ಚಿತ್ರದುರ್ಗ: ಜಿಲ್ಲೆಯ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿದ್ದೇ ಈಗ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ಪಿಎಸ್ಐ ನೇತ್ರಾವತಿ ದರ್ಪ ತೋರಿದ್ದಾರೆ ಹಾಗೇ ಹೀಗೆ ಅನ್ನೋ ಸುದ್ದಿ ಕೂಡ ವೈರಲ್ ಆಗುತ್ತಿವೆ. ಆದರೇ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ತನ್ನ ಸಿಬ್ಬಂದಿಗೆ ಬಿಸಿಲಿನಲ್ಲಿ ನಿಲ್ಲಿಸುವ ಶಿಕ್ಷೆ ಕೊಟ್ಟಿದ್ದರ ಹಿಂದಿನ ವಾಸ್ತವ ಸತ್ಯ ಏನು ಅಂತ ಮುಂದಿದೆ ಓದಿ…
ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ಕರ್ತವ್ಯ ನಿಷ್ಠೆ, ಪ್ರಾಮಾಣೀಕತೆಗೆ ತುಂಬಾನೇ ಹೆಸರುವಾಸಿ ಅನ್ನೋದು ಇಲಾಖೆಯ ಮಾತು. ಅಲ್ಲದೇ ಚಿಕ್ಕಜಾಜೂರು ಠಾಣೆ ವ್ಯಾಪ್ತಿಯ ಸುತ್ತಮುತ್ತಲ ಜನರಾಡುವ ನುಡಿ ಕೂಡ. ಆದರೇ ಅಂತಹ ಪಿಎಸ್ಐ ನೇತ್ರಾವತಿ ವಿರುದ್ಧವೇ ದರ್ಪ, ದೌಲತ್ತು ತೋರಿದಂತ ಆರೋಪ ಮಾಡಲಾಗುತ್ತಿದೆ. ಆದರೇ ಅದು ಸತ್ಯಕ್ಕೆ ದೂರವಾದದ್ದು, ಇಲಾಖೆಯ ನಿಯಮಾನುಸಾರವೇ ಸಿಬ್ಬಂದಿಗಳಿಗೆ ಶಿಕ್ಷೆ ನೀಡಲಾಗಿದೆ ಅನ್ನೋದು ಠಾಣೆಯ ಉನ್ನತ ಮೂಲಗಳ ಮಾತು.
ಜಾತ್ರೆಯಲ್ಲಿ ಜೂಜಾಟ ನಿಲ್ಲಿಸಿ ಅಂತ ಕಳುಹಿಸಿದ್ರೇ, ಇಸ್ಪಿಟ್ ಆಟಕ್ಕೆ ಸಾತ್ ಕೊಟ್ಟ ಪೇದೆ
ಚಿತ್ರದುರ್ಗ ಜಿಲ್ಲೆಯಲ್ಲಿ ಇಸ್ಪಿಟ್ ಆಟವನ್ನು ಮಟ್ಟ ಹಾಕಬೇಕು ಅಂತ ಎಸ್ಪಿ ಸಾಹೇಬ್ರು ಖಡಕ್ ಸೂಚನೆಯನ್ನು ಪೊಲೀಸ್ ಠಾಣೆಗಳಿಗೆ ನೀಡಿದ್ದರು. ಅದನ್ನು ಯಥಾವತ್ತಾಗಿ ಪಾಲನೆಗೆ ಇಳಿದಿದ್ದು ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ. ತಮ್ಮ ಠಾಣೆ ವ್ಯಾಪ್ತಿಯಲ್ಲಿನ ತಾಳಘಟ್ಟ ವಡ್ಡರಟ್ಟಿ ಕರಿಯಮ್ಮನ ಜಾತ್ರೆಯಲ್ಲಿ ಇಸ್ಪಿಟ್ ಆಟ ಜೋರಾಗಿರುತ್ತದೆ. ಹೆಗ್ಗಿಲ್ಲದೇ ನಡೆಯುತ್ತದೆ ಎನ್ನುವ ಮಾಹಿತಿ ಪಿಎಸ್ಐ ನೇತ್ರಾವತಿಗೆ ಸಿಕ್ಕಿತ್ತು.
