ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ಬರೋಬ್ಬರಿ 56,432 ಸರ್ಕಾರಿ ಹುದ್ದೆಗಳ ತುರ್ತು ನೇಮಕಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯು ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಮತ್ತು ಒಳ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸಲು 400 ರೋಸ್ಟರ್ ಬಿಂದುಗಳನ್ನು (Roster Points) ಅನುಸರಿಸಲು ಸರ್ಕಾರ ತೀರ್ಮಾನಿಸಿದೆ.
ಈ ಹಿಂದೆ ಇದ್ದ 100 ರೋಸ್ಟರ್ ಬಿಂದುಗಳ ಬದಲಾಗಿ, ಇನ್ನು ಮುಂದೆ 400 ರೋಸ್ಟರ್ ಬಿಂದುಗಳ ವಲಯಗಳಾಗಿ ವಿಂಗಡಿಸಿ ನೇಮಕಾತಿ ನಡೆಸಲಾಗುವುದು. 100 ಬಿಂದುಗಳ ಆಧಾರದಲ್ಲಿ ಒಳ ಮೀಸಲಾತಿ ಜಾರಿ ಕಠಿಣವಾಗಿದ್ದರಿಂದ ಈ ಬದಲಾವಣೆ ತರಲಾಗಿದೆ.2025ರ ಸೆಪ್ಟೆಂಬರ್ 3ರ ನಂತರ ಹೊರಡಿಸಲಾಗಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ (ಸ್ಪರ್ಧಾತ್ಮಕ ಪರೀಕ್ಷೆ ನಡೆದ ಪ್ರಕರಣಗಳನ್ನು ಹೊರತುಪಡಿಸಿ). ಹೊಸ ನಿಯಮಾವಳಿಗಳೊಂದಿಗೆ ಇವುಗಳಿಗೆ ಮರು ಅಧಿಸೂಚನೆ ಹೊರಡಿಸಲಾಗುವುದು.
ಒಳ ಮೀಸಲಾತಿ ಜಾರಿ: ಹೊಸ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಯ (SC) ಒಳ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಒಟ್ಟು ಶೇ.15 ರಷ್ಟು ಮೀಸಲಾತಿಯಲ್ಲಿ:
ಪರಿಶಿಷ್ಟ ಜಾತಿಯ ಪ್ರವರ್ಗ ‘ಎ’ ಗೆ ಶೇ. 5.25
ಪರಿಶಿಷ್ಟ ಜಾತಿಯ ಪ್ರವರ್ಗ ‘ಬಿ’ ಗೆ ಶೇ. 5.25
ಪರಿಶಿಷ್ಟ ಜಾತಿಯ ಪ್ರವರ್ಗ ‘ಸಿ’ ಗೆ ಶೇ. 4.50 ರಷ್ಟು ಒಳ ಮೀಸಲಾತಿ ಕಲ್ಪಿಸಲಾಗುವುದು.
ಬ್ಯಾಕ್ಲಾಗ್ ಹುದ್ದೆಗಳು: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.17 ರಿಂದ ಶೇ.24ಕ್ಕೆ ಹೆಚ್ಚಿಸಿರುವ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ, ಸದ್ಯಕ್ಕೆ SC ಗೆ ಶೇ. 2 ಮತ್ತು ST ಗೆ ಶೇ. 4 ರಷ್ಟು ಹುದ್ದೆಗಳನ್ನು ಬ್ಯಾಕ್ಲಾಗ್ ಹುದ್ದೆಗಳೆಂದು ಪರಿಗಣಿಸಿ ಕಾಯ್ದಿರಿಸಲಾಗುವುದು.
ನೇಮಕಾತಿ ಪ್ರಕ್ರಿಯೆ ಹೇಗೆ?
ನೇಮಕಾತಿಯಲ್ಲಿ ಕನಿಷ್ಠ 3ಕ್ಕಿಂತ ಕಡಿಮೆ ಹುದ್ದೆಗಳಿದ್ದಲ್ಲಿ ಒಳ ಮೀಸಲಾತಿ ಅನ್ವಯಿಸುವುದಿಲ್ಲ. ಅಂತಹ ಸಂದರ್ಭದಲ್ಲಿ SC ಪಟ್ಟಿಯಲ್ಲಿರುವ ಎಲ್ಲಾ 101 ಜಾತಿಗಳ ಅಭ್ಯರ್ಥಿಗಳು ಸ್ಪರ್ಧಿಸಲು ಮುಕ್ತ ಅವಕಾಶವಿರುತ್ತದೆ. ಒಂದು ವೇಳೆ ‘ಸಿ’ ಪ್ರವರ್ಗದ ಅಲೆಮಾರಿ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಆ ಹುದ್ದೆಗಳನ್ನು ಅದೇ ವರ್ಗದ ಇತರ ಜಾತಿಗಳಿಗೆ ನೀಡಲಾಗುವುದು.
ಈ ಕುರಿತು ಶೀಘ್ರದಲ್ಲೇ ಸಮಾಜ ಕಲ್ಯಾಣ ಇಲಾಖೆ ಮತ್ತು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯಿಂದ ಅಧಿಕೃತ ಆದೇಶ ಹಾಗೂ ಪರಿಷ್ಕೃತ ರೋಸ್ಟರ್ ಬಿಡುಗಡೆಯಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.








