ಶಿವಮೊಗ್ಗ: ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಸಾಗರ-ಸೊರಬ ಪ್ರಾಂತದ ವತಿಯಿಂದ ಹವ್ಯಕ ಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿರುವ ‘ಪ್ರತಿಬಿಂಬ’ ಕಾರ್ಯಕ್ರಮ ಹಾಗೂ ತಾಲೂಕು ಮಟ್ಟದ ಮಹಿಳಾ ವೇದಿಕೆಯ ಉದ್ಘಾಟನೆಯು ಜೂನ್ 21ರ ಭಾನುವಾರದಂದು ಸಾಗರದ ರಾಘವೇಶ್ವರ ಸಭಾಭವನದಲ್ಲಿ ಜರುಗಲಿದೆ ಎಂದು ಮಹಾಸಭಾದ ನಿರ್ದೇಶಕರಾದ ಹು ಬಾ ಅಶೋಕ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, “ಕಳೆದ 30 ವರ್ಷಗಳಿಂದ ಮಹಾಸಭೆಯು ಹವ್ಯಕರಲ್ಲಿರುವ ಕಲೆ, ಸಾಹಿತ್ಯ ಮತ್ತು ಸಂಗೀತ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ‘ಪ್ರತಿಬಿಂಬ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಬೆಂಗಳೂರಿನಲ್ಲಿ ಆರಂಭವಾದ ಈ ಕಾರ್ಯಕ್ರಮ, ಇಂದು ಹವ್ಯಕರು ನೆಲೆಸಿರುವ ಎಲ್ಲಾ ಪ್ರದೇಶಗಳಿಗೂ ವಿಸ್ತರಿಸಿದ್ದು, ಪ್ರತಿವರ್ಷ ಅತ್ಯಂತ ಸಡಗರದಿಂದ ನಡೆಯುತ್ತಿದೆ,” ಎಂದರು.
ವಿವಿಧ ಸ್ಪರ್ಧೆಗಳು ಮತ್ತು ಮಾನಸಿಕ ಒತ್ತಡ ನಿರ್ವಹಣಾ ಕಾರ್ಯಾಗಾರ:
ಜೂನ್ 21ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆಯಿಂದಲೇ ವಿವಿಧ ವಯೋಮಾನದವರಿಗೆ (6 ವರ್ಷದೊಳಗಿನ ಮಕ್ಕಳು, 7 ರಿಂದ 12 ವರ್ಷ, 12 ರಿಂದ 18 ವರ್ಷ ಹಾಗೂ 18 ವರ್ಷ ಮೇಲ್ಪಟ್ಟವರಿಗೆ) ಹಂತ-ಹಂತವಾಗಿ ಸಾಂಸ್ಕೃತಿಕ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಇದರೊಂದಿಗೆ ಪ್ರಸ್ತುತ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಈ ಬಾರಿ ವಿಶೇಷವಾಗಿ 8ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ‘ಮಾನಸಿಕ ಒತ್ತಡ ಮತ್ತು ಪರಿಹಾರಗಳು’ ಎಂಬ ವಿಷಯದ ಕುರಿತು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದೆ. ಎಸ್. ಆರ್. ಅಚ್ಯುತ ರಾವ್ ಅವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದರು.
ಮಹಿಳಾ ವೇದಿಕೆ ಉದ್ಘಾಟನೆ:
ಈ ಹಿಂದೆ ಬೆಂಗಳೂರಿನ ಕೇಂದ್ರ ಸಮಿತಿಗೆ ಮಾತ್ರ ಸೀಮಿತವಾಗಿದ್ದ ‘ಮಹಿಳಾ ವೇದಿಕೆ’ಯನ್ನು ಹಂತ-ಹಂತವಾಗಿ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲಾಗುತ್ತಿದ್ದು, ಮಹಿಳೆಯರ ಸಂಘಟನೆಯ ದೃಷ್ಟಿಯಿಂದ ಸಾಗರ ಪ್ರಾಂತದ ಮಹಿಳಾ ವೇದಿಕೆಗೆ ಶ್ರೀಮತಿ ಅರ್ಚನಾ ಸುಬ್ರಹ್ಮಣ್ಯ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಅಂದು ಈ ನೂತನ ಮಹಿಳಾ ವೇದಿಕೆಯ ಉದ್ಘಾಟನೆಯೂ ನೆರವೇರಲಿದೆ ಎಂದು ತಿಳಿಸಿದರು.
ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ:
ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದ ನೇತೃತ್ವವನ್ನು ಸಾಗರ ಹವ್ಯಕ ಮಂಡಲದ ಅಧ್ಯಕ್ಷರಾದ ಮುರಳಿ ಗೀಜಗಾರು ವಹಿಸಲಿದ್ದು, ರಾಜಾರಾಮ್ ಹೊಸಬಾಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ, ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ವಿಜಯಲಕ್ಷ್ಮಿ ಹೆಗಡೆ ಕಂಪ್ಲಿ ಹಾಗೂ ಮಹಿಳಾ ವೇದಿಕೆಯ ಕೇಂದ್ರ ಸಂಚಾಲಕಿ ಮಧುರಾ ಗಾಂವ್ಕರ್ ಉಪಸ್ಥಿತರಿರಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಆಯುರ್ವೇದ ತಜ್ಞರಾದ ಡಾ. ಪತಂಜಲಿ ಕೆ.ವಿ., ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷರಾದ ಎಚ್.ಎನ್. ಉಮೇಶ ದೊಂಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಹಾಸಭಾದ ಹಿರಿಯ ನಿರ್ದೇಶಕರಾದ ಕೆ.ಎನ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ.
83 ವರ್ಷಗಳ ನಿರಂತರ ಸೇವೆ:
ಮಹಾಸಭೆಯು ಕಳೆದ 83 ವರ್ಷಗಳಿಂದ ಸಮಾಜದ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. 80ನೇ ವರ್ಷದ ಅಂಗವಾಗಿ 3ನೇ ವಿಶ್ವ ಹವ್ಯಕ ಸಮ್ಮೇಳನ, ಇತ್ತೀಚೆಗೆ ಹವ್ಯಕ ಶಿಕ್ಷಕರ ಸಮಾವೇಶ ಹಾಗೂ ಉದ್ಯೋಗಿಗಳ ಸಮಾವೇಶ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅದೇ ರೀತಿ ಈ ‘ಪ್ರತಿಬಿಂಬ’ ಕಾರ್ಯಕ್ರಮವನ್ನೂ ಯಶಸ್ವಿಗೊಳಿಸಲು ಹವ್ಯಕ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಹು ಬಾ ಅಶೋಕ್ ಮನವಿ ಮಾಡಿದರು.
ಪ್ರತಿಬಿಂಬ ಕಾರ್ಯಕ್ರಮದ ವಿಸ್ತರಣೆ: ಸಂಚಾಲಕ ದೀಪಕ್ ಹೆಗಡೆ ಗೋಳಿಕೈ
ಶ್ರೀ ಅಖಿಲ ಹವ್ಯಕ ಮಹಾಸಭಾದ ‘ಪ್ರತಿಬಿಂಬ’ ಕೇಂದ್ರದ ಸಂಚಾಲಕರಾದ ದೀಪಕ ಹೆಗಡೆ ಗೋಳಿಕೈ ಅವರು ಮುಂಬರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಮಾತನಾಡಿದಂತ ಅವರು, ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿರುವ ಮಲೆನಾಡಿನ ಸಾಗರ, ಹೊಸನಗರ ಪ್ರಾಂತ್ಯ, ಉತ್ತರ ಕನ್ನಡದ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮಂಗಳೂರಿನ ಪುತ್ತೂರು ಭಾಗಗಳಲ್ಲಿ ಕಳೆದ 4-5 ವರ್ಷಗಳಿಂದ ‘ಪ್ರತಿಬಿಂಬ’ ಕಾರ್ಯಕ್ರಮವನ್ನು ವಿಕೇಂದ್ರೀಕರಣಗೊಳಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ವರ್ಷ ಒಟ್ಟು 13 ಪ್ರಾಂತ್ಯಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಯೋಜಿಸಲಾಗಿದ್ದು, ಈಗಾಗಲೇ 6 ಪ್ರಾಂತ್ಯಗಳಲ್ಲಿ (ಶಿರಸಿ, ಸಿದ್ದಾಪುರ, ಯಲ್ಲಾಪುರ, ಹೊಸನಗರದ ತುಂಬ್ರಿ ಹಾಗೂ ಹುಬ್ಬಳ್ಳಿ-ಧಾರವಾಡ) ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ತಿಳಿಸಿದರು.
