ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಅಡ್ಡೇರಿ ಗ್ರಾಮದ ಬಡ ಕುಟುಂಬದ ಜಮೀನಿಗೆ ನುಗ್ಗಿ, ಬೆಳೆದು ನಿಂತಿದ್ದ ಫಸಲನ್ನು ಕಿತ್ತು ಹಾಕಿರುವುದು ಅತ್ಯಂತ ಅಮಾನವೀಯ ಕೃತ್ಯ. ಈ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ತಕ್ಷಣವೇ ರಕ್ಷಣೆ ನೀಡಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಆಗ್ರಹಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಡ್ಡೇರಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅರಣ್ಯ ಇಲಾಖೆಯಿಂದ ಹಾನಿಗೊಳಗಾದ ಸುಜಾತ ಗಣಪತಿ ಅವರ ತೋಟದ ಬೆಳೆ ಕಿತ್ತ ಸ್ಥಳವನ್ನು ಪರಿಶೀಲಿಸಿದರು. ಬಳಿಕ ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (DFO) ಜೊತೆ ಸುದೀರ್ಘ ಚರ್ಚೆ ನಡೆಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಕಾನೂನಿಗಿಂತ ಮಾನವೀಯತೆ ಮುಖ್ಯ
ಅಡ್ಡೇರಿ ಗ್ರಾಮದ ಸುಜಾತ ಗಣಪತಿ ಅವರ ಕುಟುಂಬವು ಕಳೆದ ನಲವತ್ತರಿಂದ ಐವತ್ತು ವರ್ಷಗಳಿಂದ ಈ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದೆ ಎಂದು ಹಾಲಪ್ಪ ಹರತಾಳು ತಿಳಿಸಿದರು.
-
ಸರ್ಕಾರದ ಆದೇಶ ಉಲ್ಲಂಘನೆ: “ರೈತರ ಜಮೀನಿನ ಫಸಲನ್ನು ಯಾವುದೇ ಕಾರಣಕ್ಕೂ ಕೀಳಬಾರದು ಎಂದು ರಾಜ್ಯ ಸರ್ಕಾರವೇ ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದೆ. ಕಾನೂನಾತ್ಮಕವಾಗಿ ಕೆಲವು ಸಮಸ್ಯೆಗಳಿದ್ದರೂ, ಅರಣ್ಯ ಇಲಾಖೆ ರೈತರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು” ಎಂದರು.
-
ಅಧಿಕಾರಿಗಳ ದೌರ್ಜನ್ಯ: ಗೀತಾ ನಾಯ್ಕ್ ಎಂಬ ಅರಣ್ಯಾಧಿಕಾರಿ ನಿಯಮ ಮೀರಿ ತೋಟದ ಫಸಲು ಕಿತ್ತಿದ್ದಾರೆ. ತಾಲೂಕಿನಲ್ಲಿ ಎಂಪಿಎಂ ಸೇರಿದಂತೆ ಅನೇಕ ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಅರಣ್ಯ ಲೂಟಿ ನಡೆಯುತ್ತಿದ್ದರೂ ಅದರ ಕಡೆ ಗಮನ ಹರಿಸದ ಅರಣ್ಯ ಇಲಾಖೆ, ಬಡ ರೈತರ ಮೇಲೆ ಮಾತ್ರ ದೌರ್ಜನ್ಯ ಎಸಗುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ವೈಫಲ್ಯವೇ ಕಾರಣ: ತಾಲೂಕಿನ ರೈತರಲ್ಲಿ ಆತಂಕ
ತಾಲೂಕಿನಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರೂ ಸೇರಿದಂತೆ 60-70 ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಕಷ್ಟಪಟ್ಟು ಸಾಗುವಳಿ ಮಾಡಿಕೊಂಡು ಬಂದಿರುವ ಸಾವಿರಾರು ಬಡ ಕುಟುಂಬಗಳಿವೆ. ಅಡ್ಡೇರಿಯಲ್ಲಿ ನಡೆದ ಇಂತಹ ಘಟನೆಗಳಿಂದಾಗಿ ತಾಲೂಕಿನ ಉಳಿದ ರೈತ ಕುಟುಂಬಗಳೂ ಈಗ ಆತಂಕಕ್ಕೆ ಒಳಗಾಗುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
“ಕ್ಷೇತ್ರದ ಶಾಸಕರು ಕಾಲಕಾಲಕ್ಕೆ ಸಭೆ ಕರೆದು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಪ್ರಸ್ತುತ ತಾಲೂಕಿನಲ್ಲಿ ನಡೆದಿರುವ ಆಡಳಿತ ವೈಫಲ್ಯವೇ ರೈತರ ಜಮೀನು ಬಿಡಿಸಲು ಮತ್ತು ಫಸಲು ನಾಶ ಮಾಡಲು ಅಧಿಕಾರಿಗಳಿಗೆ ದಾರಿಯಾಗಿದೆ.” – ಹರತಾಳು ಹಾಲಪ್ಪ, ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರು.
ಡಿಎಫ್ಓ ಭರವಸೆ
ಅಡ್ಡೇರಿ ಗ್ರಾಮದ ಬಡ ರೈತ ಕುಟುಂಬಕ್ಕೆ ನಡೆದಿರುವ ಅನ್ಯಾಯದ ಕುರಿತು ಡಿಎಫ್ಓ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಹಾಲಪ್ಪ ಹರತಾಳು ತಿಳಿಸಿದರು.
ಈ ಸ್ಥಳ ಪರಿಶೀಲನೆ ಹಾಗೂ ಸಭೆಯ ಸಂದರ್ಭದಲ್ಲಿ ಪ್ರಮುಖರಾದ ರತ್ನಾಕರ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ, ದೇವೇಂದ್ರಪ್ಪ, ಗಣೇಶ ಪ್ರಸಾದ್, ಮಧುರಾ ಶಿವಾನಂದ್, ಸಂತ್ರಸ್ತ ಸುಜಾತ ಗಣಪತಿ, ಕೃಷ್ಣಮೂರ್ತಿ, ಶಾಂತಪ್ಪ ಗೌಡ, ಮಲ್ಲಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Rain In Bengaluru: ಬೆಂಗಳೂರಿನ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ
JOB ALERT: ರಾಜ್ಯದ ವಿವಿಧ ಇಲಾಖೆ, ನಿಗಮಗಳಲ್ಲಿ ಖಾಲಿ ಇರುವ ‘ಎಂಜಿನಿಯರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ








