ನವದೆಹಲಿ: ಕಳೆದ ವರ್ಷ ನವೆಂಬರ್ 10 ರಂದು ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯ ಬಳಿ ನಡೆದಿದ್ದ ಭೀಕರ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಗುರುವಾರ ಮೊದಲ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ನವದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಈ ದಾಖಲೆಯು ಬರೋಬ್ಬರಿ 7,500 ಪುಟಗಳನ್ನು ಒಳಗೊಂಡಿದ್ದು, 10 ಮಂದಿ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
ಸ್ಫೋಟದ ಸಂಚು ರೂಪಿಸಿದ್ದ ಎಲ್ಲಾ 10 ಆರೋಪಿಗಳು ಅಲ್-ಖೈದಾ ಪ್ರೇರಿತ ‘ಅನ್ಸಾರ್ ಗಜ್ವತ್-ಉಲ್-ಹಿಂದ್’ (AGuH) ಎಂಬ ನಿಷೇಧಿತ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಎನ್.ಐ.ಎ ತಿಳಿಸಿದೆ.
ಪ್ರಮುಖ ಆರೋಪಿ ಸಾವು: ಈ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾದ ಡಾ. ಉಮರ್ ಉನ್ ನಬಿ ಎಂಬಾತ ಸ್ಫೋಟದ ಸಮಯದಲ್ಲಿ ಮೃತಪಟ್ಟಿದ್ದ. ಈತ ಫರೀದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿದ್ದ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.
ಈ ಭಯೋತ್ಪಾದನಾ ಸಂಚಿನಲ್ಲಿ ಹಲವು ವಿದ್ಯಾವಂತರು ಮತ್ತು ವೈದ್ಯಕೀಯ ವೃತ್ತಿಪರರು ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇವರು ‘ಆಪರೇಷನ್ ಹೆವೆನ್ಲಿ ಹಿಂದ್’ ಹೆಸರಿನಲ್ಲಿ ಭಾರತದ ವಿರುದ್ಧ ಸಂಚು ರೂಪಿಸಿದ್ದರು.
ಈ ದೋಷಾರೋಪ ಪಟ್ಟಿಯಲ್ಲಿ 588 ಸಾಕ್ಷಿಗಳ ಹೇಳಿಕೆಗಳು, 395 ಪ್ರಮುಖ ದಾಖಲೆಗಳು ಮತ್ತು 200 ಕ್ಕೂ ಹೆಚ್ಚು ವಸ್ತು ಪ್ರದರ್ಶಕಗಳನ್ನು (Exhibits) ಪುರಾವೆಯಾಗಿ ಒದಗಿಸಲಾಗಿದೆ.








