ಬೆಂಗಳೂರು: ಬುಧವಾರದ ದಿನ ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವ ದಿನ. ಕನಕಪುರ ಬಂಡೆ, ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಅವರು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಕೋಟಿ ಕೋಟಿ ಒಡೆಯನಾಗಿ ಇಂದು ಸಿಎಂ ಗದ್ದುಗೆ ಏರುತ್ತಿರುವ ಇದೇ ಡಿ.ಕೆ. ಶಿವಕುಮಾರ್, ತಮ್ಮ ಆರಂಭಿಕ ದಿನಗಳಲ್ಲಿ ವಿದೇಶಕ್ಕೆ ಹೋಗಲು ಪಾಸ್ಪೋರ್ಟ್ ಶುಲ್ಕ ಕಟ್ಟಲಾಗದೆ ಕೊರಳಲ್ಲಿದ್ದ ಚಿನ್ನದ ಸರವನ್ನೇ ಅಡವಿಟ್ಟಿದ್ದರು ಎಂದರೆ ನೀವು ನಂಬಲೇಬೇಕು! ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿರುವ ಈ ಅಪರೂಪದ ರಾಜಕೀಯ ಫ್ಲ್ಯಾಶ್ಬ್ಯಾಕ್ ಇಲ್ಲಿದೆ.
1989ರಲ್ಲೇ ಶಿವಕುಮಾರ್ ಸಾಮರ್ಥ್ಯ ಗುರುತಿಸಿದ್ದ ರಾಜೀವ್ ಗಾಂಧಿ
ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಚಾತುರ್ಯ ಮತ್ತು ನಾಯಕತ್ವ ಗುಣ ಕೇವಲ ಇತ್ತೀಚಿನದ್ದಲ್ಲ. ಅವರಲ್ಲಿದ್ದ ಕಿಚ್ಚನ್ನು 1989ರಲ್ಲೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಗುರುತಿಸಿದ್ದರು.
ಅದು 1989ರ ಸಮಯ. ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಕಾಂಗ್ರೆಸ್ನ ಬೃಹತ್ ಸಮಾವೇಶವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಆಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಯುವ ನಾಯಕ ಶಿವಕುಮಾರ್, ತಮ್ಮ ಸಂಘಟನಾ ಬಲ ಪ್ರದರ್ಶಿಸಿ ಸಾವಿರಾರು ಜನರನ್ನು ಸಮಾವೇಶಕ್ಕೆ ಕರೆತಂದಿದ್ದರು. ಸಮಾವೇಶ ಮುಗಿಸಿ ದೆಹಲಿಗೆ ಹೊರಟಿದ್ದ ರಾಜೀವ್ ಗಾಂಧಿ, ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಯುವಕ ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಗುರುತಿಸಿ ಗಮನಿಸಿದ್ದರು.
ಪೊಲೀಸ್ ಕಮಿಷನರ್ ಕಚೇರಿಯಿಂದ ಬಂದ ಆ ಒಂದು ಕರೆ!
ರಾಜೀವ್ ಗಾಂಧಿ ದೆಹಲಿಗೆ ಮರಳಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಡಿ.ಕೆ. ಶಿವಕುಮಾರ್ ಅವರಿಗೆ ದಿಢೀರನೆ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಕರೆ ಬಂದಿತ್ತು.
“ಪ್ರಧಾನಿ ಕಚೇರಿಯಿಂದ (PMO) ನಮಗೆ ತುರ್ತು ಸೂಚನೆ ಬಂದಿದೆ. ನಿಮ್ಮ ಪಾಸ್ಪೋರ್ಟ್ ಮಾಡಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ತಕ್ಷಣ ತಂದು ಕೊಡಿ,” ಎಂದು ಪೊಲೀಸರು ತಿಳಿಸಿದ್ದರು.
