ಶಿವಮೊಗ್ಗ: “ನಾಡಿಗೆ ಬೆಳಕು ನೀಡಲು ಶರಾವತಿ ಮುಳುಗಡೆ ಸಂತ್ರಸ್ತರು ಈಗಾಗಲೇ ಎರೆಡೆರೆಡು ಬಾರಿ ಮುಳುಗಡೆಯಾಗಿ ಭೂಮಿ ಹಕ್ಕಿಗಾಗಿ 6 ದಶಕದಿಂದ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮತ್ತೊಂದು ಜನವಿರೋಧಿ ಯೋಜನೆಯಾದ ‘ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ’ಯನ್ನು ಹೇರಲು ಹೊರಟಿರುವುದು ಘೋರ ಅನ್ಯಾಯ” ಎಂದು ಸಾಗರದ ಮಾಜಿ ಸಚಿವರಾದ ಹೆಚ್. ಹಾಲಪ್ಪ ಹರತಾಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಜನರ ಬದುಕು, ರೈತರ ಜಮೀನು, ಅರಣ್ಯ ಸಂಪತ್ತು ಹಾಗೂ ಪರಿಸರವನ್ನು ಬಲಿಕೊಡುವ ಯಾವುದೇ ಯೋಜನೆಗೆ ನಮ್ಮ ಕಟು ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪರಿಸರ ಮತ್ತು ಜನಜೀವನದ ಮೇಲಿನ ಗಂಭೀರ ಪರಿಣಾಮಗಳು
ಈ ಯೋಜನೆ ಕೇವಲ ಆವಿನಹಳ್ಳಿ–ಕರೂರು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ಇಡೀ ರಾಜ್ಯದ ಅನೇಕ ಜಿಲ್ಲೆಗಳ ಪರಿಸರ ಮತ್ತು ಜನಜೀವನದ ಮೇಲೆ ಅತ್ಯಂತ ದುಷ್ಪರಿಣಾಮ ಬೀರಲಿದೆ ಎಂದು ಹರತಾಳು ಆತಂಕ ವ್ಯಕ್ತಪಡಿಸಿದ್ದಾರೆ. ಯೋಜನೆಯಿಂದ ಉಂಟಾಗಬಹುದಾದ ಪ್ರಮುಖ ಹಾನಿಗಳು ಹೀಗಿವೆ:
-
ಫಲವತ್ತಾದ ಭೂಮಿ ನಾಶ: ಸುಮಾರು 20 ಸಾವಿರ ಎಕರೆಗೂ ಅಧಿಕ ಫಲವತ್ತಾದ ಕೃಷಿ ಭೂಮಿ ಮತ್ತು ಅಮೂಲ್ಯವಾದ ಅರಣ್ಯ ಪ್ರದೇಶ ಈ ಯೋಜನೆಯಿಂದಾಗಿ ಸಂಪೂರ್ಣವಾಗಿ ನಾಶವಾಗುವ ಅಪಾಯವಿದೆ.
-
ಜಲ ಮಾಲಿನ್ಯದ ಭೀತಿ: ಅಣು ವಿದ್ಯುತ್ ಸ್ಥಾವರದಿಂದಾಗಿ ಈ ಭಾಗದ ನೀರು ಕಲುಷಿತಗೊಳ್ಳಲಿದ್ದು, ಜೀವಜಂತುಗಳು, ಜಲಚರಗಳು ಹಾಗೂ ಸ್ಥಳೀಯ ಜನರ ಆರೋಗ್ಯ ಮತ್ತು ಬದುಕಿನ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ.
-
ಸಂತ್ರಸ್ತರ ಮೇಲಿನ ನಿರಂತರ ಆಘಾತ: ಈಗಾಗಲೇ ಶರಾವತಿ ಯೋಜನೆಗಾಗಿ ಭೂಮಿ ಕಳೆದುಕೊಂಡು, 60 ವರ್ಷಗಳಿಂದ ಹಕ್ಕಿಗಾಗಿ ಹೋರಾಡುತ್ತಿರುವ ಜನರಿಗೆ ಮತ್ತೊಮ್ಮೆ ಒಕ್ಕಲೆಬ್ಬಿಸುವ ಭೀತಿ ಎದುರಾಗಿದೆ.
ರಾಜ್ಯ ಸರ್ಕಾರಕ್ಕೆ ಕಟು ಎಚ್ಚರಿಕೆ
“ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದರೂ, ಅದಕ್ಕೆ ಬೇಕಾದ ಭೂಮಿ ನೀಡಬೇಕಿರುವುದು ರಾಜ್ಯ ಸರ್ಕಾರ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಈ ಮಾರಕ ಯೋಜನೆಗೆ ಶಿಫಾರಸ್ಸು ಮಾಡಬಾರದು. ತಕ್ಷಣವೇ ಈ ಯೋಜನೆಯನ್ನು ಕೈಬಿಡಬೇಕು.” – ಹೆಚ್. ಹಾಲಪ್ಪ ಹರತಾಳು, ಮಾಜಿ ಸಚಿವರು.
ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂಬ ಘೋಷಣೆ ಹೇಗೆ ಇತಿಹಾಸ ಸೃಷ್ಟಿಸಿತೋ, ಹಾಗೆಯೇ ಇಂದು ನಮಗಾಗಿ, ನಮ್ಮ ಪರಿಸರಕ್ಕಾಗಿ “ಏಸೂರು ಬಿಟ್ಟರು ಬೇಸೂರು ಬಿಡೆವು” ಎಂಬ ದೃಢ ಸಂಕಲ್ಪದೊಂದಿಗೆ ಹೋರಾಡಲು ಜನ ಸಿದ್ಧರಾಗುತ್ತಿದ್ದಾರೆ. ಸರ್ಕಾರ ಜನರ ಭಾವನೆಗಳಿಗೆ ಗೌರವ ನೀಡಿ ಈ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
BREAKING: ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಗೆ ಕೋರಿ ಹೈಕೋರ್ಟ್ನಲ್ಲಿ ಪಿಐಎಲ್: ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ
JOB ALERT: ರಾಜ್ಯದ ವಿವಿಧ ಇಲಾಖೆ, ನಿಗಮಗಳಲ್ಲಿ ಖಾಲಿ ಇರುವ ‘ಎಂಜಿನಿಯರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ








