ಬೆಂಗಳೂರು : ಅರಣ್ಯ, ಪ್ರಕೃತಿ, ಪರಿಸರ ಉಳಿಯದಿದ್ದರೆ ಮಾನವ ಕುಲವೇ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಈ ಜವಾಬ್ದಾರಿಯನ್ನು ಶುದ್ಧ ಅಂತಃಕರಣದಿಂದ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಅರಣ್ಯ ಸಚಿವರಾಗಿದ್ದ ತಮಗೆ ಕೃತಜ್ಞತೆ ಸಲ್ಲಿಸಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಲಯ ಅರಣ್ಯಾಧಿಕಾರಿಗಳಿಂದ ಗೌರವವಂದನೆ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು, ವನ್ಯಜೀವಿ ಸಂರಕ್ಷಣೆ, ಅರಣ್ಯ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಹೊಣೆ ಹೊತ್ತಿರುವ ನೀವು ಎಚ್ಚರ ತಪ್ಪದಂತೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಈಗ ಅರಣ್ಯ ಖಾತೆ ಸಚಿವನಲ್ಲದಿದ್ದರೂ ನನ್ನ ಮೇಲೆ ಅಭಿಮಾನವಿಟ್ಟು ಅಭಿನಂದಿಸಲು ಆಗಮಿಸಿರುವ ತಮ್ಮೆಲ್ಲರ ಅಭಿಮಾನದಿಂದ ಹೃದಯ ತುಂಬಿಬಂದಿದೆ. ನೀವು ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಅರಣ್ಯ, ವನ್ಯಜೀವಿ ಸಂರಕ್ಷಣೆ ಮಾಡಿದರೆ ಅದುವೇ ನೀವು ನನಗೆ ತೋರುವ ಅಭಿಮಾನ ಎಂದು ತಿಳಿಸಿದರು.
ಇರುವುದೊಂದೇ ಭೂಮಿ, ಇದನ್ನು ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂದು ಅರಣ್ಯ, ಹಸಿರುಹೊದಿಕೆ ಉಳಿದಿದೆ ಎಂದರೆ ಅದಕ್ಕೆ ಗಸ್ತು ನಡೆಸುವ, ವನ್ಯಜೀವಿ ಹಿಮ್ಮೆಟ್ಟಿಸುವ ಮುಂಚೂಣಿ ಸಿಬ್ಬಂದಿ ಮತ್ತು ಅಧಿಕಾರಿಗಳ ಶ್ರಮವೇ ಕಾರಣ ಎಂದರು.

ನೀವೆಲ್ಲರೂ ನಿಮ್ಮ ನಿಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸರ್ಕಾರಕ್ಕೆ ಮತ್ತು ನನಗೆ ಉತ್ತಮ ಹೆಸರು ತಂದಿದ್ದೀರಿ. ನೀವು ಮುಂದೆಯೂ ನಿಮ್ಮ ಜವಾಬ್ದಾರಿಯನ್ನು ದಕ್ಷತೆ, ಪ್ರಾಮಾಣಿಕತೆಯಿಂದ ಮಾಡಿ. ನಿಮಗೆ ಆತ್ಮತೃಪ್ತಿ ಲಭಿಸುತ್ತದೆ ಎಂದರು.
ಅರಣ್ಯ, ವನ್ಯಜೀವಿ ಸಂರಕ್ಷಣೆಯ ನಿಟ್ಟಿನಲ್ಲಿ ನಿಮ್ಮ ಕರ್ತವ್ಯಕ್ಕೆ ಯಾವುದೇ ತೊಡಕು ಉಂಟಾದರೂ ಸರ್ಕಾರ ನಿಮ್ಮ ಜೊತೆ ನಿಲ್ಲುತ್ತದೆ. ಅರಣ್ಯ ಇಲಾಖೆ ಮಾಜಿ ಸಚಿವನಾಗಿ ನಾನೂ ಕೂಡ ಸರ್ಕಾರದ ಜೊತೆ ನಿಮ್ಮ ಪರ ನಿಲ್ಲುತ್ತೇನೆ ಎಂದರು.

ಅರಣ್ಯ ಸಿಬ್ಬಂದಿ ಮಾತನಾಡಿ, ತಾವು ಹಲವು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಿಬ್ಬಂದಿಯ ಸಂಕಷ್ಟಕ್ಕೆ ಸ್ಪಂದಿಸುವ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಿಸಲು ಇಷ್ಟು ಕಾಳಜಿಯಿಂದ ಕಾರ್ಯನಿರ್ವಹಿಸಿದ ಸಚಿವರನ್ನು ನೋಡಿರಲಿಲ್ಲ. ನಿಮ್ಮ ಸ್ಪಂದನೆ, ನಿಮ್ಮ ಟಿಪ್ಪಣಿ ನಮಗೆ ಕೆಲಸ ಮಾಡಲು ಪ್ರೇರಣೆ ನೀಡುತ್ತಿತ್ತು. ನಿಮ್ಮ ಬೆಂಬಲದಿಂದಲೇ ಒತ್ತುವರಿ ತೆರವು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು. ಕೆಲವು ವಲಯ ಅರಣ್ಯಾಧಿಕಾರಿಗಳು ಭಾವುಕರಾಗಿ ಕಣ್ಣೀರು ಸುರಿಸಿದರು.








