ಕೋಲ್ಕತ್ತಾ: ಪಶ್ಚಿಮ ಬಂಗಾಳದ ಭಾಂಗರ್ನಲ್ಲಿ ಭಾರಿ ಪ್ರಮಾಣದ ಕಚ್ಚಾ ಬಾಂಬ್ಗಳು ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ, ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಿದೆ. ಈ ಘಟನೆಯ ಹಿಂದೆ ದೊಡ್ಡ ಮಟ್ಟದ ಭಯೋತ್ಪಾದನಾ ಸಂಚು ಇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎನ್ಐಎ ಸೋಮವಾರ (ಏಪ್ರಿಲ್ 27, 2026) ಅಧಿಕೃತವಾಗಿ ಎಫ್ಐಆರ್ ದಾಖಲಿಸಿಕೊಂಡಿದೆ.
ಏಪ್ರಿಲ್ 25 ರಂದು ದಕ್ಷಿಣ 24 ಪರಗಣ ಜಿಲ್ಲೆಯ ಉತ್ತರ ಕಾಶಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಜೇರ್ಹತ್ ಗ್ರಾಮದ ಪಾಳುಬಿದ್ದ ಮನೆಯೊಂದರಲ್ಲಿ 79ಕ್ಕೂ ಹೆಚ್ಚು ಜೀವಂತ ಕಚ್ಚಾ ಬಾಂಬ್ಗಳು ಪತ್ತೆಯಾಗಿದ್ದವು. ಈ ಸ್ಫೋಟಕಗಳನ್ನು ಸೆಣಬಿನ ಹಗ್ಗದಿಂದ ಕಟ್ಟಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಸಂಗ್ರಹಿಸಿಡಲಾಗಿತ್ತು.
ಕೇವಲ ಚುನಾವಣಾ ಹಿಂಸಾಚಾರ ಮಾತ್ರವಲ್ಲದೆ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ಮತ್ತು ಪ್ರಾಣಹಾನಿ ಉಂಟುಮಾಡಲು ದೊಡ್ಡ ಮಟ್ಟದ ಪಿತೂರಿ ನಡೆದಿದೆ ಎಂದು ಕೇಂದ್ರ ಸರ್ಕಾರ ಶಂಕಿಸಿದೆ. ಈ ಹಿನ್ನೆಲೆಯಲ್ಲಿ ಎನ್ಐಎ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ವರ್ಗಾಯಿಸಲಾಗಿದೆ.
ಕೋಲ್ಕತ್ತಾ ಪೊಲೀಸರು ಈ ಹಿಂದೆ ದಾಖಲಿಸಿದ್ದ ಪ್ರಕರಣವನ್ನು ಆಧರಿಸಿ, ಎನ್ಐಎ ಇಂದು ನೂತನ ಎಫ್ಐಆರ್ (RC-25/2026/NIA/DLI) ದಾಖಲಿಸಿದೆ. ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪ್ರಭಾವಿ ವ್ಯಕ್ತಿ ವಹಿದುಲ್ ಇಸ್ಲಾಂ ಎಂಬಾತನನ್ನು ಎನ್ಐಎ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಅಲ್ಲದೆ, ಟಿಎಂಸಿ ಕಾರ್ಯಕರ್ತ ರಫಿಕುಲ್ ಇಸ್ಲಾಂ ಮನೆಯಲ್ಲೂ ದಾಳಿ ನಡೆದಿದ್ದು, ಸ್ಫೋಟಕಗಳ ಮೂಲದ ಬಗ್ಗೆ ಜಾಲ ಬೀಸಲಾಗಿದೆ.








