುವರಿದಿದ್ದು, ಪರಿಸ್ಥಿತಿ ಹತೋಟಿ ಮೀರಿದಂತಾಗಿದೆ. ಮುಂಜಾನೆ ನಸುಕಿನ ಜಾವದಲ್ಲೇ ಹಳ್ಳಿಗಳಿಂದ ಆಗಮಿಸುತ್ತಿರುವ ರೈತರು ಗಂಟೆಗಟ್ಟಲೆ ಸರದ ಸಾಲಿನಲ್ಲಿ ನಿಲ್ಲುವಂತಾಗಿದೆ. ಮುಖ್ಯವಾಗಿ ಸೋಯಾಬಿನ್, ಶೇಂಗಾ (ನೆಲಗಡಲೆ) ಮತ್ತು ಕಡಲೆ ಬಿತ್ತನೆ ಬೀಜಗಳಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಾಲ-ಸೋಲ ಮಾಡಿ ಜಮೀನು ಹದಗೊಳಿಸಿರುವ ಅನ್ನದಾತರು, ಸೂಕ್ತ ಸಮಯದಲ್ಲಿ ಗುಣಮಟ್ಟದ ಬೀಜ ಸಿಗದೆ ಹೈರಾಣಾಗಿದ್ದಾರೆ.
ಬೀಜಕ್ಕಾಗಿ ರೈತರು ಮುಗಿಬಿದ್ದ ಹಿನ್ನೆಲೆಯಲ್ಲಿ ಕೃಷಿ ಕೇಂದ್ರದ ಆವರಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಕೊನೆಗೆ ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಗಲಾಟೆಯನ್ನು ನಿಯಂತ್ರಿಸಲು ಹೊಸ ಉಪಾಯ ಕಂಡುಕೊಂಡಿದ್ದು, ಸಾಲಿನಲ್ಲಿ ನಿಂತಿದ್ದ ರೈತರಿಗೆ ಟೋಕನ್ ಅಥವಾ ಕೂಪನ್ಗಳನ್ನು ವಿತರಿಸಿದ್ದಾರೆ. “ಇವತ್ತಿಗೆ ಬೀಜದ ದಾಸ್ತಾನು ಮುಗಿದಿದೆ, ನಾಳೆ ಬಂದು ಬೀಜ ಪಡೆದುಕೊಳ್ಳಿ” ಎಂದು ಅಧಿಕಾರಿಗಳು ಕೂಪನ್ ನೀಡಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಒಟ್ಟಾರೆಯಾಗಿ ಜಾಗತಿಕ ಯುದ್ಧದ ಪರಿಣಾಮಗಳು ನೇರವಾಗಿ ಹಳ್ಳಿಯ ರೈತನ ಬದುಕಿನ ಮೇಲೆ ಬರೆ ಎಳೆದಿದ್ದು, ಮುಂಗಾರು ಹಂಗಾಮಿನ ಆರಂಭದಲ್ಲೇ ಅನ್ನದಾತರು ಬಿತ್ತನೆ ಬೀಜಕ್ಕಾಗಿ ಬೀದಿಗಿಳಿಯುವಂತಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಸರಕಾರ ಮತ್ತು ಕೃಷಿ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಜಿಲ್ಲೆಯಾದ್ಯಂತ ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕಿದೆ.








