ಬೆಂಗಳೂರು: ಗ್ರಾಮ ಪಂಚಾಯಿತಿಗಳೂ ಸೇರಿದಂತೆ ತಮ್ಮ ಇಲಾಖೆಯ ವ್ಯಾಪ್ತಿಗೆ ಸೇರಿದ ಎಲ್ಲಾ ಸರ್ಕಾರಿ ಜಮೀನುಗಳ ಸರ್ವೇ ಮಾಡಿಸಿ ಅವುಗಳಿಗೆ ತಂತಿಬೇಲಿ ಹಾಕಿಸಿ ರಕ್ಷಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಸಚಿವ ಪ್ರಿಯಾಂಕ್ ಖರ್ಗೆಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷರಾದಂತ ರವಿಕೃಷ್ಣಾ ರೆಡ್ಡಿ ಪತ್ರ ಬರೆದಿದ್ದಾರೆ. ಅದರಲ್ಲಿ ತಮಗೆ ತಿಳಿದಿರುವಂತೆ ರಾಜ್ಯದ ಅರಣ್ಯ ಮತ್ತು ಕಂದಾಯ ಭೂಮಿಗಳೂ ಸೇರಿದಂತೆ, ಗ್ರಾಮಪಂಚಾಯಿತಿ, ಪಟ್ಟಣಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರಪಾಲಿಕೆಗಳಂತಹ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಲಕ್ಷಾಂತರ ಎಕರೆ ಸರ್ಕಾರಿ ಜಮೀನು ಇಂದು ಭೂಗಳ್ಳರ ಪಾಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಈ ಭೂಗಳ್ಳರು ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಈ ಸಾರ್ವಜನಿಕ/ಸರ್ಕಾರಿ ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಮತ್ತು ಇಂತಹ ಅನೇಕ ಜಮೀನುಗಳು ಇಂದು ಹಲವಾರು ಬಾರಿ ಕೈಬದಲಾವಣೆ ಆಗಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ದಾಖಲೆಗಳಲ್ಲಿ ಸರ್ಕಾರದ ಹೆಸರೇ ಇದ್ದರೂ ಜಮೀನಿನ ಸ್ವಾಧೀನ ಮಾತ್ರ ಅದನ್ನು ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ ಕೈಯಲ್ಲಿದೆ. ಗ್ರಾಮಪಂಚಾಯಿತಿಯೂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೀಗಾಗದೆ ಉಳಿದಿರುವ ಅರೆಬರೆ ಸ್ವತ್ತುಗಳಷ್ಟೇ ಇಂದು ಸರ್ಕಾರದ ವಶದಲ್ಲಿವೆ ಎಂದಿದ್ದಾರೆ.
ಹಾಗಾಗಿಯೇ ಇಂದು ಬಹುತೇಕ ಹಳ್ಳಿ/ಪಟ್ಟಣ/ನಗರಗಳಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆ, ಆಡಳಿತ ಭವನ, ಸಮುದಾಯ ಭವನ, ಗ್ರಂಥಾಲಯ, ಉದ್ಯಾನವನ, ಆಟದ ಮೈದಾನ ಸೇರಿದಂತೆ ಬಹುಜನರ ಉಪಯೋಗಕ್ಕೆ ಬರುವ ಸಾರ್ವಜನಿಕ ಹಿತದ ಯಾವುದೇ ಕೆಲಸ/ಕಾಮಗಾರಿ/ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರಿ ಜಮೀನೇ ಇಲ್ಲದಂತಾಗಿದೆ. ಗೋಮಾಳ, ಗುಂಡುತೋಪು, ಕುಂಟೆ, ಕೆರೆ, ಸ್ಮಶಾನಗಳೆಲ್ಲ ಇಂದು ಕಳುವಾಗಿ, ಪರಭಾರೆಯಾಗಿ, ಒತ್ತುವರಿಯಾಗಿ ಭ್ರಷ್ಟ, ಬಲಾಢ್ಯ, ಸಮಾಜಘಾತುಕರ, ಖಾಸಗಿಯವರ ಪಾಲಾಗಿವೆ. ಹಲವು ಸಂದರ್ಭಗಳಲ್ಲಿ ಸರ್ಕಾರದ ಸಂಸ್ಥೆಗಳೇ ಮುಂದೆ ನಿಂತು ಅನಧಿಕೃತ ಬಡಾವಣೆ ನಿರ್ಮಿಸಲು ಕಾನೂನುಬಾಹಿರವಾಗಿ ಅನುವು ಮಾಡಿಕೊಟ್ಟಿದ್ದಾರೆ. ಹಾಗಾಗಿ ಇಂದು ಬಹುತೇಕ ಕಡೆ ಖಾಲಿ ಇರುವ ಸರ್ಕಾರಿ ಜಮೀನುಗಳೇ ಇಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಾವು ಈ ಕೂಡಲೇ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಜಮೀನುಗಳ ಗುರುತಿಸುವಿಕೆ ಮತ್ತು ಅವುಗಳ ಸರ್ವೇ ಮಾಡಿಸುವ ಕೆಲಸಕ್ಕೆ ಚಾಲನೆ ನೀಡಬೇಕೆಂದು ಈ ಮೂಲಕ ಆಗ್ರಹ ಮಾಡುತ್ತಿದ್ದೇವೆ. ಸರ್ವೇ ಕಾರ್ಯ ಮುಗಿದ ನಂತರ ಆಯಾಯ ಸ್ವತ್ತಿಗೆ ತಕ್ಷಣವೇ ತಂತಿಬೇಲಿ ಹಾಕಿ ಭದ್ರಪಡಿಸಿ, ಆ ಸ್ವತ್ತು ಸರ್ಕಾರಕ್ಕೆ ಸೇರಿದ್ದೆಂದು ಮಾಹಿತಿಫಲಕ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