ಮುಂಬರುವ ಪ್ರಾಂತ್ಯಗಳು:
- ಶಿವಮೊಗ್ಗ ನಗರ
- ಮಂಗಳೂರು ಭಾಗದ ಪುತ್ತೂರು ಮತ್ತು ಕಾಸರಗೋಡು
- ರಾಜ್ಯದ ಹೊರಗಿರುವ ಗೋವಾ ಹಾಗೂ ಮುಂಬೈ-ಪುಣಾ ಭಾಗದ ಮುಂಬೈನಲ್ಲಿ ಮುಂದಿನ ಒಂದೆರಡು ತಿಂಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ವಿದ್ಯಾರ್ಥಿಗಳಿಗಾಗಿ ‘ಪ್ರೇರಣಾ’ ಕಾರ್ಯಕ್ರಮ
ಸಾಗರದಲ್ಲಿ ಪ್ರಪ್ರಥಮ ಬಾರಿಗೆ ಪ್ರತಿಬಿಂಬ ಸ್ಪರ್ಧಾ ಕಾರ್ಯಕ್ರಮದ ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಪ್ರೇರಣಾ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
- ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೇಗೆ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು?
- ಹೆಚ್ಚಿನ ಅಂಕಗಳನ್ನು ಗಳಿಸುವುದು ಹೇಗೆ?
- ಒತ್ತಡ ಮುಕ್ತವಾಗಿ ಪರೀಕ್ಷೆಯನ್ನು ಎದುರಿಸುವುದು ಹೇಗೆ?
ಎಂಬಿತ್ಯಾದಿ ವಿಷಯಗಳ ಕುರಿತು ಖ್ಯಾತ ಸ್ಪೂರ್ತಿದಾಯಕ ಭಾಷಣಕಾರರಾದ ಅಚ್ಯುತ ರಾವ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಜೂನ್ 21ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶೇಷ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಖ್ಯಾತ ಯೋಗಪೀಠವಾದ ಕಾನಗೋಡಿನ ಶ್ರೀಧರ ಮೂರ್ತಿ ಅವರಿಂದ ಈ ಯೋಗ ಪ್ರದರ್ಶನ ನಡೆಯಲಿದೆ.
ಈ ಎಲ್ಲಾ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹವ್ಯಕ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಸಂಚಾಲಕರಾದ ದೀಪಕ ಹೆಗಡೆ ಗೋಳಿಕೈ ಅವರು ಈ ಮೂಲಕ ವಿನಂತಿಸಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ವೇದಿಕೆ ಸಂಚಾಲಕಿ ಅರ್ಚನಾ ಸುಬ್ರಹ್ಮಣ್ಯ, ಸಾಗರ-ಸೊರಬ ಪ್ರತಿಬಿಂಬದ ಸಂಚಾಲಕರಾದ ಶ್ರೀಧನ್ ಭೀಮನಕೋಣೆ, ಮಂಜುನಾಥ್ ಭೀಮನಕೋಣೆ, ಸೊರಬ ತಾಲೂಕು ಸಂಚಾಲಕರಾದ ರಘುನಂದನ್ ಹಾಗೂ ಅಭಿರಾಮ್ ಉಪಸ್ಥಿತರಿದ್ದರು.