ಆಗ ಪಾಸ್ಪೋರ್ಟ್ ಮಾಡಿಸಲು ₹3,000 ಶುಲ್ಕ ಪಾವತಿಸಬೇಕಿತ್ತು. ಆದರೆ ಆ ಸಮಯದಲ್ಲಿ ಯುವ ನಾಯಕ ಶಿವಕುಮಾರ್ ಕೈಯಲ್ಲಿ ಅಷ್ಟೊಂದು ಹಣವಿರಲಿಲ್ಲ. ಹೇಗಾದರೂ ಮಾಡಿ ದಾಖಲೆ ಸಲ್ಲಿಸಬೇಕೆಂಬ ಹಠಕ್ಕೆ ಬಿದ್ದ ಅವರು, ತಕ್ಷಣ ತಮ್ಮ ಕೊರಳಲ್ಲಿದ್ದ ಚಿನ್ನದ ಸರವನ್ನೇ ಅಡವಿಟ್ಟು, ಆ ಹಣವನ್ನು ಹೊಂದಿಸಿ ಶುಲ್ಕ ಪಾವತಿಸಿದ್ದರು! ವಿದೇಶದಲ್ಲಿ ನಡೆಯಲಿದ್ದ ಜಾಗತಿಕ ಯೂತ್ ಫೆಸ್ಟಿವಲ್ಗೆ (Youth Festival) ಪ್ರಧಾನಿ ರಾಜೀವ್ ಗಾಂಧಿ ಅವರೇ ನೇರವಾಗಿ ತಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬ ವಿಷಯ ಶಿವಕುಮಾರ್ಗೆ ತಿಳಿದಿದ್ದು ಆಮೇಲೆಯೇ.
ಐದು ಜನ ಸಂಸದರ ತಕರಾರು ತಳ್ಳಿಹಾಕಿದ್ದ ಪ್ರಧಾನಿ
ಶಿವಕುಮಾರ್ ಬೆಳೆಯುತ್ತಿರುವುದನ್ನು ಕಂಡು ಅಂದೇ ಕಾಂಗ್ರೆಸ್ನೊಳಗಿನ ಕೆಲವು ನಾಯಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ರಾಜೀವ್ ಗಾಂಧಿ ಅವರನ್ನು ಭೇಟಿಯಾಗಿದ್ದ ರಾಜ್ಯದ ಐದು ಜನ ಪ್ರಭಾವಿ ಸಂಸದರು, “ಶಿವಕುಮಾರ್ಗೆ ಚಾಕು-ಚೂರಿ ಹಿಡಿಯುವ ರೌಡಿ ಹಿನ್ನೆಲೆ ಇದೆ. ಇಂತಹವರನ್ನು ಪಕ್ಷದಲ್ಲಿ ಬೆಳೆಸಿದರೆ ಮುಂದೆ ಸರಿಯಾಗುವುದಿಲ್ಲ,” ಎಂದು ಕಿವಿಯೂದಿದ್ದರು.
ಆದರೆ ರಾಜೀವ್ ಗಾಂಧಿ ಆ ಸಂಸದರ ಮಾತಿಗೆ ಮಣಿಯಲಿಲ್ಲ. “ಯಾರೋ ಮಾಡಿದ ತಪ್ಪುಗಳಿಗೆಲ್ಲಾ ಈ ಯುವಕನನ್ನು ಹೊಣೆ ಮಾಡುವುದು ಬೇಡ,” ಎಂದು ಸಂಸದರ ತಕರಾರನ್ನು ಸ್ಥಳದಲ್ಲೇ ತಳ್ಳಿಹಾಕಿದ್ದರು.
ಅಂದು ಸ್ವಪಕ್ಷದವರೇ ಕಾಲೆಳೆಯಲು ನೋಡಿದರೂ, ರಾಜೀವ್ ಗಾಂಧಿ ತೋರಿದ ಆ ನಂಬಿಕೆಯೇ ಇಂದು ಡಿ.ಕೆ. ಶಿವಕುಮಾರ್ ಅವರನ್ನು ದೇಶದ ಗಮನ ಸೆಳೆಯುವ ನಾಯಕನನ್ನಾಗಿ ಮಾಡಿದೆ. ಅಂದು ₹3,000 ಸಾಲಕ್ಕಾಗಿ ಚಿನ್ನದ ಸರ ಅಡವಿಟ್ಟಿದ್ದ ಅದೇ ನಾಯಕ, ಇಂದು ಇಡೀ ಕರ್ನಾಟಕದ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿಯಾಗುತ್ತಿರುವುದು ವಿಧಿಯ ಲಿಖಿತ ಮತ್ತು ಅವರ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವೇ ಸರಿ.








