ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚಿನ ರಾಜ್ಯಪಾಲರ ಭಾಷಣದ ಮೂಲಕ ತಮಿಳುನಾಡು ಸರ್ಕಾರವು ಮೇಕೆದಾಟು ಯೋಜನೆಗೆ ಮತ್ತೊಮ್ಮೆ ತನ್ನ ತೀವ್ರ ವಿರೋಧವನ್ನು ಪುನರುಚ್ಚರಿಸಿದ್ದು, ಕಾನೂನಾತ್ಮಕವಾಗಿ ಅಡ್ಡಿಪಡಿಸಲು ಮುಂದಾಗಿದೆ. ತಮಿಳುನಾಡಿನ ಈ ನಿಲುವಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಕ ಉತ್ತರವನ್ನೇ ನೀಡಿದ್ದಾರೆ.
ತಮಿಳುನಾಡು ಸರ್ಕಾರವು ತನ್ನ ರಾಜ್ಯಪಾಲರ ಭಾಷಣವನ್ನು ಬಳಸಿಕೊಂಡು ಮೇಕೆದಾಟು ಯೋಜನೆಗೆ ಕಡ್ಡಾಯವಾಗಿ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕವು ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ತಡೆಯಲು ಕಾನೂನಾತ್ಮಕವಾಗಿ ಹೆಜ್ಜೆ ಇಡಲು ನೆರೆ ರಾಜ್ಯ ತಂತ್ರ ರೂಪಿಸುತ್ತಿದೆ.
ತಮಿಳುನಾಡಿನ ಕ್ಯಾತೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ. ಶಿವಕುಮಾರ್, “ಮೇಕೆದಾಟು ಯೋಜನೆ ಕೇವಲ ನನಗೆ ಅಥವಾ ಕರ್ನಾಟಕಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಇಡೀ ದಕ್ಷಿಣ ಭಾರತದ ಹೆಮ್ಮೆಯ ಯೋಜನೆಯಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ವಾರ್ಷಿಕವಾಗಿ ಹರಿಸಬೇಕಾದ 177.25 ಟಿಎಂಸಿ ನೀರನ್ನು ಬಿಡಲು ಕರ್ನಾಟಕ ಎಂದಿಗೂ ಬದ್ಧವಾಗಿದೆ. ವಾಸ್ತವವಾಗಿ, ಈ ಸಮತೋಲನ ಜಲಾಶಯದಿಂದ (Balancing Reservoir) ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಅನುಕೂಲ ಮತ್ತು ಲಾಭವಾಗಲಿದೆ ಎಂದು ಡಿಕೆಶಿ ವಿವರಿಸಿದ್ದಾರೆ.
ಈ ಯೋಜನೆಯ ನೀರನ್ನು ಕೃಷಿ ಅಥವಾ ಯಾವುದೇ ನೀರಾವರಿ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಮತ್ತು ಒಂದು ಬಕೆಟ್ ನೀರನ್ನೂ ಬೇರೆಡೆಗೆ ಹರಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬೆಂಗಳೂರು ನಗರದ ಜನಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ನಮಗೆ ಕೃಷ್ಣಾ ನದಿಯಿಂದ ನೀರು ತರಲು ಸಾಧ್ಯವಿಲ್ಲ, ಕಾವೇರಿಯೇ ಬೆಂಗಳೂರಿಗೆ ಏಕೈಕ ಆಧಾರ. ಹಾಗಾಗಿ ಬೆಂಗಳೂರಿನ ಜನರ ಕುಡಿಯುವ ನೀರಿನ ಅಗತ್ಯತೆಗಾಗಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಈ ಮೇಕೆದಾಟು ಯೋಜನೆ ಅತ್ಯಗತ್ಯ ಎಂದು ತಿಳಿಸಿದ್ದಾರೆ.








