ಮಂಡ್ಯ : ಸೋಮನಹಳ್ಳಿ ಮತ್ತು ಗೆಜ್ಜಲಗೆರೆಯ ವಿವಿಧ ಕೈಗಾರಿಕೆಗಳ ಸಿಎಸ್ಆರ್ ನಿಧಿಯಿಂದ ವಿವಿಧ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.
ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಿವಂ ಮತ್ತು ಶಿವಶಕ್ತಿ ಪ್ಲೈವುಡ್ ಕಂಪನಿಗಳ ಸಿಎಸ್ಆರ್ ನಿಧಿಯಿಂದ ಮದ್ದೂರು ನಗರಸಭೆ ಕಛೇರಿಗೆ ಕಂಪ್ಯೂಟರ್ ಗಳನ್ನು ಹಸ್ತಾಂತರ ಮಾಡಿ ಮಾತನಾಡಿದರು.
ಗೆಜ್ಜಲಗೆರೆ ಮತ್ತು ಸೋಮನಹಳ್ಳಿ ಕೈಗಾರಿಕಾ ಪ್ರದೇಶಗಳನ್ನು ಮದ್ದೂರು ನಗರಸಭಾ ವ್ಯಾಪ್ತಿಗೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೈಗಾರಿಕಾ ಪ್ರದೇಶಗಳನ್ನು ಅಂದಾಜು 15 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ರಸ್ತೆ, ಚರಂಡಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.
ಈಗಾಗಲೇ ತಾಲೂಕಿನ ಕೈಗಾರಿಕೋದ್ಯಮಿಗಳ ಸಭೆಯನ್ನು ಆಯೋಜಿಸಿ ಅವರಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಸಹಕಾರವು ಅತ್ಯಗತ್ಯವಾಗಿದ್ದು, ಹೀಗಾಗಿ ಸಿಎಸ್ಆರ್ ನಿಧಿಯಿಂದ ವಿವಿಧ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಲಾಗಿತ್ತು. ಹೀಗಾಗಿ ಶಿವಂ ಮತ್ತು ಶಿವಶಕ್ತಿ ಪ್ಲೈವುಡ್ ಕಂಪನಿಗಳು ನಗರಸಭೆ ಕಛೇರಿಗೆ ಕಂಪ್ಯೂಟರ್ ಗಳನ್ನು ವಿತರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಸ್ಥೆಗಳಿಂದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಘಟಕ ಹಾಗೂ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಇನ್ನು ತಾಲೂಕಿನ ಎರಡು ಕಡೆ ಬೃಹತ್ ಕೈಗಾರಿಕಾ ಪ್ರದೇಶವಿದ್ದು, ರಾಜ್ಯದ ಉದ್ಯಮಿಗಳು ಕೈಗಾರಿಕೆಗಳ ನಿರ್ಮಾಣ ಮಾಡುವುದಾದರೆ ನಮ್ಮ ಸರ್ಕಾರ ಮೂಲಭೂತ ಸೌಕರ್ಯದ ಜೊತೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಉದಯ್ ತಿಳಿಸಿದರು.
ಇದೇ ವೇಳೆ ಉದ್ಯಮಿಗಳಾದ ದರ್ಶನ್ ಪಟೇಲ್, ಹಿತೇಶ್ ಪಟೇಲ್, ನಗರಸಭಾ ಪೌರಾಯುಕ್ತೆ ರಾಧಿಕಾ, ವ್ಯವಸ್ಥಾಪಕ ಶ್ರೀಧರ್, ಪರಿಸರ ಅಭಿಯಂತರ ಅರ್ಚನಾ, ರಾಜಸ್ವ ನಿರೀಕ್ಷಕರಾದ ಪುಟ್ಟಸ್ವಾಮಿ, ಲೋಕೇಶ್, ಆರೋಗ್ಯ ನಿರೀಕ್ಷಕ ಕೀರ್ತಿ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








