ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದಿದ್ದ ಯುವತಿ ಪುಷ್ಪಲತಾ ಎಂಬಾಕೆಯ ಬರ್ಬರ ಕೊಲೆ ಪ್ರಕರಣವನ್ನು ಜಿಲ್ಲಾ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ. ದರೋಡೆಕೋರರು ನುಗ್ಗಿ ಕೊಲೆ ಮಾಡಿದ್ದಾರೆ ಎಂದು ನಂಬಿಸಲು ಯತ್ನಿಸಿದ್ದ ನಾಟಕವನ್ನು ಬಯಲು ಮಾಡಿರುವ ಪೊಲೀಸರು, ಹಣಕ್ಕಾಗಿ ಸ್ವಂತ ನಾದಿನಿ ಹಾಗೂ ಆಕೆಯ ಸೋದರ ಸಂಬಂಧಿಯೇ ಸೇರಿ ಈ ಕೃತ್ಯ ಎಸಗಿರುವುದನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೃತ್ಯದ ಹಿನ್ನೆಲೆ ಮತ್ತು ದರೋಡೆ ನಾಟಕ
ಮೇ 28ರ ರಾತ್ರಿ ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ಬಳಿಯ ಬಾಪೂಜಿ ನಗರದಲ್ಲಿ ಮೇಸ್ತ್ರಿ ನರಸಿಂಹಮೂರ್ತಿ ಎಂಬುವರ ಸೊಸೆ ಪುಷ್ಪಲತಾ (22) ಅವರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹಂತಕರು ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಮತ್ತು ಕಿವಿಯೋಲೆಯನ್ನು ದೋಚಿ ಪರಾರಿಯಾಗಿದ್ದರು. ಅಲ್ಲದೆ, ಪುಷ್ಪಲತಾ ಪಕ್ಕದಲ್ಲೇ ಮಲಗಿದ್ದ ನಾದಿನಿ ಭವ್ಯಾಳ ಬಾಯಿಗೆ ಬಟ್ಟೆ ತುರುಕಿ, ಮುಖಕ್ಕೆ ಸ್ಪ್ರೇ ಹೊಡೆದು ದರೋಡೆಕೋರರು ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಲಾಗಿತ್ತು. ಅಸ್ವಸ್ಥಗೊಂಡಂತೆ ನಟಿಸಿದ್ದ ಭವ್ಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಪೊಲೀಸರು ಇದನ್ನು ದರೋಡೆ ಪ್ರಕರಣ ಎಂದೇ ಭಾವಿಸಿದ್ದರು.
ಹೆತ್ತವರ ಆರೋಪ ಮತ್ತು ತನಿಖೆ ತಿರುವು
ಮಗಳು ಕೊಲೆಯಾದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪುಷ್ಪಲತಾ ಪೋಷಕರಾದ ಮಹೇಶ್ ಮತ್ತು ಲಕ್ಷ್ಮಿ, ಇದು ದರೋಡೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದರು. ಅಳಿಯನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಸುಪಾರಿ ಕೊಟ್ಟು ಮಗಳನ್ನು ಕೊಲ್ಲಿಸಲಾಗಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾದಿನಿ ಭವ್ಯಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಬ್ಲ್ಯಾಕ್ಮೇಲ್ ಮತ್ತು ಹತ್ಯೆಯ ಮಾಸ್ಟರ್ ಪ್ಲಾನ್
ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಂತೆ, ನಾದಿನಿ ಭವ್ಯಾ ತನ್ನ ಬಾಯ್ಫ್ರೆಂಡ್ ಜೊತೆಗಿದ್ದ ಖಾಸಗಿ ಕ್ಷಣಗಳ ವಿಡಿಯೋ ಆಕೆಯ ಸೋದರ ಸಂಬಂಧಿ, ಹೊಸಕೋಟೆಯ ಲೋಹಿತ್ ಕುಮಾರ್ ಅಲಿಯಾಸ್ ಲೂಲ್ ಯಾದವ್ ಎಂಬಾತನ ಕೈಸೇರಿತ್ತು. ಈ ವಿಡಿಯೋ ಇಟ್ಟುಕೊಂಡು ಆಕೆಗೆ ಬ್ಲ್ಯಾಕ್ಮೇಲ್ ಮಾಡಿದ್ದ ಲೋಹಿತ್ ಈಗಾಗಲೇ 4 ಲಕ್ಷ ರೂ. ಹಣ ಕಿತ್ತಿದ್ದ, ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ವಿಷಯ ಭವ್ಯಾಳ ತಾಯಿ ವಿಜಯಲಕ್ಷ್ಮಿಗೂ ಗೊತ್ತಿತ್ತು. ಲೋಹಿತ್ಗೆ ಕೊಡಲು ಹಣವಿಲ್ಲದ ಕಾರಣ, ಸೊಸೆ ಪುಷ್ಪಲತಾಳ ಮಾಂಗಲ್ಯ ಸರ ಹಾಗೂ ಒಡವೆಗಳನ್ನು ದೋಚಲು ತಾಯಿ-ಮಗಳು ಸ್ಕೆಚ್ ಹಾಕಿದ್ದರು.
