ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ 2026-27ನೇ ಸಾಲಿನ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಆರಂಭಿಸಲು ಶಾಲಾ ಶಿಕ್ಷಣ ಇಲಾಖೆಯು ಬೃಹತ್ ಸಿದ್ಧತೆ ನಡೆಸಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ, ಸೇತುಬಂಧ ಶಿಕ್ಷಣ ಮತ್ತು ಅಧಿಕಾರಿಗಳ ಕಟ್ಟುನಿಟ್ಟಿನ ಉಸ್ತುವಾರಿಯ ‘ಮಿಂಚಿನ ಸಂಚಾರ’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ವಿಸ್ತೃತ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಈ ಹೊಸ ಶೈಕ್ಷಣಿಕ ವರ್ಷದಲ್ಲಿ ತಂತ್ರಜ್ಞಾನ ಆಧಾರಿತ ಹಾಜರಾತಿ, ಮಳೆಯ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಗುಣಮಟ್ಟದ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ
-
ಮೇ 29, 2026: ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವುದು.
-
ಜೂನ್ 01, 2026: ಶಾಲಾ ಪ್ರಾರಂಭೋತ್ಸವ ಮತ್ತು ಅಧಿಕೃತ ದಾಖಲಾತಿ ಪ್ರಕ್ರಿಯೆ ಆರಂಭ.
-
ಜೂನ್ 30, 2026: ಶಾಲಾ ಪ್ರವೇಶಾತಿ/ದಾಖಲಾತಿ ಪ್ರಕ್ರಿಯೆಯ ಮುಕ್ತಾಯ.
ಶಾಲಾ ಪ್ರಾರಂಭೋತ್ಸವದ ಪೂರ್ವ ಸಿದ್ಧತೆಗಳು (ಮೇ 28 ರೊಳಗೆ)
ಶಾಲೆಗಳು ಆರಂಭವಾಗುವ ಮುನ್ನವೇ ಮಕ್ಕಳ ಸುರಕ್ಷತೆ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲು ಸೂಚಿಸಲಾಗಿದೆ:
-
ಸ್ವಚ್ಛತೆ ಮತ್ತು ಕುಡಿಯುವ ನೀರು: ದಿನಾಂಕ 28.05.2026ರೊಳಗೆ ಶಾಲೆಯ ಸಂಪೂರ್ಣ ಸ್ವಚ್ಛತಾ ಕಾರ್ಯ ಮುಗಿಯಬೇಕು. ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಪರಿಶೀಲಿಸಿ ಸುಸ್ಥಿತಿಯಲ್ಲಿಡಬೇಕು.
-
ಮಳೆಗಾಲದ ಮುನ್ನೆಚ್ಚರಿಕೆ: ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಿಥಿಲಗೊಂಡ ಕಟ್ಟಡಗಳು, ನೀರಿನಿಂದ ಆವೃತವಾದ ಆವರಣ, ಬಿದ್ದಿರುವ ಮರಗಳು ಅಥವಾ ವಿದ್ಯುತ್ ತಂತಿಗಳಂತಹ ಅಪಾಯಕಾರಿ ಸನ್ನಿವೇಶಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ತಕ್ಷಣ ತೆರವುಗೊಳಿಸಬೇಕು.
-
ಶಾಲಾ ದಾಖಲೆಗಳ ಸಿದ್ಧತೆ: ಶಾಲಾ ವೇಳಾಪಟ್ಟಿ, ವಿಷಯವಾರು ವಾರ್ಷಿಕ ಕ್ರಿಯಾ ಯೋಜನೆ, ಶಿಕ್ಷಕರ ವೇಳಾಪಟ್ಟಿ, ಶಾಲಾಭಿವೃದ್ಧಿ ಯೋಜನೆ (SDP) ಮತ್ತು ಶಾಲಾ ಪಂಚಾಂಗವನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಬೇಕು. ಎಸ್.ಡಿ.ಎಂ.ಸಿ (SDMC) ಸಭೆ ನಡೆಸಿ ಸಮಾಲೋಚನೆ ನಡೆಸಬೇಕು.
-
ಸಮುದಾಯದ ಆಹ್ವಾನ: ಶಾಲಾ ಪ್ರಾರಂಭೋತ್ಸವದ ದಿನದಂದು ಮಕ್ಕಳನ್ನು ಬರಮಾಡಿಕೊಳ್ಳಲು ಜಾಥಾ ನಡೆಸಿ, ಪೋಷಕರನ್ನು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ‘ಶಾಲಾ ಹಬ್ಬ’ವಾಗಿ ಆಚರಿಸಬೇಕು.
ಪ್ರಾರಂಭೋತ್ಸವದ ದಿನದ ವಿಶೇಷತೆಗಳು (ಜೂನ್ 1)
-
ವಿಶೇಷ ಸ್ವಾಗತ: ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳನ್ನು ಅತ್ಯಂತ ಉತ್ಸಾಹದಿಂದ ಬರಮಾಡಿಕೊಳ್ಳಬೇಕು.
-
ಅತಿಥಿಗಳ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ತಮ್ಮ ವ್ಯಾಪ್ತಿಯ ಯಾವುದಾದರೂ ಒಂದು ಸರ್ಕಾರಿ ಶಾಲೆಗೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳ ಹಾಗೂ ಜಿ.ಪಂ. ಸಿಇಓ ಅವರ ಮಾರ್ಗದರ್ಶನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೂ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ.
-
ಸಿಹಿಯೂಟದ ಬಿಸಿಊಟ: ಮೊದಲ ದಿನವೇ ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ರುಚಿಕರ ಹಾಗೂ ಶುಚಿಯಾದ ಸಿಹಿಯೂಟದ ವ್ಯವಸ್ಥೆ ಮಾಡಬೇಕು.
-
ಮೊದಲ ದಿನವೇ ಪಾಠ ಆರಂಭ: ಮೊದಲ ಎರಡು ಅವಧಿಗಳಲ್ಲಿ ಸ್ವಾಗತ ಕಾರ್ಯಕ್ರಮ ಮುಗಿಸಿ, ಮೂರನೇ ಅವಧಿಯಿಂದಲೇ ನಿಯಮಿತ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಪಾಠ ಪ್ರವಚನಗಳನ್ನು ಆರಂಭಿಸಬೇಕು.
ದಾಖಲಾತಿ ಆಂದೋಲನ ಮತ್ತು ಸರ್ಕಾರದ ಸೌಲಭ್ಯಗಳು
ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಈ ಕೆಳಗಿನ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ:
-
ಮನೆ ಮನೆ ಭೇಟಿ: ದಿನಾಂಕ 06.06.2026ರ ದಾಖಲಾತಿ ಪ್ರಗತಿಯನ್ನು ಆಧರಿಸಿ, ಶಾಲೆಗೆ ಬಾರದಿರುವ ಅಥವಾ ಅರ್ಹ ವಯಸ್ಸಿನ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಿ, ಶಿಕ್ಷಕರು ಮತ್ತು SDMC ಪದಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪೋಷಕರ ಮನವೊಲಿಸಬೇಕು.
-
ವಿದ್ಯಾವಿಕಾಸ ಯೋಜನೆ: ಶಾಲೆಯ ಮೊದಲ ದಿನವೇ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಕ್ಷೀರಭಾಗ್ಯ, ಶೂ ಮತ್ತು ಸಾಕ್ಸ್ಗಳ ಸೌಲಭ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಂಡು ವಿತರಿಸಬೇಕು.
-
ದ್ವಿಭಾಷಾ (Bilingual) ಮಾಧ್ಯಮದ ವಿಸ್ತರಣೆ: ರಾಜ್ಯದ ಆಯ್ದ 25,014 ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಕನ್ನಡ-ಇಂಗ್ಲಿಷ್ ಮತ್ತು ಉರ್ದು-ಇಂಗ್ಲಿಷ್ ದ್ವಿಭಾಷಾ ಬೋಧನಾ ಪದ್ಧತಿಯನ್ನು ಜಾರಿಗೊಳಿಸಲಾಗುತ್ತಿದ್ದು, ಪೋಷಕರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕು.
-
ಪೂರ್ವ ಪ್ರಾಥಮಿಕ (LKG/UKG) ಆರಂಭ: 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಿ ದಾಖಲಾತಿ ಹೆಚ್ಚಿಸಲು ಪ್ರಚಾರ ಮಾಡಬೇಕು.
‘KAAMS’ ಮತ್ತು ‘AI’ ಆಧಾರಿತ ಹಾಜರಾತಿ ಕಡ್ಡಾಯ
ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನವನ್ನು ಅಳವಡಿಸಲಾಗಿದೆ:
-
ಶಿಕ್ಷಕರ ಹಾಜರಾತಿ: ಶಾಲಾ ಶಿಕ್ಷಣ ಇಲಾಖೆಯ ಖಾಯಂ ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು KAAMS (ಕರ್ತವ್ಯ-ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್) ಮೊಬೈಲ್ ಅಪ್ಲಿಕೇಶನ್ ಮೂಲಕವೇ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು.
-
ವಿದ್ಯಾರ್ಥಿಗಳ ಹಾಜರಾತಿ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ AI-Based Student Facial Attendance Monitoring System (ಕೃತಕ ಬುದ್ಧಿಮತ್ತೆ ಆಧಾರಿತ ಮುಖ ಗುರುತಿಸುವಿಕೆ ಹಾಜರಾತಿ ವಿಧಾನ) ಆಪ್ ಮೂಲಕ ನಿರಂತರ ಹಾಜರಾತಿ ನಿರ್ವಹಣೆಯನ್ನು ಮುಖ್ಯ ಶಿಕ್ಷಕರು ಮಾಡಬೇಕು.
‘ಸೇತುಬಂಧ’ ಶಿಕ್ಷಣ
ಹಿಂದಿನ ಸಾಲಿನ ಕಲಿಕಾ ಕೊರತೆಯನ್ನು ನೀಗಿಸಲು ವಿಶೇಷ ಸೇತುಬಂಧ ಕಾರ್ಯಕ್ರಮ ಆಯೋಜಿಸಲಾಗಿದೆ:
-
ಅವಧಿ: 1 ರಿಂದ 3ನೇ ತರಗತಿಗಳಿಗೆ 30 ದಿನಗಳು ಹಾಗೂ 4 ರಿಂದ 10ನೇ ತರಗತಿಗಳಿಗೆ 15 ದಿನಗಳ ಸೇತುಬಂಧ ಶಿಕ್ಷಣ ಇರಲಿದೆ.
-
ಪರೀಕ್ಷೆಗಳು: ಜೂನ್ 6 ರೊಳಗೆ ಪೂರ್ವ ಪರೀಕ್ಷೆ/ನೈದಾನಿಕ ಪರೀಕ್ಷೆ ನಡೆಸಿ ಕಲಿಕಾ ಹಿನ್ನಡೆ ಗುರುತಿಸಬೇಕು. ತದನಂತರ ಪರಿಹಾರ ಬೋಧನೆ ನೀಡಿ ಜೂನ್ ಮಧ್ಯಭಾಗದಲ್ಲಿ ಸಾಫಲ್ಯ ಪರೀಕ್ಷೆ ನಡೆಸಿ ಫಲಿತಾಂಶವನ್ನು SATS ತಂತ್ರಾಂಶದಲ್ಲಿ ದಾಖಲಿಸಬೇಕು. ಇದಕ್ಕಾಗಿ ‘ಕಲಿಕಾ ಬಲವರ್ಧನೆ’ ಚಟುವಟಿಕೆ ಪುಸ್ತಕವನ್ನು ಬಳಸಿಕೊಳ್ಳಬೇಕು.
ಅಧಿಕಾರಿಗಳಿಂದ ‘ಮಿಂಚಿನ ಸಂಚಾರ’ (Flying Visit)
ಶಾಲೆಗಳು ಸುಸೂತ್ರವಾಗಿ ನಡೆಯುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ಬಿಗಿಯಾದ ಉಸ್ತುವಾರಿ ಕ್ರಮ ಕೈಗೊಂಡಿದೆ. CRP ಯಿಂದ ಹಿಡಿದು DDPI ವರೆಗಿನ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಲಿದ್ದಾರೆ:
-
ಮಿಂಚಿನ ಸಂಚಾರ: ಅಧಿಕಾರಿಗಳು ದಿನವೊಂದಕ್ಕೆ ತಲಾ 4 ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಶಾಲಾ ಸಿದ್ಧತೆ, ಮೂಲಭೂತ ಸೌಕರ್ಯ ಮತ್ತು ಬಿಸಿಊಟ ಪರಿಶೀಲಿಸಲಿದ್ದಾರೆ.
-
ಸಂದರ್ಶನ ಸಪ್ತಾಹ: ಪ್ರತಿ ಜಿಲ್ಲೆಯಲ್ಲೂ ಉಪನಿರ್ದೇಶಕರ (DDPI) ನೇತೃತ್ವದಲ್ಲಿ ವಿಷಯ ಸಂಪನ್ಮೂಲ ಶಿಕ್ಷಕರನ್ನೊಳಗೊಂಡ ತಂಡಗಳು ರಚನೆಯಾಗಲಿದ್ದು, ದಿನಕ್ಕೊಂದು ತಾಲೂಕಿನಂತೆ 6 ದಿನಗಳ ಕಾಲ ತಪಾಸಣೆ ನಡೆಸಲಿವೆ. ಪ್ರತಿ ತಂಡ ದಿನಕ್ಕೆ 3 ಶಾಲೆಗಳನ್ನು (2 ಪ್ರಾಥಮಿಕ, 1 ಪ್ರೌಢಶಾಲೆ) ಸಂದರ್ಶಿಸಿ ಶೈಕ್ಷಣಿಕ ಗುಣಮಟ್ಟಕ್ಕೆ ಮಾರ್ಗದರ್ಶನ ನೀಡಲಿವೆ.
-
ಪರಿವೀಕ್ಷಣಾ ಆಪ್ (Inspection App): ಅಧಿಕಾರಿಗಳು ಭೇಟಿಯ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕವೇ ಸ್ಥಳದಲ್ಲೇ ಇಂದೀಕರಿಸಬೇಕು. ಒಟ್ಟು 25 ಅಂಶಗಳ ಚೆಕ್ಲಿಸ್ಟ್ ಆಧಾರದ ಮೇಲೆ ಶಾಲೆಗಳನ್ನು ಶ್ರೇಣೀಕರಿಸಿ, ಹಿಂದುಳಿದ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು.
ಆಯುಕ್ತರ ಖಡಕ್ ಸೂಚನೆ
“ಯಾವುದೇ ಕಾರಣಕ್ಕೂ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಅಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರು ಜವಾಬ್ದಾರಿಯಿಂದ ವರ್ತಿಸಬೇಕು. ಕಳೆದ ಸಾಲಿಗಿಂತ ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಹೆಚ್ಚಾಗಬೇಕು. ನಿರ್ಲಕ್ಷ್ಯ ವಹಿಸುವ ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು” ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.
https://kannadanewsnow.com/kannada/why-should-mangoes-be-soaked-in-water-before-eating-here-are-the-scientific-reasons/








