ಬೆಂಗಳೂರು : ರಾಜ್ಯವನ್ನು ಮುನ್ನಡೆಸುವ ಶಕ್ತಿ ಡಿಕೆ ಶಿವಕುಮಾರ್ ಗೆ ಸಿಗಲಿ ಡಿಕೆ ಶಿವಕುಮಾರ್ ನಾಡಿನ ಪ್ರಭುವಾಗಲಿ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಇಂದು ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿ ಅವರು ಮಾತನಾಡಿ, ಅಭಿವೃದ್ಧಿಯ ಹರಿಕಾರವಾಗಿ ಬೆಂಗಳೂರು ನಗರ, ರಾಜ್ಯದ ಎಲ್ಲ ಜನರಿಗೆ ಉದ್ಯೋಗ ವರಮಾನ ಜೀವನ ಎಲ್ಲವೂ ನೀಡುತ್ತಿದೆ. ಹಾಗಾಗಿ ಈ ನಗರವನ್ನು ಇನ್ನೂ ಹೆಚ್ಚು ಫಲದಾಯಕವನ್ನಾಗಿ, ಅಭಿವೃದ್ಧಿಯನ್ನಾಗಿ ಮಾಡಬೇಕು ಅಂತ ಹೇಳಿ ಡಿಕೆ ಶಿವಕುಮಾರ್ ಬಹಳ ಕಠಿಣ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಿಜವಾಗಿಯೂ ಉಪಮುಖ್ಯಮಂತ್ರಿಗಳಿಗೆ ಅನೇಕರು ಟೀಕೆ ಮಾಡಬಹುದು.ಆದರೆ ಅವರ ಕೆಲಸದ ವೈಖರಿ ಹಿಡಿದ ಹಠವನ್ನು ಸಾಧಿಸುವಂತಹ ಛಲ, ಮಾಡಿಯೇ ತೀರುತ್ತೇನೆ ಎಂಬ ಹಂಬಲ, ಸಂಕಲ್ಪ ಶಕ್ತಿಯನ್ನ ಹಾಗು ಅವರನ್ನು ಉನ್ನತ ಸ್ಥಾನದಲ್ಲಿ ಕೂರಿಸಲಿಕ್ಕೆ ನಾಡಪ್ರಭು ಕೆಂಪೇಗೌಡರು ಹೆಚ್ಚಿನ ಆಶೀರ್ವಾದ ಮಾಡಲಿ.ಅವರು ಈ ನಾಡಿನ ಪ್ರಭುಗಳಾಗಿ ಮುಂದಿನ ದಿನಗಳಲ್ಲಿ ಈ ರಾಜ್ಯವನ್ನು ಮುನ್ನಡೆಸಿ ಜಗತ್ತಿಗೆ ಮತ್ತಷ್ಟು ಬೆಂಗಳೂರನ್ನು ಶಕ್ತಿಯುತವಾಗಿ ನಿರ್ಮಾಣ ಮಾಡಲಿ ಎಂದು ಹೇಳಿಕೆ ನೀಡಿದರು.