ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ಇತ್ಯರ್ಥಪಡಿಸಿದ ಸುಮಾರು 100 ಕ್ಕೂ ಹೆಚ್ಚು ವಾಹನ ಅಪಘಾತ ಪ್ರಕರಣಗಳನ್ನು ವಿಶ್ಲೇಷಿಸಿದಾಗ, ಇಂತಹ ಪ್ರಕರಣಗಳು ನ್ಯಾಯಾಧಿಕರಣಗಳಲ್ಲಿ (MACT) ಸರಾಸರಿ 6 ವರ್ಷ ಮತ್ತು ಹೈಕೋರ್ಟ್ಗಳಲ್ಲಿ ಅಪೀಲುಗಳು ಸರಾಸರಿ 8 ವರ್ಷಗಳ ಕಾಲ ಬಾಕಿ ಉಳಿಯುತ್ತಿರುವುದು ಬೆಳಕಿಗೆ ಬಂದಿದೆ. “ಮೋಟಾರು ವಾಹನ ಕಾಯ್ದೆ 1988 ಸಂತ್ರಸ್ತರ ಒಳಿತಿಗಾಗಿ ತಂದಿರುವ ಕಾನೂನಾಗಿದೆ. ಆದರೆ ಇಷ್ಟು ದೀರ್ಘಾವಧಿಯ ವಿಳಂಬದಿಂದಾಗಿ ಅದರ ಮೂಲ ಉದ್ದೇಶವೇ ನಶಿಸಿಹೋಗುತ್ತಿದೆ” ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ವಿಳಂಬ ತಡೆಯಲು ಸುಪ್ರೀಂ ಕೋರ್ಟ್ ನೀಡಿರುವ ಪ್ರಮುಖ ನಿರ್ದೇಶನಗಳು:
-
ದಾಖಲೆಗಳ ಸಲ್ಲಿಕೆ ಕಡ್ಡಾಯ: ಅಪಘಾತ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಾಗಲೇ ಅರ್ಜಿದಾರರು ಅದಕ್ಕೆ ಪೂರಕವಾದ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ದಾಖಲೆಗಳಿಲ್ಲದೆ ಅರ್ಜಿ ಸಲ್ಲಿಸಿ, ನಂತರ ಸಾಕ್ಷ್ಯಗಳಿಗಾಗಿ ಪದೇ ಪದೇ ಮುಂದೂಡಿಕೆ (Adjournment) ಕೇಳುವುದರಿಂದ ವಿಳಂಬವಾಗುತ್ತಿದೆ. ಅದನ್ನು ತಡೆಯಲು ಕೋರ್ಟ್ ಈ ಕೆಳಗಿನ ನಿಯಮಗಳನ್ನು ಮಾಡಿದೆ:
-
ವಯಸ್ಸಿನ ಪುರಾವೆ: ಪರಿಹಾರದ ಮೊತ್ತ ನಿರ್ಧರಿಸಲು ವಯಸ್ಸು ಮುಖ್ಯವಾಗಿರುವುದರಿಂದ ವಯಸ್ಸಿನ ಪುರಾವೆ ಒದಗಿಸಬೇಕು (ಆದರೆ ಇದಕ್ಕೆ ಆಧಾರ್ ಕಾರ್ಡ್ ಪರಿಗಣಿಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ).
-
ಅಂಗವೈಕಲ್ಯದ ಪ್ರಮಾಣಪತ್ರ: ಅಪಘಾತದಿಂದ ಅಂಗವೈಕಲ್ಯ ಉಂಟಾಗಿದ್ದರೆ, ಅರ್ಹ ವೈದ್ಯರಿಂದ ಪಡೆದ ಅಂಗವೈಕಲ್ಯದ ಶೇಕಡಾವಾರು ಪ್ರಮಾಣದ ಸರ್ಟಿಫಿಕೇಟ್ ನೀಡಬೇಕು.
-
ಆದಾಯದ ಪುರಾವೆ: ಮೃತರ ಅಥವಾ ಗಾಯಾಳುವಿನ ಆದಾಯದ ಆಧಾರದ ಮೇಲೆ ಪರಿಹಾರ ಕೋರುವಾಗ ಐಟಿ ರಿಟರ್ನ್ಸ್ (ITR), ಸ್ಯಾಲರಿ ಸ್ಲಿಪ್ ಅಥವಾ ಸಂಸ್ಥೆಯ ಅಧಿಕೃತ ಸೀಲು ಹಾಗೂ ಸಹಿ ಇರುವ ವೇತನ ಪ್ರಮಾಣಪತ್ರ ನೀಡಬೇಕು.
-
ವೈದ್ಯಕೀಯ ಬಿಲ್ಗಳು: ಚಿಕಿತ್ಸೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಅಥವಾ ಕ್ಲಿನಿಕ್ಗಳಿಂದ ದೃಢೀಕರಿಸಲ್ಪಟ್ಟ ಅಸಲಿ ಬಿಲ್ಗಳನ್ನು ಮಾತ್ರ ಸಲ್ಲಿಸಬೇಕು. ಸಹಾಯಕರ (Attendant) ವೆಚ್ಚ ಕೋರುವಾಗ ನೋಟರಿ ಮಾಡಿದ ಅಫಿಡವಿಟ್ ನೀಡಬೇಕು.
