ಬೆಂಗಳೂರು: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡೇ ಇರಲು ನಿಗದಿಪಡಿಸಲಾಗಿರುವ ದಿನಾಂಕವನ್ನು ವಿಸ್ತರಣೆ ಮಾಡಿ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರವು ರೂಪಿಸಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-Out) ಲಿಖಿತ ಘೋಷಣೆಯನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ದಿನಾಂಕ 18.10.2025 ರವರೆಗೆ ಕಾಲಾವಕಾಶವನ್ನು ನೀಡಿ, ಸದರಿ ದಿನಾಂಕದೊಳಗೆ ಈ ಯೋಜನೆಗೆ ಒಳಪಡದೇ ಇರಲು ಲಿಖಿತವಾಗಿ ಇಚ್ಛೆ ವ್ಯಕ್ತಪಡಿಸದ ನೌಕರರು ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದೆಂದು ಮೇಲೆ ಓದಲಾದ ದಿನಾಂಕ 23.09.2025 ರ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿತ್ತು ಎಂದಿದ್ದಾರೆ.
ಆದರೆ, ರಾಜ್ಯ ಸರ್ಕಾರವು ಕೈಗೆತ್ತಿಕೊಂಡಿರುವ ರಾಜ್ಯ ವ್ಯಾಪಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಬಹುತೇಕ ಸರ್ಕಾರಿ ನೌಕರರು ತೊಡಗಿದ್ದರಿಂದ, ಹಲವಾರು ನೌಕರರಿಗೆ ಈ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು ತಮ್ಮ ಅಭಿಮತ ವ್ಯಕ್ತಪಡಿಸಲು ಅವಕಾಶವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ, ಈ ಸೂಚನೆಗಳನ್ನು ಭಾಗಶ: ಮಾರ್ಪಡಿಸಿ, ಇಂತಹ ಘೋಷಣೆಯನ್ನು ಸಲ್ಲಿಸಲು ಕಾಲಾವಕಾಶವನ್ನು ವಿಸ್ತರಿಸುವುದು ಅವಶ್ಯವೆಂದು ಪರಿಗಣಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದ್ದಾರೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-Out) ಲಿಖಿತ ಘೋಷಣೆಯನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ನಿಗದಿಪಡಿಸಲಾಗಿರುವ ಕಾಲಾವಕಾಶವನ್ನು ದಿನಾಂಕ 25.11.2025 ರವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ದಿನಾಂಕ 23.09.2025ರ ಸರ್ಕಾರಿ ಆದೇಶದಂತೆ ದಿನಾಂಕ 18.10.2025 ರೊಳಗೆ Opt-out ಆಗದೆ, ಈ ಆದೇಶದಲ್ಲಿ ವಿಸ್ತರಿಸಿರುವಂತೆ ನವೆಂಬರ್ 2025 ರವರೆಗೆ ನೀಡಿರುವ ಕಾಲಾವಕಾಶವನ್ನು ಉಪಯೋಗಿಸಿಕೊಂಡು ಯೋಜನೆಯಿಂದ Opt-out ಆದಲ್ಲಿ, ಅಂತಹ ನೌಕರರ ವೇತನದಲ್ಲಿ ಮಾಸಿಕ ವಂತಿಕೆಯನ್ನು ನವೆಂಬರ್ 2025 ರಿಂದ ಕಟಾವಣೆಗೊಳಿಸದಿರಲು ಎಲ್ಲಾ ಇಲಾಖಾ ಮುಖ್ಯಸ್ಥರು/ಡಿ.ಡಿ.ಓ. ಗಳಿಗೆ ಸೂಚಿಸಲಾಗಿದೆ.
ಮುಂದುವರೆದು, KASS ಯೋಜನೆಗೆ ಒಳಪಡಲು ಅಥವಾ ಒಳಪಡದಿರಲು ಇಚ್ಛೆ ವ್ಯಕ್ತಪಡಿಸುವ ಪ್ರತಿ ನೌಕರನು ತನ್ನ ಕುಟುಂಬದ ಮಾಹಿತಿ ಹಾಗೂ Option ನಮೂದಿಸಲು HRMS ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ಸರ್ಕಾರಿ ನೌಕರರ ದತ್ತಾಂಶ ಸಂಗ್ರಹಣೆಯ ಉದ್ದೇಶದಿಂದ HRMS ನಲ್ಲೇ ಈ ಪಕ್ರಿಯೆ ಕೈಗೊಳ್ಳಬೇಕಾಗಿರುತ್ತದೆ. ಈ ಸಂಬಂಧದಲ್ಲಿ ನೌಕರರಿಂದ ಅಗತ್ಯ ಮಾಹಿತಿ ಪಡೆದು ದೃಢೀಕರಣ ಹಾಗೂ ಅನುಮೋದನೆಯನ್ನು ಸಂಬಂಧಿತ ಡಿ.ಡಿ.ಓ. ಗಳು HRMS Application ನಲ್ಲಿ ಮಾಡಲು ಕ್ರಮ ಕೈಗೊಳ್ಳತಕ್ಕದ್ದು ಎಂದಿದ್ದಾರೆ.