ಪ್ಲಾನ್ ಮುಚ್ಚಿಡಲು ದೇವಸ್ಥಾನಕ್ಕೆ ಹೋದ ಕುಟುಂಬ
ಯಾರಿಗೂ ಸಂಶಯ ಬಾರದಿರಲಿ ಎಂದು ಭವ್ಯಾಳ ತಾಯಿ ವಿಜಯಲಕ್ಷ್ಮಿ, ತನ್ನ ಗಂಡ ನರಸಿಂಹಮೂರ್ತಿ ಹಾಗೂ ಮಗ ಭರತ್ನನ್ನು ಕರೆದುಕೊಂಡು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದಳು. ಇತ್ತ ಪುಷ್ಪಲತಾ ಮತ್ತು ಪತಿ ಭರತ್ ಪ್ರತ್ಯೇಕವಾಗಿ ವಾಸವಾಗಿದ್ದರೂ, ಪತಿಯ ಕುಟುಂಬದವರು ಊರಲ್ಲಿಲ್ಲದ ಕಾರಣ ಪುಷ್ಪಲತಾ ಅಂದು ರಾತ್ರಿ ಅತ್ತೆ ಮನೆಗೆ ಬಂದು ಮಲಗಿದ್ದಳು. ಇದೇ ಸಮಯವನ್ನು ಕಾಯುತ್ತಿದ್ದ ಭವ್ಯಾ, ಲೋಹಿತ್ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮೇ 28ರ ರಾತ್ರಿ ಮನೆಗೆ ಬಂದ ಲೋಹಿತ್ ಮಲಗಿದ್ದ ಪುಷ್ಪಲತಾಳನ್ನು ದಿಂಬಿನಿಂದ ಉಸಿರುಗಟ್ಟಿಸಿ, ಬಳಿಕ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಒಡವೆಗಳೊಂದಿಗೆ ಪರಾರಿಯಾಗಿದ್ದ.
ಆರೋಪಿಗಳ ಬಂಧನ
ಕೊಲೆಯ ನಂತರ ಆರೋಪಿ ಭವ್ಯಾ ತಾನೇ ಸಂತ್ರಸ್ತೆ ಎಂಬಂತೆ ನಟಿಸಲು ಬಟ್ಟೆ ಹರಿದುಕೊಂಡು, ಮೂರ್ಛೆ ಹೋದವಳಂತೆ ನಾಟಕವಾಡಿದ್ದಳು. ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಭವ್ಯಾ ಹಾಗೂ ಲೋಹಿತ್ ಕುಮಾರ್ನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯದಲ್ಲಿ ಮೃತಳ ಪತಿ ಭರತ್ ಮತ್ತು ಮಾವ ನರಸಿಂಹಮೂರ್ತಿ ಪಾತ್ರ ಇಲ್ಲ ಎಂದು ತಿಳಿದುಬಂದಿದ್ದು, ಕೊಲೆಗೆ ಸಾಥ್ ನೀಡಿದ ಅತ್ತೆ ವಿಜಯಲಕ್ಷ್ಮೀಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.