ಈ ಹಿನ್ನಲೆಯಲ್ಲೇ ತಾಳಘಟ್ಟ ವಡ್ಡರಟ್ಟಿಯ ಕರಿಯಮ್ಮ ಜಾತ್ರೆಯಲ್ಲಿ ಇಸ್ಪಿಟ್ ಆಟಕ್ಕೆ ಬ್ರೇಕ್ ಹಾಕಿ ಅಂತ ಹೆಡ್ ಕಾನ್ಸ್ ಸ್ಟೇಬಲ್ ಚಂದ್ರನಾಯ್ಕ್ ಕಳುಹಿಸಿಕೊಟ್ಟಿದ್ದರು. ಒಂದು ವೇಳೆ ಜೂಜಾಟ ಗಮನಕ್ಕೆ ತನಗೆ ತಿಳಿಸುವಂತೆಯೂ ಸೂಚಿಸಿದ್ದರು. ಈ ಆದೇಶ ಪಾಲಿಸಬೇಕಿದ್ದಂತ ಪೇದೆಗಳೇ ಜಾತ್ರೆಯಲ್ಲಿ 25ರಿಂದ 30 ಜನರು ಗುಂಪುಗೂಡಿ ಇಸ್ಪಿಟ್ ಆಟ ಆಡಿದ್ರೂ ಅವರಿಗೆ ಸಾಥ್ ಕೊಟ್ಟಂತೆ ಕರ್ತವ್ಯ ಲೋಪ ಎಸಗಿದ್ದರು.
ಸರ್ಫ್ರೈಸ್ ವಿಸಿಟ್ ಕೊಟ್ಟ ಪಿಎಸ್ಐ ನೇತ್ರಾವತಿ
ಕರಿಯಮ್ಮನ ಜಾತ್ರೆಗೆ ಸರ್ಫ್ರೈಸ್ ಆಗಿ ಪಿಎಸ್ಐ ನೇತ್ರಾವತಿ ಭೇಟಿ ಕೊಟ್ಟಾಗ, ದಾರಿಯಲ್ಲೇ ಹೆಡ್ ಕಾನ್ ಸ್ಟೇಬಲ್ ಚಂದ್ರನಾಯ್ಕ್ ಸಿಕ್ಕಿದ್ದರು. ಅವರನ್ನು ಏಕೆ ಇಲ್ಲಿ ನಿಂತಿದ್ದೀರಿ. ನಿಮಗೆ ಜೂಜಾಟದ ಬಗ್ಗೆ ಮಾಹಿತಿ ನೀಡಿ, ತಡೆಯೋದಕ್ಕೆ ಅಂತ ಕಳುಹಿಸಿದ್ದಲ್ವ ಅಂತ ಪಿಎಸ್ಐ ನೇತ್ರಾವತಿ ಪ್ರಶ್ನಿಸಿದ್ದಾರೆ. ಅದಕ್ಕೆ ಸರಿಯಾಗಿ ಪ್ರಸ್ತುತ್ತರವನ್ನು ಹೆಚ್ ಸಿ ಚಂದ್ರನಾಯ್ಕ್ ನೀಡಿಲ್ಲ. ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಮುಂದೆ ಸಾಗಿದಾಗ ಬರೋಬ್ಬರಿ 25 ರಿಂದ 30 ಜನರು ಕುಳಿತು ಇಸ್ಪಿಟ್ ಆಟದಲ್ಲಿ ರಾಜಾರೋಷವಾಗಿ ಆಡುತ್ತಿರೋದು ಕಂಡು ಬಂದಿದೆ.
ಇಸ್ಪಿಟ್ ಆಟ ನಿಲ್ಲಿಸಿ ಅಂತ ಕಳುಹಿಸಿದ್ರೇ ನೀವು ಏನ್ರಿ ಅವರಿಗೆ ಸಾಥ್ ಕೊಟ್ಟಂತೆ ದಾರಿಯಲ್ಲಿ ಕಾದು ನಿಂತಿದ್ರಿ. ಇದೇನಾ ನೀವು ಮಾಡೋ ಕರ್ತವ್ಯ ನಿಷ್ಠೆ ಹಾಗೇ ಹೀಗೆ ಅಂತ ತರಾಟೆಗೆ ಪಿಎಸ್ಐ ನೇತ್ರಾವತಿ ತೆಗೆದುಕೊಂಡಿದ್ದಾರೆ. ಅದಕ್ಕೆ ಪೇದೆ ಚಂದ್ರನಾಯ್ಕ್ ಯಾವುದೇ ಉತ್ತರವನ್ನು ನೀಡಿಲ್ಲ.
