ತುಮಕೂರು: ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅಂಗವಾಗಿ ಹಮ್ಮಿಕೊಂಡಿರುವ ‘ಸಮರ್ಪಣೆ ಸಂಕಲ್ಪ’ ಮತ್ತು ‘ಗ್ಯಾರಂಟಿ ಇಲಾಖಾ ಹಬ್ಬ’ದ ಬೃಹತ್ ಸಮಾವೇಶವು ಇಂದು (ಮೇ 19, ಮಂಗಳವಾರ) ತುಮಕೂರಿನಲ್ಲಿ ನಡೆಯಲಿದೆ.
ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 11:00 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 1,52,492 ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ, ದಾಖಲೆ ಹಾಗೂ ಆದೇಶ ಪತ್ರಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಗುತ್ತಿದೆ. ‘ಭೂ ಗ್ಯಾರಂಟಿ’ ಯೋಜನೆಯಡಿ ಈ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಂದಾಯ ಸೇವೆಗಳನ್ನು ಜನರಿಗೆ ಸರಳ, ಸುಲಭ ಹಾಗೂ ಸುಲಲಿತವಾಗಿ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಸಮಾವೇಶದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. 600 ಮಂದಿಗೆ ಅಂಗನವಾಡಿ ಉದ್ಯೋಗ ನೀಡಲಿದ್ದು, ರಾಜ್ಯದ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಇಷ್ಟು ಜನರಿಗೆ ಹಕ್ಕುಪತ್ರ ವಿತರಿಸುತ್ತಿರುವುದು ಇದೇ ಮೊದಲು. ಈ ಸಾಧನೆ ಗಿನ್ನೆಸ್ ದಾಖಲೆಗೆ ಸೇರಲಿದೆ. ಆ ಕುರಿತು ಪ್ರಮಾಣ ಪತ್ರ ಪ್ರದಾನ ಮಾಡಲು ಇಂಗ್ಲೆಂಡ್ ನಿಂದ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿಗಳು ತುಮಕೂರಿಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಮಾವೇಶದಲ್ಲಿ ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆಯ ಫಲಾನುಭವಿಗಳು ಭಾಗವಹಿಸಲಿದ್ದಾರೆ. 1,52,492 ಮಂದಿಗೆ ಹಕ್ಕುಪತ್ರ ನೀಡಲಾಗುವುದು. ಇ-ಪೌತಿ ಆಂದೋಲನ, ದರಖಾಸ್ತು ಪೋಡಿ, ಕಂದಾಯ ಗ್ರಾಮ ಪತ್ರ, ಪೋಡಿ ಮುಕ್ತ ಅಭಿಯಾನಸೇರಿದಂತೆ 1,52,492 ಮಂದಿಗೆ ಹಕ್ಕು ಪತ್ರ, ಆದೇಶ ಪತ್ರಗಳನ್ನು ವಿತರಿಸಲಾಗುವುದು.
ಕಂದಾಯ ಇಲಾಖೆಯ ಪ್ರಮುಖ ಸಾಧನೆಗಳು:
ಇ-ಪೋಡಿ ಅಭಿಯಾನ: ರಾಜ್ಯಾದ್ಯಂತ ದಾಖಲೆಯ 14.39 ಲಕ್ಷ ಪೋಡಿ ಕಾರ್ಯ ಪೂರ್ಣಗೊಳಿಸಲಾಗಿದೆ.
ದರ್ಖಾಸ್ತು ಪೋಡಿ: 2.5 ಲಕ್ಷ ಮಂಜೂರಿದಾರರಿಗೆ ಪೋಡಿ ಪ್ರಗತಿ ಕಲ್ಪಿಸಲಾಗಿದೆ.
ತುಮಕೂರು ಜಿಲ್ಲೆಯ ಸಾಧನೆಗಳು (1,52,492 ಫಲಾನುಭವಿಗಳು): ಇ-ಪೋಡಿ: 1,06,000 ಕುಟುಂಬಗಳಿಗೆ ಅನುಕೂಲ.
ಕಂದಾಯ ಗ್ರಾಮ ಹಕ್ಕುಪತ್ರ: 20,666 ಕುಟುಂಬಗಳಿಗೆ ವಿತರಣೆ.
ದರ್ಖಾಸ್ತು ಪೋಡಿ ಮತ್ತು ಪೋಡಿ ಮುಕ್ತ ಅಭಿಯಾನ: 25,826 ಫಲಾನುಭವಿಗಳಿಗೆ ಲಭ್ಯ.
ಈ ಸಮಾವೇಶದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಜನಸೇವೆಯ ಈ ಮಹತ್ವದ ಸಂಕಲ್ಪಕ್ಕೆ ಚಾಲನೆ ನೀಡಲಿದ್ದಾರೆ.