-
-
ಹಳೆಯ ಪ್ರಕರಣಗಳಿಗೆ ಮೊದಲ ಆದ್ಯತೆ: ಹೈಕೋರ್ಟ್ಗಳಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿರುವ ಅಪೀಲುಗಳನ್ನು ಅವುಗಳ ಸಲ್ಲಿಕೆಯ ವರ್ಷದ ಆಧಾರದ ಮೇಲೆ (ಹಿರಿತನದ ಮೇಲೆ) ಲಿಸ್ಟ್ ಮಾಡಬೇಕು ಎಂದು ಎಲ್ಲಾ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ವಿನಂತಿಸಿದೆ. 4 ವರ್ಷಕ್ಕಿಂತ ಹಳೆಯದಾದ ಪ್ರಕರಣಗಳಿಗೆ ಮೊದಲ ಆದ್ಯತೆ ನೀಡಬೇಕು. ಉದಾಹರಣೆಗೆ 8 ವರ್ಷದ ಹಳೆಯ ಪ್ರಕರಣವಿದ್ದರೆ, ಅದಕ್ಕೆ 4 ವರ್ಷದ ಪ್ರಕರಣಕ್ಕಿಂತ ಮೊದಲು ವಿಚಾರಣೆಯ ಅವಕಾಶ ನೀಡಬೇಕು.
-
ಹೆಚ್ಚುವರಿ ಪೀಠಗಳ ಸ್ಥಾಪನೆ: ಹೈಕೋರ್ಟ್ಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಬಾಕಿ ಇದ್ದರೆ, ಇವುಗಳ ವಿಲೇವಾರಿಗಾಗಿಯೇ ಹೆಚ್ಚುವರಿ ನ್ಯಾಯಪೀಠಗಳನ್ನು (Benches) ರಚಿಸುವ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಸೂಚಿಸಲಾಗಿದೆ.
-
ಸಂಕ್ಷಿಪ್ತ ವಿಚಾರಣಾ ವಿಧಾನ (Summary Procedure): ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 169 ರ ಅಡಿಯಲ್ಲಿ ಲಭ್ಯವಿರುವ ‘ಸಂಕ್ಷಿಪ್ತ ವಿಚಾರಣಾ ವಿಧಾನ’ವನ್ನು ನ್ಯಾಯಾಧಿಕರಣಗಳು ಹೆಚ್ಚಾಗಿ ಬಳಸಬೇಕು. ಒಂದು ವೇಳೆ ಈ ಸರಳ ವಿಧಾನವನ್ನು ಬಳಸದೆ ಸಾಮಾನ್ಯ ಸುದೀರ್ಘ ವಿಚಾರಣೆ ನಡೆಸಲು ನಿರ್ಧರಿಸಿದರೆ, ಅದಕ್ಕೆ ಸೂಕ್ತ ಕಾರಣಗಳನ್ನು ನ್ಯಾಯಾಧಿಕರಣಗಳು ಲಿಖಿತವಾಗಿ ದಾಖಲಿಸಬೇಕು.
20 ವರ್ಷಗಳ ವಿಳಂಬಕ್ಕೆ ಕೋರ್ಟ್ ಆಶ್ಚರ್ಯ!
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ 2004 ರಲ್ಲಿ ಸಲ್ಲಿಕೆಯಾಗಿದ್ದ ಅಪೀಲು ಪ್ರಕರಣವೊಂದು 2024 ರ ಕೊನೆಯಲ್ಲಿ (ಅಂದರೆ ಬರೋಬ್ಬರಿ 20 ವರ್ಷಗಳ ನಂತರ) ತೀರ್ಪು ಪಡೆದುಕೊಂಡಿದ್ದನ್ನು ನೋಡಿ ಸುಪ್ರೀಂ ಕೋರ್ಟ್ ದಿಗ್ಭ್ರಮೆ ವ್ಯಕ್ತಪಡಿಸಿತು. 2011 ರಲ್ಲಿ ಹೈಕೋರ್ಟ್ನಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಸಾವಿರಾರು ಫೈಲ್ಗಳು ಸುಟ್ಟುಹೋಗಿದ್ದರಿಂದ ವಿಳಂಬವಾಗಿದೆ ಎಂದು ಹೇಳಲಾಯಿತಾದರೂ, “ಕೋರ್ಟ್ ಫೈಲ್ ಒಂದನ್ನು ಮರುರೂಪಿಸಲು (Reconstruction) 14 ವರ್ಷಗಳು ಬೇಕೇ?” ಎಂದು ಸುಪ್ರೀಂ ಕೋರ್ಟ್ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿತು.
“ದುರಂತದಲ್ಲಿ ಮಡಿದ ವ್ಯಕ್ತಿಯ ನಷ್ಟವನ್ನು ಹಣದಿಂದ ತುಂಬಲು ಸಾಧ್ಯವಿಲ್ಲದಿದ್ದರೂ, ನ್ಯಾಯಯುತ ಪರಿಹಾರವನ್ನು ಸಕಾಲದಲ್ಲಿ ನೀಡುವುದು ಅತ್ಯಗತ್ಯ. ಪರಿಹಾರ ಸಿಗಲು 20 ವರ್ಷಗಳು ಬೇಕಾದರೆ, ಸಂತ್ರಸ್ತರ ಕುಟುಂಬದ ನೋವು ಮತ್ತಷ್ಟು ಹೆಚ್ಚಾಗುತ್ತದೆ” ಎಂದು ಕೋರ್ಟ್ ಮಾರ್ಮಿಕವಾಗಿ ಹೇಳಿದೆ.








