ಬೆಂಗಳೂರು: ವಾಹನಗಳ ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ತರುವ ನಿಟ್ಟಿನಲ್ಲಿ ಆಧಾರ್ ಇ-ಕೆವೈಸಿ (e-KYC) ಕಡ್ಡಾಯ ಮಾಡುವುದು ಸೂಕ್ತ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿ ಶುಕ್ರವಾರ ನಡೆದ ‘ಸಕಾಲ’ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಆಧಾರ್ ಮಾದರಿ ಅನುಸರಣೆ: ಚಾಲನಾ ಪರವಾನಗಿ (Driving License) ಪಡೆಯಲು ಆಧಾರ್ ಕಡ್ಡಾಯಗೊಳಿಸಿರುವ ಮಾದರಿಯಲ್ಲೇ, ವಾಹನಗಳ ನೋಂದಣಿಗೂ ಆಧಾರ್ ಇ-ಕೆವೈಸಿ ಏಕೆ ಕಡ್ಡಾಯ ಮಾಡಬಾರದು ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಾರ್ವಜನಿಕರಿಗೆ ಸೇವೆಗಳು ಶೀಘ್ರವಾಗಿ ತಲುಪಲು ಕೆಲವು ಪ್ರಮುಖ ಸೇವೆಗಳನ್ನು ಆಟೋಮೇಷನ್ (Automation) ಮಾಡುವ ಅಗತ್ಯವಿದೆ. ಇದರಿಂದ ಜನರಿಗೆ ವಿಳಂಬವಿಲ್ಲದೆ ಸೇವೆ ಸಿಗಲಿದೆ ಎಂದು ಅವರು ತಿಳಿಸಿದರು.
ಕುಟುಂಬ ಡೇಟಾಬೇಸ್
ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ‘ಸಕಾಲ’ ಕುಟುಂಬ ಡೇಟಾಬೇಸ್ ಅಪ್ಡೇಟ್ ಮಾಡಲಾಗುತ್ತಿದೆ. ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಸೇವೆಯ ದತ್ತಾಂಶಗಳು ಬೆರಳ ತುದಿಯಲ್ಲಿ ಲಭ್ಯವಿರಬೇಕು ಎಂಬುದು ಸರ್ಕಾರದ ಆಶಯವಾಗಿದೆ.
ಸಕಾಲಿಕ ಸೇವೆಗೆ ಸೂಚನೆ
ಸಕಾಲ ಗ್ಯಾರಂಟಿ ಯೋಜನೆಯಡಿ ಬರುವ ಸೇವೆಗಳನ್ನು ನಿಗದಿತ ಸಮಯದೊಳಗೆ ಸಾರ್ವಜನಿಕರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜನರಿಗೆ ಸುಲಭವಾಗಿ ಮತ್ತು ವೇಗವಾಗಿ ಸರ್ಕಾರಿ ಸೇವೆಗಳು ಸಿಗುವಂತಾಗಲು ತಂತ್ರಜ್ಞಾನದ ಬಳಕೆ ಅತ್ಯಗತ್ಯ ಎಂದು ಸಚಿವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.








