ಬೆಂಗಳೂರು : ಬಹುನಿರೀಕ್ಷಿತ ಕಾಗದ ರಹಿತ ವಿಧಾನಮಂಡಲ ಅಧಿವೇಶನ ನಡೆಸುವಾಗಿನ ಇ-ವಿಧಾನ ಯೋಜನೆಯ ಜಾರಿಗೆ ಮೂಹೂರ್ತ ಕೂಡಿ ಬಂದಿದೆ. ದಶಕದಿಂದ ಘೋಷಣೆಯಾಗಿ ಉಳಿದುಕೊಂಡಿದ್ದ ಇ-ವಿಧಾನ ಯೋಜನೆ ಇದೀಗ ಅನುಷ್ಠಾನದ ಘಟ್ಟಕ್ಕೆ ಬಂದಿದೆ.
ಕರ್ನಾಟಕ ವಿಧಾನಸಭೆಯನ್ನು ಸಂಪೂರ್ಣವಾಗಿ ಕಾಗದ ರಹಿತ (Paperless) ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಮುಂಬರುವ ಅಧಿವೇಶನದಿಂದಲೇ ಅತ್ಯಾಧುನಿಕ ‘ಇ-ವಿಧಾನ’ ಯೋಜನೆಯನ್ನು ಜಾರಿಗೆ ತರಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ. ಈ ಯೋಜನೆಯಿಂದ ಶಾಸಕರಿಗೆ ಕಲಾಪದ ಮಾಹಿತಿ ತಕ್ಷಣವೇ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದ್ದು, ಪರಿಸರ ಸ್ನೇಹಿ ಆಡಳಿತಕ್ಕೆ ಇದು ಮಾದರಿಯಾಗಲಿದೆ.
ಬಹುನಿರೀಕ್ಷಿತ ಕಾಗದ ರಹಿತ ಕಲಾಪಕ್ಕೆ ಅನುವು ಮಾಡುವ ಇ-ವಿಧಾನ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಈ ಬಗ್ಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಘೋಷಣೆ ಮಾಡಿದ್ದು, ಮುಂದಿನ ಅಧಿವೇಶನವನ್ನು ಕಾಗದ ರಹಿತ ನಡೆಸಲು ಮುಂದಾಗಿದೆ. ಸುಮಾರು 10 ವರ್ಷಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಐಟಿ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ವಿಧಾನಮಂಡಲ ಕಲಾಪ ಡಿಜಟಲೀಕರಣ ಮಾಡುವಲ್ಲಿ ವಿಳಂಬ ಧೋರಣೆ ತೋರುತ್ತಿರುವ ಬಗ್ಗೆ ಸಾಕಷ್ಟು ಟೀಕೆ, ಆರೋಪಗಳು ಕೇಳಿ ಬರುತ್ತಿತ್ತು.
ತಂತ್ರಜ್ಞಾನ, ಆರ್ಥಿಕ ಪ್ರಗತಿಯಲ್ಲಿ ಹಿಂದುಳಿದ ಹಲವು ರಾಜ್ಯಗಳೇ ಪೇಪರ್ ಲೆಸ್ ಕಲಾಪಕ್ಕಾಗಿ ಇ-ವಿಧಾನ ಅಳವಡಿಸಿ ವರ್ಷಗಳೇ ಕಳೆದುಹೋಗಿದೆ. ಆದರೆ, ಐಟಿಯಲ್ಲಿ ಅಗ್ರಗಣ್ಯವಾಗಿರುವ ಪ್ರಗತಿಶೀಲ ರಾಜ್ಯ ಕರ್ನಾಟಕಕ್ಕೆ ರಾಜ್ಯದ ನೀತಿ ನಿರೂಪಿಸುವ, ಕಾನೂನು ರಚಿಸುವ, ಮಹತ್ವದ ಮಸೂದೆಗಳು, ಹಲವು ಅಭಿವೃದ್ಧಿ ಪರ ಕಾರ್ಯಕ್ರಮ, ತೀರ್ಮಾನಗಳನ್ನು ಕೈಗೊಳ್ಳುವ ಶಕ್ತಿ ಕೇಂದ್ರವಾಗಿರುವ ಸದನವನ್ನೇ ಡಿಜಿಟಲೀಕರಣ ಮಾಡಲು ಸಾಧ್ಯವಾಗದೇ ಇದ್ದಿದ್ದು ಒಂದು ಅಪವಾದವಾಗಿ ಉಳಿದುಕೊಂಡಿತ್ತು.
ಇ-ವಿಧಾನ ಕೇಂದ್ರ ಸರ್ಕಾರ ಅನುದಾನಿತ ಮಹತ್ವದ ಯೋಜನೆಯಾಗಿದೆ. ದೇಶದ ಎಲ್ಲ ರಾಜ್ಯಗಳ ವಿಧಾನಮಂಡಲ ಕಲಾಪಗಳನ್ನು ಸಂಸತ್ತು ಮಾದರಿ ಕಾಗದ ರಹಿತ ಮಾಡಬೇಕು ಎಂದು 2014ರಲ್ಲಿ ಇ-ವಿಧಾನ ಯೋಜನೆಯ ರೂಪುರೇಷೆ ರೂಪಿಸಲಾಗಿತ್ತು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಅನುದಾನ ಹಂಚಿಕೆಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA)ಗೆ ಚಾಲನೆ ನೀಡಿತ್ತು. ಒಂದು ರಾಷ್ಟ್ರ, ಒಂದು ಅಪ್ಲಿಕೇಶನ್ ಎಂಬ ಪರಿಕಲ್ಪನೆಯೊಂದಿಗೆ ಈ ಯೋಜನೆ ರೂಪಿಸಲಾಗಿದೆ.
ಮೂರು ತಿಂಗಳಲ್ಲಿ ಉಭಯ ಸದನಗಳಲ್ಲಿ ಕಾಗದ ರಹಿತ ಕಲಾಪಕ್ಕಾಗಿನ ಇ-ವಿಧಾನ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಮುಂದಾಗಿದ್ದಾರೆ. ಕೇಂದ್ರದ ಅಧಿಕಾರಿಗಳು ಬೆಂಗಳೂರು, ಬೆಳಗಾವಿ ಉಭಯ ಸದನಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮತ್ತೊಮ್ಮೆ ಯೋಜನಾ ವೆಚ್ಚವನ್ನು ಅಂದಾಜಿಸಲಿದ್ದಾರೆ. ಕಸ್ಟಮೈಸ್ಡ್ NeVA ಅಪ್ಲಿಕೇಷನ್ ಸಿದ್ಧವಾಗಿದ್ದು, ರಾಜ್ಯಕ್ಕೆ ಅನುಗುಣವಾಗಿ ಕೆಲ ಬದಲಾವಣೆಯೊಂದಿಗೆ ಇ-ವಿಧಾನ ಶೀಘ್ರ ಅನುಷ್ಠಾನ ಕಾರ್ಯ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