ಪಿಎಸ್ಐ ನೇತ್ರಾವತಿ ಮುಂದೆಯೇ ರೂಡ್ ಆಗಿ ಹೆಚ್ ಸಿ ಚಂದ್ರನಾಯ್ಕ್ ವರ್ತನೆ
ಇಲಾಖೆಯ ನಿಯಮದಂತೆ ವಾರಕ್ಕೊಮ್ಮೆ ರೋಲ್ ಕಾಲ್ ಮಾಡುವಂತೆ ಕಳೆದ ಭಾನುವಾರದಂದು ಪಿಎಸ್ಐ ನೇತ್ರಾವತಿ ಸಿಬ್ಬಂದಿಯನ್ನು ಠಾಣೆಯ ಮುಂದೆ ನಿಲ್ಲಿಸಿ ಮಾಡಿಸಿದ್ದಾರೆ. ಈ ವೇಳೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಚಂದ್ರನಾಯ್ಕ್ ಪಿಎಸ್ಐ ನೇತ್ರಾವತಿ ಅವರಿಗೆ ಗೌರವ ತೋರುವ ಬದಲಾಗಿ ಅಗೌರವದ ನಡೆಯನ್ನು, ದರ್ಪದ ಮಾತನ್ನು ಆಡಿರೋದಾಗಿ ಹೇಳಲಾಗುತ್ತಿದೆ.
ಈ ಕಾರಣದಿಂದಲೇ ಪಿಎಸ್ಐ ನೇತ್ರಾವತಿ ಎಲ್ಲರಿಗೂ ಇದು ಪಾಠವಾಗಲಿ ಎನ್ನುವ ಕಾರಣಕ್ಕೆ ಬಂದೂಕು ಹಿಡಿಸಿ ಅರ್ಥಗಂಟೆಯ ಕಾಲ ಡ್ರಿಲ್ ಮಾಡಿಸಿದ್ದಾರೆ. ಮತ್ತೆ ಗ್ಯಾಪ್ ಕೊಟ್ಟು ಮತ್ತೂ ಅರ್ಧಗಂಟೆ ಸೇರಿದಂತೆ ಒಂದು ಗಂಟೆಯಷ್ಟು ಡ್ರಿಲ್ ಮಾಡಿಸಿದ್ದಾರೆ ಎನ್ನಲಾಗಿದೆ.
ಡ್ರಿಲ್ ಮುಗಿಸಿ ಎಲ್ಲರನ್ನು ಸತ್ಕರಿಸಿ ಕಳುಹಿಸಿದ್ದ ಪಿಎಸ್ಐ ವಿರುದ್ಧವೇ ರಣಬಿಸಿಲಿನಲ್ಲಿ ನಿಲ್ಲಿಸಿದ ಆರೋಪ
ಒಂದು ಗಂಟೆಗಳ ಕಾಲ ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ ಡ್ರಿಲ್ ಮಾಡಿಸಿದಂತ ಪಿಎಸ್ಐ ನೇತ್ರಾವತಿ, ಧಣಿದಿದ್ದಂತ ಎಲ್ಲಾ ಸಿಬ್ಬಂದಿಗಳಿಗೂ ಸತ್ಕರಿಸಿದ್ದರು. ಜ್ಯೂಸ್, ಬಿಸ್ಕೇಟ್, ಟೀ ವ್ಯವಸ್ಥೆ ಮಾಡಿ, ವಿರಾಮಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಯಾವುದೇ ಸಿಬ್ಬಂದಿಗಳು ಅಸ್ಪಸ್ಥಗೊಂಡಿರಲಿಲ್ಲ. ಯಾರಿಗೂ ಯಾವುದೇ ಸಮಸ್ಯೆ ಆಗಿರಲಿಲ್ಲ ಎಂಬುದು ಚಿಕ್ಕಜಾಜೂರು ಪೊಲೀಸ್ ಠಾಣೆಯ ಸಿಬ್ಬಂದಿಗಳ ಮೂಲಗಳ ಮಾಹಿತಿಯಾಗಿದೆ.
