ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ ಸರ್ಕಾರ ರಚನೆಯ ಕಸರತ್ತು ತಾರಕಕ್ಕೇರಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ನಾಯಕ, ನಟ ವಿಜಯ್ ಅವರಿಗೆ ಅನಿರೀಕ್ಷಿತ ಹಿನ್ನಡೆಯಾಗಿದ್ದು, ಎಎಂಎಂಕೆ (AMMK) ಮುಖ್ಯಸ್ಥ ಟಿ.ಟಿ.ವಿ. ದಿನಕರನ್ ಅವರು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರಿಗೆ ಬೆಂಬಲ ಘೋಷಿಸಿದ್ದಾರೆ.
ಶುಕ್ರವಾರ ತಡರಾತ್ರಿ ರಾಜಭವನದಲ್ಲಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾದ ದಿನಕರನ್, ತಮ್ಮ ಪಕ್ಷದ ಏಕೈಕ ಶಾಸಕರ ಬೆಂಬಲ ಪಳನಿಸ್ವಾಮಿ ಅವರಿಗಿದೆ ಎಂದು ಲಿಖಿತ ಪತ್ರ ಸಲ್ಲಿಸಿದರು.
ರಾಜ್ಯಪಾಲರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಿನಕರನ್, ವಿಜಯ್ ಅವರ ಟಿವಿಕೆ ಪಕ್ಷದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು:
“ನಮ್ಮ ಪಕ್ಷದ ಶಾಸಕ ಎಸ್. ಕಾಮರಾಜ್ ಅವರು ಟಿವಿಕೆಗೆ ಬೆಂಬಲ ನೀಡಿದ್ದಾರೆ ಎಂಬ ನಕಲಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕೊಲೆ ಮತ್ತು ಸ್ಪಷ್ಟವಾದ ಫೋರ್ಜರಿ,” ಎಂದು ಅವರು ಕಿಡಿಕಾರಿದರು.
ಮನ್ನಾರ್ಗುಡಿ ಶಾಸಕ ಕಾಮರಾಜ್ ಅವರು ನಾಪತ್ತೆಯಾಗಿದ್ದಾರೆ ಮತ್ತು ಅವರನ್ನು ಟಿವಿಕೆ ನಾಯಕರು ‘ಕುದುರೆ ವ್ಯಾಪಾರ’ದ ಮೂಲಕ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ದಿನಕರನ್ ಆರೋಪಿಸಿದ್ದರು. ಆದರೆ, ನಂತರ ಶಾಸಕರು ದಿನಕರನ್ ಅವರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.
ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಅಗತ್ಯವಿದೆ. 108 ಸ್ಥಾನಗಳನ್ನು ಗೆದ್ದಿರುವ ವಿಜಯ್, ಕಾಂಗ್ರೆಸ್ ಮತ್ತು ಇತರೆ ಸಣ್ಣ ಪಕ್ಷಗಳ ಬೆಂಬಲದೊಂದಿಗೆ 116ರ ಗಡಿ ತಲುಪಿದ್ದರು. ಕೇವಲ ಎರಡು ಶಾಸಕರ ಬೆಂಬಲಕ್ಕಾಗಿ ಕಾಯುತ್ತಿದ್ದ ವಿಜಯ್ಗೆ, ದಿನಕರನ್ ಅವರ ಈ ನಡೆ ದೊಡ್ಡ ಪೆಟ್ಟು ನೀಡಿದೆ.








