ಹೈದರಾಬಾದ್: ಬೇಸಿಗೆಯ ಭೀಕರ ಬಿಸಿಲಿನಿಂದ ತಂಪಾಗಲು ಬಳಸುವ ಏರ್ ಕೂಲರ್ಗಳನ್ನು ಬಳಸುವಾಗ ಕನಿಷ್ಠ ಜಾಗರೂಕತೆ ವಹಿಸದಿದ್ದರೆ ಪ್ರಾಣಕ್ಕೇ ಕುತ್ತು ಬರಬಹುದು ಎಂಬುದಕ್ಕೆ ಹೈದರಾಬಾದ್ನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಚಾಲ್ತಿಯಲ್ಲಿದ್ದ (ಆನ್ ಆಗಿದ್ದ) ಏರ್ ಕೂಲರ್ಗೆ ನೀರು ತುಂಬಿಸಲು ಹೋದ ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ ತಗುಲಿ ಜಾಗದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ನಗರದ ಎಎಸ್ ರಾವ್ ನಗರ (AS Rao Nagar) ವ್ಯಾಪ್ತಿಯಲ್ಲಿ ಗುರುವಾರ (ಮೇ 14) ಈ ಘಟನೆ ನಡೆದಿದ್ದು, ಕೃಷ್ಣ (54) ಎಂಬುವವರೇ ಮೃತಪಟ್ಟ ದುರ್ದೈವಿ.ಗುರುವಾರ ಕೃಷ್ಣ ಅವರು ತಮ್ಮ ಮನೆಯಲ್ಲಿದ್ದ ಏರ್ ಕೂಲರ್ ಆನ್ ಆಗಿರುವಾಗಲೇ ಅದಕ್ಕೆ ನೀರು ಹಾಕಲು ಯತ್ನಿಸಿದ್ದಾರೆ. ಈ ವೇಳೆ ಏಕಾಏಕಿಯಾಗಿ ಭೀಕರ ವಿದ್ಯುತ್ ಶಾಕ್ ತಗುಲಿದ್ದು, ತಕ್ಷಣ ಅವರು ಜೋರಾಗಿ ಕಿರುಚಿಕೊಂಡಿದ್ದಾರೆ. ಕಿರುಚಾಟದ ಶಬ್ದ ಕೇಳಿ ಕುಟುಂಬಸ್ಥರು ಓಡೋಡಿ ಬರುವಷ್ಟರಲ್ಲಿ ಕೃಷ್ಣ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಕರೆಂಟ್ ಆನ್ ಇರುವಾಗ ಕೂಲರ್ಗಳಿಗೆ ನೀರು ಹಾಕುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.
ಕೆಲವು ದಿನಗಳ ಹಿಂದಷ್ಟೇ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯಲ್ಲೂ ಇಂತಹುದೇ ಮತ್ತೊಂದು ಭೀಕರ ವಿದ್ಯುತ್ ಅಪಘಾತ ನಡೆದಿತ್ತು. ಮೇ 9 ರಂದು ವೇಮನಪಲ್ಲಿ ಮಂಡಲದ ಜಕ್ಕಪಲ್ಲಿ ಗ್ರಾಮದ ಪಿರಿಸಿಂಗುಲ ಕಮಲಾಕರ್ ಎಂಬ ರೈತರು ಬಟ್ಟೆ ಇಸ್ತ್ರಿ (Iron) ಮಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಪ್ರಾಣ ಕಳೆದುಕೊಂಡಿದ್ದರು.
ಇಸ್ತ್ರಿ ಪೆಟ್ಟಿಗೆಯ (Iron Box) ವೈರಿಂಗ್ನಲ್ಲಿ ದೋಷವಿದ್ದ ಕಾರಣ, ಅದನ್ನು ಮುಟ್ಟಿದ ತಕ್ಷಣ ಕಮಲಾಕರ್ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಿಎನ್ಎಸ್ (BNS) ಸೆಕ್ಷನ್ 194 ರ ಅಡಿಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕರ ಗಮನಕ್ಕೆ: ಬೇಸಿಗೆಯಲ್ಲಿ ಕೂಲರ್, ಫ್ರಿಡ್ಜ್, ಎಸಿಗಳ ಬಳಕೆ ಹೆಚ್ಚಾಗಿರುತ್ತದೆ. ಯಾವುದೇ ಕಾರಣಕ್ಕೂ ವಿದ್ಯುತ್ ಉಪಕರಣಗಳು ಚಾಲನೆಯಲ್ಲಿರುವಾಗ ನೀರು ತುಂಬಿಸುವುದು ಅಥವಾ ರಿಪೇರಿ ಮಾಡಲು ಹೋಗಬೇಡಿ. ಮೊದಲು ಸ್ವಿಚ್ ಆಫ್ ಮಾಡಿ, ಪ್ಲಗ್ ಕನೆಕ್ಷನ್ ಕಟ್ ಮಾಡಿದ ನಂತರವಷ್ಟೇ ನೀರು ತುಂಬಿಸಿ. ನಿಮ್ಮ ಜಾಗರೂಕತೆಯೇ ನಿಮ್ಮ ಜೀವಕ್ಕೆ ರಕ್ಷೆ.