ಕಳೆದ ಭಾನುವಾರದ ಘಟನೆಯು, ಇದೀಗ ಬೆಳಕಿಗೆ ಬಂದಿದೆ. ಅಂದು ರಾತ್ರಿ 8.15ರವರೆಗೂ ಪಿಎಸ್ಐ ನೇತ್ರಾವತಿ ಕರ್ತವ್ಯ ನಿರ್ವಹಿಸಿದ್ದರು. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಆಗಿದ್ದಂತ ಸಾವಿನ ಸ್ಥಳಕ್ಕೂ ಹೋಗಿ ಬಂದಿದ್ದರು. ಆ ಸಮಯದಲ್ಲಿ ತಮ್ಮ ಸಿಬ್ಬಂದಿಗೆ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿದ್ದರಿಂದ ಅನಾರೋಗ್ಯಗೊಂಡಿರುವಂತ ಯಾವುದೇ ಮಾಹಿತಿಯೂ ಸಿಕ್ಕಿರಲಿಲ್ಲ ಎನ್ನಲಾಗುತ್ತಿದೆ. ಆದರೇ ಈಗ ಅದು ಘನ ಘೋರ ಘಟನೆ, ಸುಡು ಬಿಸಿಲಿನಲ್ಲಿ ಸಿಬ್ಬಂದಿ ನಿಲ್ಲಿಸಿ ಶಿಕ್ಷೆ ಎನ್ನುವ ಆರೋಪವನ್ನು ಪಡೆದಿರುವ ಹಿಂದಿನ ಹುನ್ನಾರವೇನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಪಿಎಸ್ಐ ನೇತ್ರಾವತಿ ಕರೆಸಿ ಮಾಹಿತಿ ಪಡೆದ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ಅವರು ಸಿಬ್ಬಂದಿಯ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಡ್ರಿಲ್ ಮಾಡಿಸಿ, ಶಿಕ್ಷಿಸಿದ್ದರ ಪೋಟೋ ವೈರಲ್ ಆದ ಬಳಿಕ, ಅವರನ್ನು ಕರೆಸಿ ಮಾಹಿತಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಪಿಎಸ್ಐ ನೇತ್ರಾವತಿ ಅವರು ತಮಗಾದ ನೋವು, ಇಸ್ಪೀಟ್ ಆಟವನ್ನು ತಡೆಯಬೇಕಾದ ಸಿಬ್ಬಂದಿಯೇ ಕುಮ್ಮಕ್ಕು ನೀಡಿ ಕರ್ತವ್ಯ ಲೋಪ ಎಸಗಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಪಿಎಸ್ಐ ನೇತ್ರಾವತಿ ಅವರಿಂದ ಮಾಹಿತಿ ಪಡೆದಂತ ಎಸ್ಪಿ ಬಂಡಾರು ಅವರು, ಇಂತಹ ನಡೆಯನ್ನು ತೋರುವ ಸಿಬ್ಬಂದಿಯ ಬಗ್ಗೆ ತನ್ನ ಗಮನಕ್ಕೆ ತನ್ನಿ. ನೀವು ಅದನ್ನು ಬಿಟ್ಟು ಬಿಸಿಲಿನಲ್ಲಿ ನಿಲ್ಲಿಸಿ ಸಿಬ್ಬಂದಿ ಶಿಕ್ಷೆ ನೀಡಿದ್ದು ಸರಿಯಲ್ಲ ಎಂಬುದಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇಸ್ಪೀಟ್ ಆಟಕ್ಕೆ ಕುಮ್ಮಕ್ಕು ನೀಡಿದಂತ ಹೆಡ್ ಕಾನ್ ಸ್ಟೇಬಲ್ ಚಂದ್ರನಾಯ್ಕ್ ಹಾಗೂ ಡ್ರಿಲ್ ವೇಳೆಯಲ್ಲಿ ಅಗೌರವ ತೋರಿದಂತ ಶಿವನಾಯ್ಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳೋ ಭರವಸೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಅ ನಿಟ್ಟಿನಲ್ಲಿ ಕ್ರಮ ವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಾರೆಯಾಗಿ ಕರ್ತವ್ಯ ಲೋಪ ಮಾಡಿದ್ದರ ಕಾರಣ ಬಿಸಿಲಿನಲ್ಲಿ ನಿಲ್ಲಿಸಿ ಡ್ರಿಲ್ ಅನ್ನು ಪಿಎಸ್ಐ ನೇತ್ರಾವತಿ ಮಾಡಿಸಿದ್ದು ತಪ್ಪೇ. ಆದನ್ನು ಬಿಟ್ಟು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು, ಕರ್ತವ್ಯ ಲೋಪ ಎಸಗಿದಂತ ಸಿಬ್ಬಂದಿಗೆ ಕಾನೂನಿನ ಮೂಲಕ ಶಿಕ್ಷೆ ನೀಡಬಹುದಾಗಿತ್ತು ಎಂಬುದು ಜನಾಭಿಪ್ರಾಯವಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಇರಾನ್ಗೆ ನೀಡಿದ್ದ ಗಡುವನ್ನು 48 ಗಂಟೆಗಳಿಂದ 408 ಗಂಟೆಗಳಿಗೆ ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್








