ಮಂಡ್ಯ : ಕಳೆದ ವರ್ಷ ಮಂಡ್ಯ ಮೈಸೂರು ಭಾಗದಲ್ಲಿ ಭ್ರೂಣಲಿಂಗ ಪತ್ತೆ & ಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಮಂಡ್ಯದಲ್ಲಿ ಮತ್ತೆ ಭ್ರೂಣಲಿಂಗ ಪತ್ತೆಗಾಗಿ ಬಾಲ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪೊಲೀಸರು ಮೂವರು ವೈದ್ಯರನ್ನು ಇದೀಗ ಅರೆಸ್ಟ್ ಮಾಡಿದ್ದಾರೆ.
ಹೌದು ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡಿದ ಮೂವರು ವೈದ್ಯರನ್ನು ಬಂಧಿಸಲಾಗಿದೆ. ಕೆ ಆರ್ ಪೇಟಿಯ ಚೇತನ ಮೆಟರ್ನಿಟಿ ಸೆಂಟರ್ ನ ದಿವ್ಯ ಚೇತನ್, ಕೆಆರ್ ಪೇಟೆ ನಾವಿ ಡಯಾಗ್ನೋಸ್ಟಿಕ್ ಸೆಂಟರ್ ನ ಹರ್ಷಿತ್, ಹಾಗೂ ಕುಶಲ್ ಡಯಾಗ್ನೋಸ್ಟಿಕ್ ಸೆಂಟರ್ ಹರೀಶ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಇನ್ನು ತಲೆಮರಿಸಿಕೊಂಡ ಸ್ತ್ರೀರೋಗ ತಜ್ಞೆ ಪ್ರಿಯಾಂಕಾಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕೆ.ಆರ್ ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಠಾಣೆಯಲ್ಲಿ 12 ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಸರ್ಕಾರಿ ವೈದ್ಯ ಮೂವರು ಖಾಸಗಿ ವೈದ್ಯರು ಆಶಾ ಕಾರ್ಯಕರ್ತೆ ಕಿರಿಯ ಆರೋಗ್ಯ ಸಹಾಯಕಿ ಸೇರಿದಂತೆ ಖಾಸಗಿ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಲೋಕಾಯುಕ್ತ ದಾಳಿ ನಡೆಸಿತ್ತು. ಕೆಆರ್ ಪೇಟೆ 2 ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿತ್ತು.
ನಾವಿ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಒಟ್ಟು 24 ಜನರಿಗೆ ಸ್ಕ್ಯಾನಿಂಗ್ ಮಾಡಲಾಗಿದೆ. 20204 ರಲ್ಲಿ 17 ಜನ 2025 ರಲ್ಲಿ ಐವರು ಬಾಲ ಗರ್ಭಿಣಿಯರಿಗೆ ಈ ಒಂದು ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಸ್ಕ್ಯಾನಿಂಗ್ ಮಾಡಲಾಗಿತ್ತು. ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 7 ಮಂದಿಗೆ ಸ್ಕ್ಯಾನಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಮೂವರನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಮತ್ತು ಬಂಧನ
-
ಬಂಧಿತರು: ಕೆ.ಆರ್. ಪೇಟೆಯ ಖಾಸಗಿ ಆಸ್ಪತ್ರೆ ಮತ್ತು ಡಯಾಗ್ನಾಸ್ಟಿಕ್ ಸೆಂಟರ್ಗಳ ಮೂವರು ವೈದ್ಯರನ್ನು ಬಂಧಿಸಲಾಗಿದೆ.
-
ಆರೋಪ: 31ಕ್ಕೂ ಹೆಚ್ಚು ಅಪ್ರಾಪ್ತ (ಬಾಲ) ಗರ್ಭಿಣಿಯರಿಗೆ ಭ್ರೂಣಲಿಂಗ ಪತ್ತೆಗಾಗಿ ಅಕ್ರಮವಾಗಿ ಸ್ಕ್ಯಾನಿಂಗ್ ಮಾಡಿದ ಗಂಭೀರ ಆರೋಪ ಇವರ ಮೇಲಿದೆ.
-
ದಾಳಿ: ಮಂಜುನಾಥ ಎಂಬುವವರು ನೀಡಿದ ದೂರಿನ ಮೇರೆಗೆ, ಉಪಲೋಕಾಯುಕ್ತರ ಆದೇಶದಂತೆ ಮಂಡ್ಯ, ಮೈಸೂರು ಮತ್ತು ರಾಮನಗರ ಲೋಕಾಯುಕ್ತ ಪೊಲೀಸರ 9 ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದ್ದವು.
ತನಿಖೆಯಲ್ಲಿ ಬಯಲಾದ ಆಘಾತಕಾರಿ ಅಂಶಗಳು
-
ಪೋಕ್ಸೋ (POCSO) ಕಾಯ್ದೆ ಉಲ್ಲಂಘನೆ: ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭಿಣಿಯರಾಗಿ ಸ್ಕ್ಯಾನಿಂಗ್ಗೆ ಬಂದಾಗ ಪೋಕ್ಸೋ ಕಾಯ್ದೆಯಡಿ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಈ ವೈದ್ಯರು ಹಣದ ಆಸೆಗಾಗಿ ಇದನ್ನು ಮುಚ್ಚಿಟ್ಟಿದ್ದರು.
-
ದಾಖಲೆಗಳ ನಾಪತ್ತೆ: ‘ಕುಶಾಲ್ ಡಯಾಗ್ನಾಸ್ಟಿಕ್ ಸೆಂಟರ್’ನಲ್ಲಿ ಸುಮಾರು 10,101 ಸ್ಕ್ಯಾನಿಂಗ್ಗಳ ಪೈಕಿ ಕೇವಲ 3,629 ಪ್ರಕರಣಗಳ ಮಾಹಿತಿ ಮಾತ್ರ ದಾಖಲಾಗಿದ್ದು, ಉಳಿದ 6,000ಕ್ಕೂ ಹೆಚ್ಚು ಸ್ಕ್ಯಾನಿಂಗ್ಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿರುವುದು ಪತ್ತೆಯಾಗಿದೆ.
-
ವೈದ್ಯರ ಶಾಮೀಲು: ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿದ್ದರೂ, ಅಲ್ಲಿನ ಕೆಲವು ವೈದ್ಯರು ಕಮಿಷನ್ ಆಸೆಗಾಗಿ ಗರ್ಭಿಣಿಯರನ್ನು ಈ ಅಕ್ರಮ ಖಾಸಗಿ ಕೇಂದ್ರಗಳಿಗೆ ಶಿಫಾರಸು ಮಾಡುತ್ತಿದ್ದರು ಎಂಬುದು ಲೋಕಾಯುಕ್ತ ವರದಿಯಿಂದ ತಿಳಿದುಬಂದಿದೆ.








