ಹಾಸನ : ಅಪರಿಚಿತ ವಾಹನ ದಿಕ್ಕಿ ಹೊಡೆದ ಪರಿಣಾಮ ಇಬ್ಬರು ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಬುಧವಾರ ಜಿಲ್ಲೆಯಲ್ಲಿ ನಡೆದಿದೆ. ಅರುಣ್ ಕುಮಾರ್ (26) ಪ್ರದೀಪ್ (23) ಮೃತ ಯುವಕರು. ಇವರನ್ನು ಅರಸೀಕೆರೆ ತಾಲೂಕು ಗಂಡಸಿ ಸಮೀಪದ ಕಾಳೆನಹಳ್ಳಿ ಗ್ರಾಮದ ಯುವಕರು ಎಂದು ಗುರುತಿಸಲಾಗಿದೆ.
ಈ ಘಟನೆಯಲ್ಲಿ ಬಿಹಾರ್ ಮೂಲದ ಸೂರಜ್ (40) ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಗಾಯಾಳು ಎಂದು ತಿಳಿದುಬಂದಿದೆ. ಕಾಳೆನಹಳ್ಳಿಯ ಇಬ್ಬರು ಯುವಕರು ಶುಂಠಿ ಕೃಷಿ ಕೆಲಸದ ನಿಮಿತ್ತ ನುಗ್ಗೆಹಳ್ಳಿಗೆ ಬಂದು ವಾಪಸ್ ಸ್ವಗ್ರಾಮಕ್ಕೆ ಹಿಂದಿರುಗುವ ಮಾರ್ಗಮಧ್ಯೆ ಎ. ಬೆಳಗುಲಿ ಗೇಟ್ ಹತ್ತಿರ ಅಪಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವಾಹನವೊಂದು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ದ್ವಿಚಕ್ರ ವಾಹನ ರಸ್ತೆ ಬದಿಗೆ ಬಿದ್ದಿದ್ದು, ಇಬ್ಬರ ತಲೆಗೆ ಬಲವಾಗಿ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಇಬ್ಬರಿಗೂ ಸ್ಥಳದಲ್ಲಿ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಂಭೀರವಾದ ಗಾಯಗೊಂಡಿದ್ದಾನೆ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಇನ್ನು ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