2014ರಲ್ಲಿ ನನ್ನನ್ನೂ ಸೇರಿದಂತೆ ನೂರಾರು ಜನರು ದಿವಂಗತ ಎಚ್.ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ “ಭೂಕಬಳಿಕೆ ವಿರುದ್ಧ ಹೋರಾಟ” ಮಾಡಿದ ನಂತರ ರಾಜ್ಯಾದ್ಯಂತ ಸರ್ಕಾರಿ ಭೂಮಿಯ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿ, ವಿಶೇಷವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಹತ್ತಾರು ಸಾವಿರ ಎಕರೆ ಸರ್ಕಾರಿ ಭೂಮಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಇತ್ತೀಚೆಗೆ ತಾನೇ ನಮ್ಮ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ – KRS Party / KRS ಪಕ್ಷದ ಹೋರಾಟದ ಕಾರಣದಿದಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರಿನ ಚಾರಿತ್ರಿಕ ದೇಗುಲಕ್ಕೆ ಸೇರಿದ್ದ ಕೋಟ್ಯಾಂತರ ರೂಪಾಯಿಯ ಭೂಮಿಯ ಭೂಗಳ್ಳತನವನ್ನು ಸ್ವಲ್ಪಮಟ್ಟಿಗಾದರೂ ಯಶಸ್ವಿಯಾಗಿ ತಡೆಯಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ನಿಯಮಿತವಾಗಿ ಮಡಿಕೊಂಡು ಬಂದಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನೇ ತಾವು ಮಾದರಿಯಾಗಿ ತೆಗೆದುಕೊಂಡು ತಮ್ಮ ಇಲಾಖೆ ವ್ಯಾಪ್ತಿಗೆ ಬರುವ – ವಿಶೇಷವಾಗಿ ಗ್ರಾಮಪಂಚಾಯಿತಿ/ಗ್ರಾಮಠಾಣಾ ವ್ಯಾಪ್ತಿಯ – ಸರ್ಕಾರಿ ಭೂಮಿಗಳ ರಕ್ಷಣೆಗೆ ಕ್ರಿಯಾಯೋಜನೆ (Action Plan) ರೂಪಿಸಿ, ಅದಕ್ಕೆ ಶೀಘ್ರದಲ್ಲಿ ಚಾಲನೆ ನೀಡಬೇಕೆಂದು ಈ ಪತ್ರದ ಮೂಲಕ ಆಗ್ರಹಿಸುತ್ತಿದ್ದೇವೆ. ಗೊತ್ತೋ ಗೊತ್ತಿಲ್ಲದೆಯೋ ಅಥವ ಸಮರ್ಪಕ ದಾಖಲೆಗಳು ಲಭ್ಯವಿಲ್ಲದ ಕಾರಣದಿಂದಲೋ ಇಂದು ಹಳ್ಳಿಗಳಲ್ಲಿ ಗಣನೀಯ ಸಂಖ್ಯೆಯ ಜನರು ತಮ್ಮದಲ್ಲದ ಜಾಗದಲ್ಲಿ ಸ್ವಾಧೀನದಲ್ಲಿದ್ದಾರೆ ಮತ್ತು ಅವರ ಸ್ವತ್ತುಗಳಲ್ಲಿ ಇತರರು ಸ್ವಾಧೀನದಲ್ಲಿದ್ದಾರೆ. ಇದು ಅನೇಕ ಸಂದರ್ಭಗಳಲ್ಲಿ ಮನಸ್ತಾಪ, ಹೊಡೆದಾಟ, ಬಡಿದಾಟಗಳಂತಹ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ. ಇಂತಹ ಅಹಿತಕರ ಘಟನೆಗಳಿಗೆ ಇತಿಶ್ರೀ ಹಾಡಿ, ಸಾಮಾಜಿಕ ಸ್ವಾಸ್ಥ್ಯವನು ಕಾಪಾಡಬೇಕು ಮತ್ತು ಸರ್ಕಾರದ ಜನಪರ, ಜನಹಿತದ ಯೋಜನೆಗಳಿಗೆ ಸರ್ಕಾರದ ಆಸ್ತಿಯನ್ನು ಬಳಸಬೇಕು ಎಂದಾದರೆ ತಾವು ತಮ್ಮ ಇಲಾಖೆ ವತಿಯಿಂದ ಈ ಕೂಡಲೇ ನಾವು ಆಗ್ರಹಿಸಿರುವ ವಿಷಯಗಳ ಕುರಿತು ಗಮನಹರಿಸಿ ಸರ್ಕಾರಿ ಭೂಮಿಯ ಗುರುತಿಸುವಿಕೆ ಮತ್ತದರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಷಯದಲ್ಲಿ ನೀವು ಕೈಗೊಳ್ಳುವ ಜನಹಿತದ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹಾರೈಸಿದ್ದಾರೆ.
ಸಾವಿರ ದಿನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ: ವಿಪಕ್ಷ ನಾಯಕ ಆರ್.ಅಶೋಕ್








