ಶಿವಮೊಗ್ಗ: ಸಾಗರ ಪೊಲೀಸ್ ಉಪವಿಭಾಗದಲ್ಲಿ ಸಂಚಾರ ನಿಯಮಗಳ ಜಾರಿಯನ್ನು ಹೆಚ್ಚಿಸಲು ಕಳೆದ 2 ತಿಂಗಳಿಂದ ಐಟಿಎಂಎಸ್ (ITMS) ತಂತ್ರಜ್ಞಾನದ ಪರಿಚಯಿಸಲಾಗಿದೆ. ಆದರೇ ನೋ ಪಾರ್ಕಿಂಗ್ ಪ್ರದೇಶದಲ್ಲಿದ್ದಂತ ಕಾರಿಗೆ ದಂಡ ವಿಧಿಸೋ ನಿಟ್ಟಿನಲ್ಲಿ ಮಾಡಿದಂತ ಎಡವಟ್ಟಿನಿಂದಾಗಿ ಕಾರಿನಲ್ಲಿ ತೆರಳೋರಿಗೆ ಹೆಲ್ಮೆಟ್ ದಂಡದ ವಿವಾದ ಸೃಷ್ಠಿಯಾಗಿದೆ ಎಂಬುದಾಗಿ ಎಎಸ್ಪಿ ಡಾ. ಬೆನಕ ಪ್ರಸಾದ್ ಅವರು ಮಹತ್ವದ ಸ್ಪಷ್ಟಪಡಿಸಿದ್ದಾರೆ.
ಇಂದು ಅವರು ಸಾಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಚಲನ್ ದೋಷದ ಘಟನೆಯ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಘಟನೆಯ ವಿವರ
ದಿನಾಂಕ 01/05/2026 ರಂದು ಸಾಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನ (4 ಚಕ್ರದ ವಾಹನ) ಮಾಲೀಕರೊಬ್ಬರಿಗೆ ಹೆಲ್ಮೆಟ್ ಧರಿಸದಿದ್ದಕ್ಕಾಗಿ ದಂಡ ವಿಧಿಸಲಾಗಿತ್ತು. ವಾಸ್ತವವಾಗಿ ಇದು ನೋ-ಪಾರ್ಕಿಂಗ್ (ನಿಲುಗಡೆ ನಿಷೇಧಿತ) ವಲಯದಲ್ಲಿ ವಾಹನವನ್ನು ನಿಲ್ಲಿಸಿದ್ದ ಪ್ರಕರಣವಾಗಿತ್ತು. ಐಟಿಎಂಎಸ್ ತಂತ್ರಾಂಶದಲ್ಲಿ ವಾಹನ ಮಾಲೀಕರು ಮಾಡಿದ ಉಲ್ಲಂಘನೆಯ ಬಗೆಯನ್ನು ನಮೂದಿಸುವಾಗ ಸಿಬ್ಬಂದಿಯೊಬ್ಬರು ಮಾಡಿದ ಸಣ್ಣ ಕೈತಪ್ಪಿನಿಂದಾಗಿ ಈ ಪ್ರಮಾದ ಸಂಭವಿಸಿದೆ.
ಚಲನ್ ತಿದ್ದುಪಡಿ ಮತ್ತು ಇಲಾಖಾ ಕ್ರಮ
ಈ ಘಟನೆ ಪೊಲೀಸ್ ಇಲಾಖೆಯ ಗಮನಕ್ಕೆ ಬಂದ ತಕ್ಷಣ, ತಪ್ಪಾಗಿದ್ದ ದಂಡದ ಚಲನ್ ಅನ್ನು ಸರಿಪಡಿಸಲಾಗಿದೆ. ನಂತರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177ರ (ನಿಲುಗಡೆ ನಿಷೇಧಿತ ವಲಯದಲ್ಲಿ ವಾಹನ ನಿಲುಗಡೆ) ಅಡಿಯಲ್ಲಿ ಹೊಸ ಚಲನ್ ಅನ್ನು ಮರು ಹೊರಡಿಸಲಾಗಿದೆ. ಭವಿಷ್ಯದಲ್ಲಿ ಇಂತಹ ತಪ್ಪುಗಳು ಘಟಿಸದಂತೆ ತಡೆಯಲು, ಚಲನ್ಗಳನ್ನು ರಚಿಸುವಾಗ ಹೆಚ್ಚಿನ ಜಾಗರೂಕರಾಗಿರಲು ಎಲ್ಲಾ ಸಂಬಂಧಪಟ್ಟ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ITMS ವ್ಯವಸ್ಥೆಯ ಪಾರದರ್ಶಕತೆ
ಐಟಿಎಂಎಸ್ ಅತ್ಯಂತ ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ತಂತ್ರಜ್ಞಾನವಾಗಿದೆ. ಇದರಲ್ಲಿ ಕೆಳಗಿನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ:
-
ನಿಖರ ಮಾಹಿತಿ: ಎಲ್ಲಾ ರೀತಿಯ ಸಂಚಾರ ಉಲ್ಲಂಘನೆಗಳನ್ನು ಜಿಪಿಎಸ್ ಜಿಯೋ ಟ್ಯಾಗ್ ಮಾಡಿದ ಫೋಟೋದೊಂದಿಗೆ ದಿನಾಂಕ, ಸಮಯ ಮತ್ತು ಘಟನೆಯ ಸ್ಥಳವನ್ನು ಸೆರೆಹಿಡಿಯಲಾಗುತ್ತದೆ.
-
ಸ್ಪಷ್ಟ ಪುರಾವೆ: ಎಲ್ಲಾ ಟ್ರಾಫಿಕ್ ಚಲನ್ಗಳಲ್ಲಿ ಸಂಚಾರ ಉಲ್ಲಂಘನೆಯ ಪುರಾವೆಯಾಗಿ ವಾಹನದ ನಂಬರ್ ಪ್ಲೇಟ್ ಅನ್ನು ಸ್ಪಷ್ಟವಾಗಿ ತೋರಿಸುವ ಫೋಟೋವನ್ನು ಅಪ್ಲೋಡ್ ಮಾಡಲಾಗುತ್ತದೆ.
ಸಾರ್ವಜನಿಕರಿಗೆ ASP ಡಾ.ಬೆನಕ ಪ್ರಸಾದ್ ಈ ಮನವಿ
ಇಷ್ಟೆಲ್ಲಾ ಮುನ್ನೆಚ್ಚರಿಕೆಗಳ ನಂತರವೂ ತಪ್ಪುಗಳು ಸಂಭವಿಸಿದ್ದೇ ಆದರೆ, ಸಾರ್ವಜನಿಕರು ಯಾವುದೇ ಸ್ಪಷ್ಟೀಕರಣಕ್ಕಾಗಿ ಅಥವಾ ಸಹಾಯಕ್ಕಾಗಿ ನೇರವಾಗಿ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಬಹುದು ಎಂದು ಎಎಸ್ಪಿ ಡಾ. ಬೆನಕ ಪ್ರಸಾದ್ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
SHOCKING: ಬೇಸಿಗೆಯಲ್ಲಿ ‘AC’ ಬಳಸೋರೇ ಎಚ್ಚರ! ದೆಹಲಿಯಲ್ಲಿ ಸ್ಪೋಟಗೊಂಡು ಒಂಬತ್ತು ಮಂದಿ ಬಲಿ, ಹಲವರಿಗೆ ಗಾಯ
BREAKING: ರಾಜ್ಯ ‘ಪ್ರಾಥಮಿಕ ಶಾಲಾ ಶಿಕ್ಷಕ’ರ ಸಂಘದ ಚುನಾವಣೆಗೆ ಕೋರ್ಟ್ ತಡೆ: ಮೇ.1ರ ಚುನಾವಣೆಯೂ ಅಸಿಂಧು








