ವಿಜಯಪುರ : ಕಳೆದ ತಿಂಗಳು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಕೆನರಾ ಬ್ಯಾಂಕ್ ನಲ್ಲಿ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಹಣ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ವ್ಯವಸ್ಥಾಪಕ ವಿಜಯಕುಮಾರ ಮಿರಿಯಾಲ(41), ಹುಬ್ಬಳ್ಳಿ ಜನತಾ ಕಾಲೊನಿಯ ಖಾಸಗಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ(38) ಮತ್ತು ಹುಬ್ಬಳ್ಳಿ ಚಾಲುಕ್ಯ ನಗರದ ಸುನೀಲ ಮೋಕಾ(40) ಎಂಬುವವರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.
ಆರೋಪಿಗಳು ವ್ಯವಸ್ಥಿತವಾಗಿ ಒಳಸಂಚು ಮಾಡಿ ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಲ್ಲದೆ, ತನಿಖೆಯ ದಿಕ್ಕು ತಪ್ಪಿಸುವಂತಹ ಹಲವಾರು ದೃಶ್ಯಾವಳಿಗಳನ್ನು ಸೃಷ್ಟಿಸಿದ್ದರೂ ಪ್ರಕರಣವನ್ನು ಭೇದಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳ ಬಳಿ ಇದ್ದ 10.75 ಕೋಟಿ ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ನೀಡಿದರು. ಕಳೆದ ಮೇ 25 ರಂದು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನ ಲಾಕರ್ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿ ಬಂಗಾರದ ಆಭರಣಗಳು ಹಾಗೂ ರೂ. 5,20,450 ನಗದು ದರೋಡೆಯಾಗಿತ್ತು.