ದಾವಣಗೆರೆ : ಕೊಡಗಿನ ತಡಿಯಾಂಡಮೋಳ್ ಗೆ ಚಾರಣಕ್ಕೆ ಬಂದಿದ್ದ ಕೇರಳದ ಯುವತಿ ಜಿ.ಎಸ್.ಶರಣ್ಯ (36) ಪತ್ತೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಇಂದು ಹೆಚ್ಚುವರಿಯಾಗಿ 40 ಸಿಬ್ಬಂದಿಯ 4 ತಂಡ ನಿಯೋಜಿಸಲು ಹಾಗೂ ಡ್ರೋನ್ ಕ್ಯಾಮರಾ ಬಳಸುವಂತೆ ತಿಳಿಸಲಾಗಿದ್ದು, ಒಟ್ಟು 9 ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಚಾರಣಕ್ಕಾಗಿ ಕೇರಳದಿಂದ ಒಬ್ಬರೇ ಆಗಮಿಸಿ, ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯ ಅವರು ಗೈಡ್ ಹಾಗೂ ಇನ್ನಿತರ 15 ಚಾರಣಿಗರೊಂದಿಗೆ ಕಳೆದ ಗುರುವಾರ (ಏ.2) ಕೊಡಗಿನ ಎತ್ತರದ ಗಿರಿಶ್ರೇಣಿ ತಡಿಯಂಡಮೋಳ್ ಬೆಟ್ಟಕ್ಕೆ ತೆರಳಿದ್ದರು. ಅಂದು ಮಧ್ಯಾಹ್ನ ಆಕೆ ಕಾಣೆಯಾಗಿದ್ದು, ವಿಷಯ ತಿಳಿದ ಕೂಡಲೇ ಪೊಲೀಸರು, ನಕ್ಸಲ್ ನಿಗ್ರಹದಳ, ಶ್ವಾನದಳ ಮತ್ತು ಅರಣ್ಯ ಸಿಬ್ಬಂದಿ ಸೇರಿ 50 ಜನರ ಐದು ತಂಡಗಳು ಶೋಧ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಕೊನೆಯದಾಗಿ ದೂರವಾಣಿ ಮೂಲಕ ಹೋಂಸ್ಟೇ ಸಂಪರ್ಕಿಸಿರುವ ಯುವತಿ, ತಾವು ದಾರಿತಪ್ಪಿದ್ದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಅವರ ಫೊನ್ ಲೊಕೇಷನ್ ಆಧರಿಸಿ ಶೋಧ ನಡೆಸಲಾಗುತ್ತಿದೆ. ಸ್ಥಳೀಯ ಬುಡಕಟ್ಟು ಜನರೂ ನೆರವಿಗೆ ಧಾವಿಸಿದ್ದು, ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮರಾಗಳ ನೆರವೂ ಪಡೆಯಲಾಗಿದೆ, ಇಂದಿನಿಂದ ಹೆಚ್ಚುವರಿ ತಂಡ ನಿಯೋಜಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಯುವತಿ ಪತ್ತೆಗೆ ಮುಖ್ಯಮಂತ್ರಿ ಸೂಚನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾರಣಕ್ಕೆ ತೆರಳಿದ್ದ ಯುವತಿ ಕಾಣಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಇನ್ನೂ ಹೆಚ್ಚುವರಿಯಾಗಿ 40 ಅರಣ್ಯ ಸಿಬ್ಬಂದಿಯನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ. ಕಾಣೆಯಾಗಿರುವ ಯುವತಿಯ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ಮುಂದುವರಿದಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿ ತೆರೆಯಿರಿ ಇಲ್ಲವೇ ನರಕ ಅನುಭವಿಸ್ತೀರಿ: ಇರಾನ್ ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಖಡಕ್ ವಾರ್ನಿಂಗ್!
ನಿರುದ್ಯೋಗಿಗಳಿಗೆ ಬಂಪರ್ ಅವಕಾಶ: ‘ಇ-ಕಾರ್ಟ್ ಫ್ರಾಂಚೈಸಿ’ ತೆರೆಯಿರಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸಿ








