ಇಸ್ಲಾಮಾಬಾದ್: ಭಯೋತ್ಪಾದನೆ ಮತ್ತು ಗಡಿ ವಿವಾದಗಳ ಹಿನ್ನೆಲೆಯಲ್ಲಿ ಭಾರತವು ‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ’ವನ್ನು (Indus Waters Treaty) ಅಮಾನತುಗೊಳಿಸಿ ಇಂದಿಗೆ ಸರಿಯಾಗಿ ಒಂದು ವರ್ಷ ಸಂದಿದೆ. ಕಳೆದ 60 ವರ್ಷಗಳಿಂದ ಚಾಲ್ತಿಯಲ್ಲಿದ್ದ ಈ ಒಪ್ಪಂದಕ್ಕೆ ಭಾರತ ಬ್ರೇಕ್ ಹಾಕಿದ ಪರಿಣಾಮ, ಪಾಕಿಸ್ತಾನವು ಇತಿಹಾಸದಲ್ಲೇ ಕಾಣದಂತಹ ಜಲಕ್ಷಾಮ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳು ಕೃಷಿಗಾಗಿ ಸಂಪೂರ್ಣವಾಗಿ ಸಿಂಧೂ ನದಿಯನ್ನೇ ಅವಲಂಬಿಸಿವೆ. ಭಾರತವು ಪಶ್ಚಿಮ ನದಿಗಳ ನೀರನ್ನು ತಡೆಹಿಡಿದು ತನ್ನ ಅಣೆಕಟ್ಟು ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಪಾಕಿಸ್ತಾನದ ಲಕ್ಷಾಂತರ ಎಕರೆ ಕೃಷಿ ಭೂಮಿ ಒಣಗಿದೆ. ವಿಶೇಷವಾಗಿ ಗೋಧಿ ಮತ್ತು ಭತ್ತದ ಇಳುವರಿಯಲ್ಲಿ ಶೇ. 30ರಷ್ಟು ಕುಸಿತ ಕಂಡಿದೆ.
ಪಾಕಿಸ್ತಾನದ ಪ್ರಮುಖ ಜಲವಿದ್ಯುತ್ ಯೋಜನೆಗಳು ನೀರಿಲ್ಲದೆ ಸ್ಥಗಿತಗೊಂಡಿವೆ. ಇದರಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ದಿನಕ್ಕೆ 12 ರಿಂದ 15 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಉಂಟಾಗುತ್ತಿದ್ದು, ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿವೆ.
ಕರಾಚಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಅಂತರ್ಜಲ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು, ಜನಸಾಮಾನ್ಯರು ಟ್ಯಾಂಕರ್ ನೀರಿಗಾಗಿ ಪರದಾಡುವಂತಾಗಿದೆ.
ಕೃಷಿ ಉತ್ಪನ್ನಗಳ ರಫ್ತು ಕುಸಿದಿರುವುದರಿಂದ ಮತ್ತು ಇಂಧನ ಆಮದು ವೆಚ್ಚ ಹೆಚ್ಚಾಗಿರುವುದರಿಂದ ಪಾಕಿಸ್ತಾನದ ಆರ್ಥಿಕತೆ ಐಸಿಯುನಲ್ಲಿದೆ. ಹಣದುಬ್ಬರ ಗಗನಕ್ಕೇರಿದ್ದು, ಅಗತ್ಯ ವಸ್ತುಗಳ ಬೆಲೆ ಜನಸಾಮಾನ್ಯರ ಕೈಗೆಟುಕದಂತಾಗಿದೆ.








