ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿಗಳ (SC) ದಶಕಗಳ ಬೇಡಿಕೆಯಾದ ‘ಒಳ ಮೀಸಲಾತಿ’ಯನ್ನು ಜಾರಿಗೊಳಿಸಿ ಕರ್ನಾಟಕ ಸರ್ಕಾರ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಹಾಗೂ ಸಚಿವ ಸಂಪುಟದ ತೀರ್ಮಾನದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಕ್ರಮ ಕೈಗೊಳ್ಳಲಾಗಿದೆ.
ಮೀಸಲಾತಿ ಹಂಚಿಕೆ: ಪರಿಶಿಷ್ಟ ಜಾತಿಗೆ ನಿಗದಿಪಡಿಸಲಾದ ಶೇ. 15ರಷ್ಟು ಮೀಸಲಾತಿಯಲ್ಲಿ ವರ್ಗವಾರು ಹಂಚಿಕೆ ಮಾಡಲಾಗಿದೆ.
ಪೃವರ್ಗ-ಎ: ಶೇ. 5.25
ಪೃವರ್ಗ-ಬಿ: ಶೇ. 5.25
ಪೃವರ್ಗ-ಸಿ: ಶೇ. 4.50
ಅತೀ ಹಿಂದುಳಿದವರಿಗೆ ಆದ್ಯತೆ: ಪೃವರ್ಗ ‘ಸಿ’ ಅಡಿಯಲ್ಲಿ ಲಭ್ಯವಿರುವ ಹುದ್ದೆಗಳಲ್ಲಿ ಶೇ. 20ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿಯಲ್ಲಿನ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ಈ ಗುಂಪಿನ ಅಭ್ಯರ್ಥಿಗಳು ಲಭ್ಯವಾಗದಿದ್ದರೆ ಮಾತ್ರ ಆ ಹುದ್ದೆಗಳನ್ನು ಪೃವರ್ಗ ‘ಸಿ’ಯ ಇತರ ಜಾತಿಗಳಿಗೆ ನೀಡಲಾಗುವುದು.
ಹಳೆಯ ಅಧಿಸೂಚನೆಗಳ ರದ್ದು: ಒಳ ಮೀಸಲಾತಿ ಅಳವಡಿಸದೆ ಈಗಾಗಲೇ ಹೊರಡಿಸಲಾಗಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಸರ್ಕಾರ ಸೂಚಿಸಿದೆ. ಈಗ ಹೊಸ ಮೀಸಲಾತಿ ನಿಯಮದನ್ವಯ ಪರಿಷ್ಕೃತ ಅಧಿಸೂಚನೆಗಳನ್ನು ಕೂಡಲೇ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಆದೇಶಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದರೆ ವಿನಾಯಿತಿ: ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದಿರುವ ಅಧಿಸೂಚನೆಗಳಿಗೆ ಈ ಹೊಸ ಆದೇಶ ಅನ್ವಯಿಸುವುದಿಲ್ಲ. ಅವುಗಳನ್ನು ಹೊರತುಪಡಿಸಿ ಉಳಿದೆಲ್ಲಾ ನೇಮಕಾತಿಗಳಿಗೆ ಒಳ ಮೀಸಲಾತಿ ಕಡ್ಡಾಯ.
400 ಬಿಂದುಗಳ ರೋಸ್ಟರ್: ಒಳ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಮಾಜ ಕಲ್ಯಾಣ ಇಲಾಖೆಯು 400 ಬಿಂದುಗಳ ಹೊಸ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ.
ಬೃಹತ್ ನೇಮಕಾತಿಗೆ ಚಾಲನೆ: ಹಣಕಾಸು ಇಲಾಖೆಯು ಈಗಾಗಲೇ ಅನುಮೋದನೆ ನೀಡಿರುವ ವಿವಿಧ ಇಲಾಖೆಗಳ ಒಟ್ಟು 56,432 ಹುದ್ದೆಗಳ ನೇರ ನೇಮಕಾತಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ನ್ಯಾಯಾಲಯದ ತೀರ್ಪಿಗೆ ಒಳಪಟ್ಟು ಜಾರಿ:
ಈ ಒಳ ಮೀಸಲಾತಿ ಜಾರಿಯು ಸದ್ಯ ಮಾನ್ಯ ಉಚ್ಚ ನ್ಯಾಯಾಲಯದಲ್ಲಿರುವ ರಿಟ್ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಸಚಿವ ಸಂಪುಟದ ಈ ನಿರ್ಧಾರವು ರಾಜ್ಯದ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳ ನಡುವೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.









